ಮಂಗಳೂರು: ನಗರದ ಕೂಳೂರು ರಾಯಲ್ ಓಕ್ ಶೋರೂಂ ಮುಂಭಾಗ ದಾರುಣ ಘಟನೆ ನಡೆದಿದೆ. ರಸ್ತೆ ಗುಂಡಿಗೆ ಬಿದ್ದ ದ್ವಿಚಕ್ರ ವಾಹನದಿಂದ ಕೆಳಗೆ ಬಿದ್ದ ಮಹಿಳೆಯ ಮೇಲೆ ಕ್ಯಾಂಟರ್ ಲಾರಿ ಹರಿದು, ಅವರು ದುರ್ಮರಣ ಹೊಂದಿದ್ದಾರೆ.

ಉಡುಪಿಯ ಪರ್ಕಳ ಮೂಲದ ಮಾಧವಿ ಮೃತ ಮಹಿಳೆ. ಮಂಗಳೂರಿನ ಎ.ಜೆ.ಆಸ್ಪತ್ರೆಯ ಸಿಬ್ಬಂದಿಯಾಗಿರುವ ಮಾಧವಿ, ಕರ್ತವ್ಯಕ್ಕೆ ಹಾಜರಾಗಲು ದ್ವಿಚಕ್ರ ವಾಹನದಲ್ಲಿ ಆಗಮಿಸುತ್ತಿದ್ದರು. ದ್ವಿಚಕ್ರ ವಾಹನವು ರಸ್ತೆ ಹೊಂಡಕ್ಕೆ ಬಿದ್ದ ಪರಿಣಾಮ ಮಾಧವಿ ರಸ್ತೆಗೆ ಬಿದ್ದಿದ್ದರು. ಈ ವೇಳೆ ಹಿಂದಿನಿಂದ ಬಂದ ಕ್ಯಾಂಟರ್ ಲಾರಿ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮಂಗಳೂರಿನ ರಾಷ್ಟ್ರೀಯ ಹೆದ್ದಾರಿಗಳು ಹೊಂಡಗುಂಡಿಗಳಿಂದ ತುಂಬಿದ್ದು, ಇದನ್ನು ದುರಸ್ಥಿ ಮಾಡದ ಜನಪ್ರತಿನಿಧಿಗಳ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ.
