ಬೀದರ್: ಅಕ್ರಮ ಆಸ್ತಿ ಆರೋಪದ ಹಿನ್ನೆಲೆಯಲ್ಲಿ ಇಂದು ಮುಂಜಾನೆ ಬೀದರ್ ಜಿಲ್ಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಭಾರಿ ದಾಳಿ ನಡೆಸಿದ್ದು, ಭ್ರಷ್ಟ ಅಧಿಕಾರಿಗೆ ಶಾಕ್ ನೀಡಿದ್ದಾರೆ. ಔರಾದ್ ತಾಲೂಕಿನ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ದೂಳಪ್ಪ ಅವರ ನಿವಾಸ ಸೇರಿದಂತೆ ಜಿಲ್ಲೆಯ ವಿವಿಧೆಡೆ ಒಟ್ಟು ನಾಲ್ಕು ಕಡೆಗಳಲ್ಲಿ ದಾಳಿ ನಡೆದಿದೆ.

ಬೀದರ್ ನಗರದ ಗುರುನಾನಕ್ ಕಾಲೋನಿ, ಭಾಲ್ಕಿ ತಾಲ್ಲೂಕಿನ ಕಡ್ಯಾಳ ಗ್ರಾಮ, ಔರಾದ್ನ ಎಡಿ ಕಚೇರಿ ಮತ್ತು ಮುದೋಳ ಕಚೇರಿಗಳ ಮೇಲೆ ಲೋಕಾಯುಕ್ತ ತಂಡಗಳು ಏಕಕಾಲಕ್ಕೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿವೆ. ದೂರುಗಳ ಆಧಾರದ ಮೇಲೆ ನಡೆದ ಈ ದಾಳಿಯನ್ನು ಲೋಕಾಯುಕ್ತ ಎಸ್ಪಿ ಸಿದ್ದರಾಜು ಅವರ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಹನುಮಂತ ರೆಡ್ಡಿ ನೇತೃತ್ವದ ತಂಡವು ಸಂಚಾಲಿಸಿದೆ.
