ಭಾರತದ ಅತಿದೊಡ್ಡ ಕ್ರೂಸ್‌ ಟರ್ಮಿನಲ್‌ಗೆ ಇಂದು ಪ್ರಧಾನಿ ಮೋದಿಯವರ ಚಾಲನೆ

ಗಾಂಧೀನಗರ: ದೇಶದ ಅತಿದೊಡ್ಡ ಕ್ರೂಸ್‌ ಟರ್ಮಿನಲ್‌ನ್ನು ಪ್ರಧಾನಿ ನರೇಂದ್ರ ಮೋದಿ ಶನಿವಾರ ಅಧಿಕೃತವಾಗಿ ಉದ್ಘಾಟಿಸಲಿದ್ದಾರೆ. ಈ ಮೂಲಕ ಪ್ರವಾಸೋದ್ಯಮ ಮತ್ತು ಸಮುದ್ರ ಸಾರಿಗೆ ಕ್ಷೇತ್ರಕ್ಕೆ ಹೊಸ ಅಲೆ ತರಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

ಭಾವನಗರ ಜವಾಹರ್ ಮೈದಾನದಲ್ಲಿ ನಡೆಯಲಿರುವ ಭವ್ಯ ಸಮಾರಂಭಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ಗುಜರಾತ್‌ಗೆ ಆಗಮಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಹಲವು ಪ್ರಮುಖ ವಲಯಗಳಲ್ಲಿ ಪರಿವರ್ತನಾತ್ಮಕ ಅಭಿವೃದ್ಧಿ ಯೋಜನೆಗಳಿಗೆ ಅವರು ಚಾಲನೆ ನೀಡಲಿದ್ದಾರೆ.

ಪ್ರಧಾನಮಂತ್ರಿಗಳು ‘ಸಮುದ್ರದಿಂದ ಸಮೃದ್ಧಿ’ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, 34,200 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಹಲವಾರು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಮೋದಿ 7,870 ಕೋಟಿ ರೂ.ಗಳಿಗೂ ಹೆಚ್ಚಿನ ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಿದ್ದಾರೆ. ಈ ಉಪಕ್ರಮಗಳು ಭಾರತದ ಪ್ರಮುಖ ಬಂದರುಗಳಲ್ಲಿ ನಿರ್ಣಾಯಕ ಮೂಲಸೌಕರ್ಯ ನವೀಕರಣಗಳನ್ನು ಒಳಗೊಂಡಿವೆ. ಇಂದಿರಾ ಡಾಕ್‌ನಲ್ಲಿ ಮುಂಬೈ ಅಂತರರಾಷ್ಟ್ರೀಯ ಕ್ರೂಸ್ ಟರ್ಮಿನಲ್ ಉದ್ಘಾಟನೆ ಮತ್ತು ಕೋಲ್ಕತ್ತಾದ ಶ್ಯಾಮ ಪ್ರಸಾದ್ ಮುಖರ್ಜಿ ಬಂದರಿನಲ್ಲಿ ಹೊಸ ಕಂಟೇನರ್ ಟರ್ಮಿನಲ್‌ಗೆ ಅಡಿಪಾಯ ಹಾಕುವುದು ಪ್ರಮುಖ ಅಂಶಗಳಲ್ಲಿ ಸೇರಿವೆ. 

ಪಾರಾದೀಪ್ ಬಂದರಿನಲ್ಲಿ (ಒಡಿಶಾ) ಹೊಸ ಸರಕು ನಿಲ್ದಾಣ ಮತ್ತು ಕಂಟೇನರ್ ನಿರ್ವಹಣಾ ಸೌಲಭ್ಯಗಳು, ಗುಜರಾತ್‌ನ ಟ್ಯೂನ ಟೆಕ್ರಾ ಮಲ್ಟಿ-ಕಾರ್ಗೋ ಟರ್ಮಿನಲ್, ಮತ್ತು ಕಾಮರಾಜರ್ ಬಂದರು (ಎನ್ನೋರ್, ತಮಿಳುನಾಡು), ಚೆನ್ನೈ ಬಂದರು, ಕಾರ್ ನಿಕೋಬಾರ್ ದ್ವೀಪ, ದೀನದಯಾಳ್ ಬಂದರಿನಲ್ಲಿ (ಕಾಂಡ್ಲಾ) ಆಧುನೀಕರಣ ಯೋಜನೆಗಳು ಮತ್ತು ಪಾಟ್ನಾ ಮತ್ತು ವಾರಣಾಸಿಯಲ್ಲಿ ಒಳನಾಡಿನ ಜಲಮಾರ್ಗ ಸೌಲಭ್ಯಗಳು ಮೊದಲಾದವು ಕಡಲ ಅಭಿವೃದ್ಧಿ ಯೋಜನೆಗಳಾಗಿವೆ.