ಮೀನು ಮಾರುಕಟ್ಟೆ ಕುರಿತು ಪ.ಪಂ ಸಾಮಾನ್ಯ ಸಭೆಯಲ್ಲಿ ಬಿಸಿ ಬಿಸಿ ಚರ್ಚೆ

ಯಲ್ಲಾಪುರ: ಪಟ್ಟಣದ ಮೀನು ಮಾರುಕಟ್ಟೆಯ ಹೊರತಾಗಿ ಪಟ್ಟಣದ ವಿವಿಧೆಡೆ ಬೇಕಾಬಿಟ್ಟಿ ಮೀನು ಮಾರಾಟ ನಡೆಯುತ್ತಿದ್ದು, ಈ ಬಗ್ಗೆ ನಿರ್ದಾಕ್ಷಣ್ಯ ಕ್ರಮ ಕೈಗೊಳ್ಳಬೇಕೆಂದು ಪ.ಪಂ ಸದಸ್ಯ ರಾಧಾಕೃಷ್ಣ ನಾಯ್ಕ ಆಗ್ರಹಿಸಿದರು. ಅವರು ಸೋಮವಾರ ಪಟ್ಟಣ ಪಂಚಾಯತ್ ಸಭಾಭವನದಲ್ಲಿ ನಡೆದ ಪ.ಪಂ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಎಲ್ಲೆಂದರಲ್ಲಿ ಮೀನು ಮಾರಾಟ ಮಾಡುವುದರಿಂದ ನೈರ್ಮಲ್ಯ ಹಾಳಾಗುತ್ತಿದೆ. ಮೀನು ಮಾರಾಟಕ್ಕೆಂದೇ ನಿರ್ಮಾಣವಾದ ಮಾರುಕಟ್ಟೆಯಲ್ಲಿ ಬೇಕಾದಷ್ಟು ಸ್ಥಳಾವಕಾಶ ಇದ್ದು, ಅಲ್ಲೇ ಮೀನು ಮಾರಾಟ ನಡೆಯಬೇಕು ಎಂದು ಒತ್ತಾಯಿಸಿದರು. ಈ ವಿಷಯಕ್ಕೆ ಉಳಿದ ಕೆಲ ಸದಸ್ಯರು ಧ್ವನಿಗೂಡಿಸಿದರು.

ಈ ವಿಷಯಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಸಂಗನ ಬಸಯ್ಯ, ಒಬ್ಬೊಬ್ಬ ಸದಸ್ಯರು ಒಂದೊಂದು ನಿಲುವು ಹೊಂದಿದ್ದರೆ ಕ್ರಮ ತೆಗೆದುಕೊಳ್ಳುವುದು ಅಸಾಧ್ಯ. ಠರಾವು ಸ್ವೀಕರಿಸಿದರೆ ಕ್ರಮ ಕೈಗೊಳ್ಳಲಾಗುವುದೆಂದಾಗ ಎಲ್ಲ ಸದಸ್ಯರು ಕೈ ಎತ್ತಿ ಅನುಮೋದನೆ ಸೂಚಿಸಿದರು‌. ಅಲ್ಲದೇ ಈ ಕುರಿತು ಸಮೀಪದ ಗ್ರಾ.ಪಂ ಗಳಿಗೆ ಕ್ರಮ ಕೈಗೊಳ್ಳಲು ಪತ್ರ ಬರೆಯಲಾಗುವುದು ಎಂದು ಹೇಳಿದರು.

ಪ.ಪಂ ಅಧ್ಯಕ್ಷೆ ಸುನಂದಾ ದಾಸ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿವಿಧ ಟೆಂಡರ್ ಗಳಿಗೆ ವಿಶೇಷ ಚರ್ಚೆ ನಡೆಸದೇ ಅನುಮೋದನೆ ನೀಡಲಾಯಿತು. ಐಡಿಎಸ್ ಎಂಟಿ ಯೋಜನೆ ನಿರ್ಮಿಸಿದ ಅಂಗಡಿ ಮಳಿಗೆ ಹಾಗೂ 10 ನೇ ಹಣಕಾಸು ಯೋಜನೆಯಲ್ಲಿ ನಿರ್ಮಿಸಿ ಕಾಲಿ ಇರುವ ಅಂಗಡಿ ಮಳಿಗೆ ನವೀಕರಿಸಿ ಟೆಂಡರ್ ಕರೆಯಲು ಸಭೆ ನಿರ್ಧರಿಸಿತು. ಉಪಾಧ್ಯಕ್ಷೆ ಶ್ಯಾಮಲಿ ಪಾಟಣಕರ್, ಸ್ಥಾಯಿ ಸಮಿತಿಯ ಅಧ್ಯಕ್ಷ ಆದಿತ್ಯ ಗುಡಿಗಾರ ಹಾಗೂ ಸದಸ್ಯರು ಭಾಗವಹಿಸಿದ್ದರು.