ಬೆಂಗಳೂರಿಗೆ ಪ್ರಧಾನಿ ಮೋದಿ ಭೇಟಿ: ಈ ಮಾರ್ಗದಲ್ಲಿ ಮೆಟ್ರೋ ಮತ್ತು ವಾಹನ ಸಂಚಾರ ತಾತ್ಕಾಲಿಕ ನಿಷೇಧ

ಬೆಂಗಳೂರು, ಆಗಸ್ಟ್ 10: ಬೆಂಗಳೂರಿಗರ ದೀರ್ಘಕಾಲದ ಕನಸು ಇಂದು ನನಸಾಗುತ್ತಿದೆ. ಮೆಟ್ರೋ ಹಳದಿ ಲೈನ್‌ ಪ್ರಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಹಸಿರು ನಿಶಾನೆ ತೋರಿಸಲಿದ್ದಾರೆ. ಇವರ ಭೇಟಿಯನ್ನು ಮುಂದುವರೆಸುವಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ವ್ಯವಸ್ಥೆ ಬದಲಾಯಿಸಲಾಗಿದೆ. ಪರ್ಯಾಯ ಮಾರ್ಗಗಳನ್ನು ಸಾರ್ವಜನಿಕರಿಗೆ ಸೂಚಿಸಲಾಗಿದೆ.

ಬೆಳಿಗ್ಗೆ 10ರಿಂದ ಮಧ್ಯಾಹ್ನ 2:30 ರವರೆಗೆ ನೈಸ್‌ ರಸ್ತೆ ಮಾರ್ಗದಲ್ಲಿ, ವಿಶೇಷವಾಗಿ ಎಲೆಕ್ಟ್ರಾನಿಕ್ ಸಿಟಿ ಟೋಲ್ ಕಡೆಗೆ ಹೋಗುವ ವಿವಿಧ ನೈಸ್ ಟೋಲ್‌ಗಳಿಂದ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಈ ನಿರ್ಬಂಧಗಳು ಬನ್ನೇರುಘಟ್ಟ ರಸ್ತೆ, ಕನಕಪುರ ರಸ್ತೆ, ನಾಯಂಡಹಳ್ಳಿ, ಸೋಂಪುರ, ಪಿಇಎಸ್ ಕಾಲೇಜು, ಕೆಂಗೇರಿ, ಮಾಗಡಿ ರಸ್ತೆ, ಮಾಧವರ ರಸ್ತೆ ಮತ್ತು ಪಾರ್ಲೆ ಬಿಸ್ಕಟ್ಸ್ ಫ್ಯಾಕ್ಟರಿ ಕಡೆಗೆ ಹೋಗುವ ವಾಹನಗಳಿಗೆ ಅನ್ವಯವಾಗಿವೆ.

ಸುರಕ್ಷತೆ ಮತ್ತು ಸಂಚಾರ ಸಮರ್ಪಕ ನಿರ್ವಹಣೆಗೆ ಪೊಲೀಸ್‌ ಬಲವನ್ನು ಹೆಚ್ಚಿಸಲಾಗಿದೆ. ಸಾರ್ವಜನಿಕರು ಸೂಚಿಸಲಾದ ಪರ್ಯಾಯ ಮಾರ್ಗಗಳನ್ನು ಬಳಸಿ ಸಂಚಾರವನ್ನು ಸುಗಮಗೊಳಿಸಿಕೊಳ್ಳುವಂತೆ ವಿನಂತಿಸಲಾಗಿದೆ.