ಗ್ಯಾರಂಟಿಗಳಿಗೆ ಷರತ್ತಲ್ಲ, ಮಾನದಂಡ: ಉಲ್ಟಾ ಹೊಡೆದ ಪರಮೇಶ್ವರ್‌

ಬೆಂಗಳೂರು: ಗ್ಯಾರಂಟಿ ಯೋಜನೆಗಳಿಗೆ ಷರತ್ತು ವಿಧಿಸಲಾಗುವುದು ಎಂದು ಮಂಗಳವಾರ ಹೇಳಿಕೆ ನೀಡಿದ್ದ ಮಾಜಿ ಡಿಸಿಎಂ ಪರಮೇಶ್ವರ್‌ ಇಂದು ಉಲ್ಟಾ ಹೊಡೆದಿದ್ದಾರೆ. ಷರತ್ತು ವಿಧಿಸುವುದಿಲ್ಲ ಕೆಲ ಮಾನದಂಡ ವಿಧಿಸಲಾಗುವುದು ಎಂದು ಹೇಳಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಗ್ಯಾರಂಟಿ ಘೋಷಣೆ ಮಾಡುವ ಮುನ್ನ ಹಣಕಾಸಿನ ಸ್ಥಿತಿಯನ್ನು ವರ್ಕೌಟ್ ಮಾಡಿದ್ದೇವೆ. ಅದಕ್ಕೆ ಬೇಕಾದ ಮಾನದಂಡ ರೂಪಿಸಬೇಕು. ಅ ಮಾನದಂಡ ರೂಪಿಸಿ ಜಾರಿ ಮಾಡುತ್ತೇವೆ ಎಂದು ಪರಮೇಶ್ವರ್ ತಿಳಿಸಿದ್ದಾರೆ.

ಈಗಾಗಲೇ ವಿಧವಾ ವೇತನ ಪಡೆಯುತ್ತಿರುವವರಿಗೆ 2 ಸಾವಿರ ಕೊಟ್ಟರೆ ಡಬಲ್ ಆಗುತ್ತದೆ. ಹೀಗೆ ಕೆಲವೊಂದು ವಿಚಾರಗಳಿವೆ. ಇವೆಲ್ಲವನ್ನು ವರ್ಕೌಟ್ ಮಾಡಿ ಜಾರಿ ಮಾಡಲಾಗುವುದು ಎಂದು ವಿವರಿಸಿದರು.

ಮಂಗಳವಾರ ಮಾಧ್ಯಮಗಳ ಜೊತೆ ಮಾತನಾಡಿದ ಪರಮೇಶ್ವರ್‌, ಆಯಾ ಇಲಾಖೆಯ ಸಚಿವರು ಕೂತು ಗ್ಯಾರಂಟಿ ಜಾರಿ ಮಾಡುವ ಬಗ್ಗೆ ಕೆಲಸ ಮಾಡುತ್ತೇವೆ. ಹಾಗೆಯೇ ನೀಡಿದರೆ ಸುಮ್ಮನೆ ಎಲ್ಲರೂ ತೆಗೆದುಕೊಳ್ಳುತ್ತಾರೆ. ಗ್ಯಾರಂಟಿಗಳಿಗೆ ಷರತ್ತುಗಳನ್ನು ನಿಗದಿ ಮಾಡಲಾಗುವುದು ಎಂದು ತಿಳಿಸಿದ್ದರು.