ಮತ್ತೆ ಸಿದ್ದರಾಮಯ್ಯ ಸಿಎಂ, ಡಿಕೆ ಶಿವಕುಮಾರ್‌ ಡಿಸಿಎಂ

ನವದೆಹಲಿ: ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್‌ ನಡುವಿನ ಕುರ್ಚಿ ಕದನ ಬಹುತೇಕ ಅಂತ್ಯವಾಗಿದ್ದು, ಸಿದ್ದರಾಮಯ್ಯನವರಿಗೆ ಮುಖ್ಯಮಂತ್ರಿ ಸ್ಥಾನ ಸಿಗುವ ಸಾಧ್ಯತೆ ಹೆಚ್ಚಾಗಿದ್ದು, ಹೈಕಮಾಂಡನಿಂದ ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ.

ಮೂಲಗಳ ಪ್ರಕಾರ ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಸ್ಥಾನ, ಡಿಕೆ ಶಿವಕುಮಾರ್‌ ಅವರಿಗೆ ಪ್ರಬಲವಾದ ಎರಡು ಖಾತೆಗಳೊಂದಿಗೆ ಡಿಸಿಎಂ ಸ್ಥಾನ ನೀಡಲು ಎಐಸಿಸಿ ಮುಂದಾಗಿದೆ. ಅಷ್ಟೇ ಅಲ್ಲದೇ ಕೆಪಿಸಿಸಿ ಅಧ್ಯಕ್ಷರಾಗಿಯೇ ಡಿಕೆ ಶಿವಕುಮಾರ್‌ ಅವರೇ ಮುಂದುವರಿಯುವ ಸಾಧ್ಯತೆಯಿದೆ.

ಸಂಧಾನ ಸೂತ್ರ ಏನು?
ಹಟಕ್ಕೆ ಬಿದ್ದರೆ ಸಿಎಂ ಅವಕಾಶ ಬೇರೆಯವರ ಪಾಲಾಗುವ ಸಾಧ್ಯತೆ ಇರುವುದರಿಂದ ರಾಜಿ ಸಂಧಾನ ಮಾಡಿಕೊಂಡರೆ ಇಬ್ಬರಿಗೂ ಲಾಭ ಎಂಬದುನ್ನು ಹೈಕಮಾಂಡ್‌ ನಾಯಕರು ಡಿಕೆಶಿ ಮತ್ತು ಸಿದ್ದರಾಮಯ್ಯ ಅವರಿಗೆ ವಿವರಿಸಿದ್ದಾರೆ.

ಪೂರ್ಣಾವಧಿ ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿರುವ ಸಿದ್ದರಾಮಯ್ಯ 50:50 ಸೂತ್ರದ ಅಧಿಕಾರ ಹಂಚಿಕೆಗೆ ಸಿದ್ದರಿದ್ದಾರೆ. 2ವರ್ಷದ ಅವಧಿಗೆ ಸಿದ್ದರಾಮಯ್ಯ ಅವರನ್ನು ಸಿಎಂ ಮಾಡುವುದು ಮತ್ತು ಅವರ ನೇತೃತ್ವದಲ್ಲಿ ಲೋಕಸಭಾ ಚುನಾವಣೆ ಎದುರಿಸುವುದು.

ಲೋಕಸಭಾ ಚುನಾವಣೆಯ ನಂತರವೂ ಒಂದು ವರ್ಷ ಅವರನ್ನು ಮುಂದುವರಿಸಿ ಕೊನೆಯ ಮೂರು ವರ್ಷ ಡಿಕೆಗೆ ಸಿಎಂ ಪಟ್ಟ ನೀಡಿ 2028ರಲ್ಲಿ ಡಿಕೆಶಿ ಮೂಲಕ ಚುನಾವಣೆ ಎದುರಿಸುವ ಅವಕಾಶ ನೀಡಲು ಹೈಕಮಾಂಡ್‌ ಮುಂದಾಗಿದೆ. ಆ ಚುನಾವಣೆ ಗೆದ್ದರೆ ಡಿಕೆಶಿ ಮತ್ತೆ 5 ವರ್ಷ ಸಿಎಂ ಆಗಿ ಮುಂದುವರಿಯಬಹುದು ಎಂಬ ಸೂತ್ರವನ್ನು ಇಬ್ಬರು ನಾಯಕರ ಮುಂದಿಟ್ಟಿದೆ. ಈ ಸಂಧಾನ ಸೂತ್ರವೇ ಅಂತಿಮವಾಗಿದ್ದು ಇಬ್ಬರು ನಾಯಕರು ಒಪ್ಪುವ ಸಾಧ್ಯತೆಯಿದೆ..