ಡಿಕೆಶಿ ಮನಸ್ಸಿನ ಇಚ್ಛೆ ನೆರವೇರಲಿ – ಕೃಷ್ಣಮಠದಲ್ಲಿ ಪುತ್ತಿಗೆ ಶ್ರೀ ಆಶೀರ್ವಾದ

ಉಡುಪಿ: ಡಿ.ಕೆ ಶಿವಕುಮಾರ್ ಓಪನ್ ಆಗಿ ಭಗವದ್ಗೀತೆ ಪಠಿಸುವ ಏಕೈಕ ರಾಜಕಾರಣಿ. ರಾಕ್ ಸ್ಟಾರ್ ರಾಜಕಾರಣಿ. ರಾಜ್ಯಕ್ಕೆ ದೇಶಕ್ಕೆ ಅವರ ಸೇವೆ ದೊರಕಲಿ. ಭಗವದ್ಗೀತೆ ಪುಸ್ತಕ ಪಡೆದಿದ್ದಾರೆ, ಅವರ ಮನಸ್ಸಿನ ಇಚ್ಛೆ ಫಲಿಸಲಿ ಎಂದು ಉಡುಪಿಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಆಶೀರ್ವಾದ ಮಾಡಿದ್ದಾರೆ.

ಡಿಕೆಶಿ ಜೊತೆ ಪುತ್ತಿಗೆ ಮಠಕ್ಕೆ 35 ವರ್ಷದ ಸಂಬಂಧವಿದೆ. ಡಿಕೆ ಜೈಲ್ ಮಂತ್ರಿ ಆಗಿದ್ದರು, ಕೃಷ್ಣ ಹುಟ್ಟಿದ್ದು ಜೈಲಿನಲ್ಲೇ. ಅವರು ಶ್ರೀಕೃಷ್ಣನ ದೊಡ್ಡ ಭಕ್ತ, ಭಗವದ್ಗೀತೆಯನ್ನು ಬಹಳ ಅನುಸರಿಸುತ್ತಾರೆ ಎಂದು ಮಠದ ರಾಜಾಂಗಣದಲ್ಲಿ ನಡೆದ ತಮ್ಮ ಜನ್ಮ ನಕ್ಷತ್ರ ಕಾರ್ಯಕ್ರಮದಲ್ಲಿ ಡಿ.ಕೆ ಶಿವಕುಮಾರ್ ಮುಂದೆಯೇ ಮಾತನಾಡಿದರು. 

ಶ್ರೀ ಮಧ್ವಾಚಾರ್ಯರ ಭಾವಚಿತ್ರವಿರುವ ಅಂಚೆ ಚೀಟಿ ಬಿಡುಗಡೆ ಮಾಡಿದ್ದು, ಶ್ರೀ ಮಧ್ವಾಚಾರ್ಯರಿಗೆ ಬಂಡೆಕಲ್ಲು ಇಷ್ಟ. ಅವರು ಹನುಮನ ಅಪರಾವತಾರ. ಡಿಕೆಶಿ ಕನಕಪುರದ ಬಂಡೆ‌. ಅವರು ರಾಕ್ ಸ್ಟಾರ್ ರಾಜಕಾರಣಿ. ಮಠದಲ್ಲಿ ಕೋಟಿ ಗೀತಾ ಲೇಖನ ಪುಸ್ತಕ ಪಡೆದಿದ್ದಾರೆ. ಅವರು ಪುಸ್ತಕ ಬರೆದು ಮುಗಿಸುವುದರೊಳಗೆ ಅವರ ಮನಸ್ಸಿನ ಇಚ್ಛೆ ಫಲಿಸಲಿ ಎಂದು ಡಿಕೆಶಿ ಮುಖ್ಯಮಂತ್ರಿ ಆಗಲಿ ಎಂದು ಪುತ್ತಿಗೆ ಸ್ವಾಮೀಜಿ ಆಶೀರ್ವದಿಸಿದರು. ರಾಜಕಾರಣಿಗಳು ಆಸ್ತಿಕರಾಗುವುದು ಬಹಳ ಮುಖ್ಯ. ರಾಜಕಾರಣಿಗಳು ಆಸ್ತಿಕರಾದರೆ ಮಾತ್ರ ಜಗತ್ತು ಕ್ಷೇಮವಾಗಿರಲು ಸಾಧ್ಯ ಎಂದರು.