ಬಾಗಲಕೋಟೆ, (ಸೆಪ್ಟೆಂಬರ್ 09):ಶಾಲೆಯಲ್ಲಿ ಇಬ್ಬರು ವಿದ್ಯಾರ್ಥಿಗಳ ನಡುವೆ ಜಗಳ ಉಂಟಾಗಿದ್ದು, ಓರ್ವ ವಿದ್ಯಾರ್ಥಿ ಕಣ್ಣುಗುಡ್ಡೆಯನ್ನೇ ಕಳೆದುಕೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿಬನಹಟ್ಟಿ ತಾಲ್ಲೂಕಿನ ಢವಳೇಶ್ವರ ಗ್ರಾಮದಲ್ಲಿ ನಡೆದಿದೆ.ಢವಳೇಶ್ವರ ಗ್ರಾಮದ ಮೊರಬದ ತೋಟದ ವಸತಿ ಶಾಲೆಯಲ್ಲಿ 1ನೇ ಕ್ಲಾಸ್ ಓದುತ್ತಿರುವ ಭೀಮಪ್ಪ ಹಾಗೂ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಸಮರ್ಥ ನಡುವೆ ಪೆನ್ನಿನ ವಿಚಾರಕ್ಕೆ ಗಲಾಟೆಯಾಗಿದೆ, ಈ ವೇಳೆ ಭೀಮಪ್ಪ ಕಟ್ಟಿಗೆಯಿಂದ ಸಮರ್ಥನ ಬಲಗಣ್ಣಿಗೆ ಚುಚ್ಚಿದ್ದಾನೆ. ಇದರಿಂದ ತೀವ್ರ ಗಾಯಗೊಂಡ ಸಮರ್ಥನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಇದೀಗ ವೈದ್ಯರು ಕಣ್ಣುಗುಡ್ಡೆಯನ್ನೇ ತೆಗೆದಿದ್ದಾರೆ.

ವಿದ್ಯಾರ್ಥಿಗಳ ನಡುವೆ ಗಲಾಟೆ ಆಗಿದ್ಯಾಕೆ?
ಒಂದನೇ ತರಗತಿ ವಿದ್ಯಾರ್ಥಿ ಭೀಮಪ್ಪ ಲೋಕುರೆಗೆ ಐದನೇ ತರಗತಿ ವಿದ್ಯಾರ್ಥಿ ಸಮರ್ಥ್ ಪೆನ್ ನೀಡಿದ್ದ. ಅದನ್ನು ವಾಪಾಸ್ ಕೇಳಿದ್ದಕ್ಕೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು, ಈ ವೇಳೆ ವಿದ್ಯಾರ್ಥಿ ಭೀಮಪ್ಪ, ಕಟ್ಟಿಗೆಯಿಂದ ಸಮರ್ಥ್ ನ ಕಣ್ಣಿಗೆ ಚುಚ್ಚಿದ್ದಾನೆ. ಇದರಿಂದ ಗಾಯಗೊಂಡ ಸಮರ್ಥ್ ನನ್ನು ಕೂಡಲೇ ಬೆಳಗಾವಿ ಜಿಲ್ಲೆ ಅಥಣಿ ನಗರದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಬಲಗಣ್ಣಿಗೆ ಗಂಭೀರವಾಗಿ ಗಾಯವಾಗಿದ್ದರಿಂದ ಕಣ್ಣು ಗುಡ್ಡೆಯನ್ನೇ ತಗೆಯಬೇಕಾಗಿದೆ. ಇನ್ನು ಕಣ್ಣು ಗುಡ್ಡೆ ಕಳೆದುಕೊಂಡ ಮಗನ ಸ್ಥಿತಿ ಕಂಡು ಪೋಷಕರು ಕಂಗಾಲಾಗಿದ್ದಾರೆ.
ಘಟನೆ ಬಗ್ಗೆ ಮುಖ್ಯ ಶಿಕ್ಷಕಿ ಜಯಶ್ರೀ ನಡುವಿನಕೇರಿ, ಅತಿಥಿ ಶಿಕ್ಷಕಿ ಶಿಲ್ಪಾ ಅಂಬಿಗೆ ಗಮನಕ್ಕೆ ತಂದಿದ್ದಾರೆ. ಆದ್ರೆ, ಘಟನೆಯನ್ನು ಶಿಕ್ಷಕರು ಗಂಭೀರವಾಗಿ ಪ್ರತಿಕ್ರಿಯಿಸಲಿಲ್ಲ ಎಂಬ ಆರೋಪ ಕೇಳಿಬಂದಿದೆ. ಶಿಕ್ಷಕರ ವಿರುದ್ಧ ಸೂಕ್ತ ಕ್ರಮಕ್ಕಾಗಿ ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರಗೆ ಮನವಿ ಮಾಡಲಾಗಿದೆ. ಕಣ್ಣು ಕಳೆದುಕೊಂಡ ವಿದ್ಯಾರ್ಥಿಗೆ ಸರ್ಕಾರದ ಮೂಲಕ ಪರಿಹಾರ ಕೋಡುವಂತೆ ಮನವಿ ಮಾಡಲಾಗಿದೆ. ಸದ್ಯ ಮುಖ್ಯ ಶಿಕ್ಷಕಿ ಜಯಶ್ರೀ ಹಾಗೂ ಅತಿಥಿ ಶಿಕ್ಷಕಿ ಶಿಲ್ಪಾ ಎಂಬುವವರ ವಿರುದ್ಧ ಮಹಾಲಿಂಗಪುರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇನ್ನು ಸ್ಥಳಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಜಮಖಂಡಿ ಎಸಿ ಶ್ವೇತಾ ಬಿಡಿಕರ್ ಭೇಟಿ ನೀಡಿ ಪರಿಶೀಲನೆ ನಡೆಸಿ ಕರ್ತವ್ಯ ನಿರ್ಲಕ್ಷ್ಯ ತೋರಿದ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
