ಕಾರಿನಲ್ಲಿ ಸಾಗಿಸ್ತಿದ್ದ ಟೀ ಶರ್ಟ್ ಬಂಡಲ್ ಜಪ್ತಿ

ಬಾಗಲಕೋಟೆ: ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ಟೀ ಶರ್ಟ್ ಬಂಡಲ್ ಇದ್ದ ವಾಹನವನ್ನು ಪೊಲೀಸರು ಜಪ್ತಿ ಮಾಡಿರುವ ಘಟನೆ ಬಾಗಲಕೋಟೆ ನಗರದ ಬಸವೇಶ್ವರ ಸರ್ಕಲ್ ಬಳಿ ನಡೆದಿದೆ.

ನಗರದ ಬಸವೇಶ್ವರ್ ಸರ್ಕಲ್ ಬಳಿಯ ಪ್ರಭು ನಾರಾ ಎಂಬ ವ್ಯಾಪಾರಸ್ಥರ ಗೋದಾಮಿನಲ್ಲಿದ್ದ ಕಾರು ಒಂದರಲ್ಲಿ ಟೀಶರ್ಟ್ ಬಂಡಲ್ ಇರುವುದು ಪತ್ತೆಯಾಗಿದೆ. ನಾರಾ ಅವರು ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ನಿಕಟವರ್ತಿಯಾಗಿದ್ದು, ಮತದಾರರಿಗೆ ಟೀ ಶರ್ಟ್ ಉಡುಗೊರೆ ನೀಡಲು ತರಿಸಿದ್ದಾರೆಂದು ಆರೋಪಿಸಿ, ಕೇಸ್ ದಾಖಲಿಸುವಂತೆ ಆಗ್ರಹಿಸಿ ಕಾಂಗ್ರೆಸ್ ಹಾಗೂ ಪಕ್ಷೇತರ ಅಭ್ಯರ್ಥಿಯ ಬೆಂಬಲಿಗರು ಪ್ರತಿಭಟನೆ ನಡೆಸಿದರು.

ತಪಾಸಣೆ ನಡೆಸಿ ಅವರ ವಿರುದ್ಧ ದೂರು ದಾಖಲಿಸಿ ಎಂದು ಪೊಲೀಸರಿಗೆ ಆಗ್ರಹಿಸಿದರು. ಆದರೆ ಪ್ರಭು ನಾರಾ ಅವರು ಕಾರು ಕೀ ನೀಡದೇ ಕೆಲ ಹೊತ್ತು ಅಧಿಕಾರಿಗಳನ್ನ ಕಾಯಿಸಿ, ಹೈಡ್ರಾಮಾ ಸೃಷ್ಟಿಸಿದರು. ನಂತರ ಕಾರಿನಲ್ಲಿದ್ದ ಬಂಡಲ್‍ಗಳನ್ನ ಓಪನ್ ಮಾಡಿಸುವಂತೆ ಕೆಲ ಕಾರ್ಯಕರ್ತರು ಅಧಿಕಾರಿಗಳ ಎದುರೇ ಪ್ರತಿಭಟನೆ ನಡೆಸಿದಾಗ, ಕಾರ್ ಡೋರ್ ಓಪನ್ ಮಾಡಿಸಲಾಯಿತು. ಈ ವೇಳೆ ಕಾರಿನಲ್ಲಿದ್ದ ಟೀ ಶರ್ಟ್ ಮೇಲೆ ‘4’ ಸಂಖ್ಯೆ ಇರುವುದು ಬೆಳಕಿಗೆ ಬಂತು.