ಬೆಂಗಳೂರು: ನಮ್ಮ ಮೆಟ್ರೋ ದರ ನಿಗದಿ ಸಂಬಂಧ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿ 2 ವಾರದಲ್ಲಿ ಉತ್ತರಿಸುವಂತೆ ಸೂಚಿಸಿದೆ.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಶುಲ್ಕ ನಿಗದಿ ಸಮಿತಿ ವರದಿಯನ್ನು ಬಹಿರಂಗ ಪಡಿಸುವಂತೆ ಕೋರಿ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ಇಂದು ನ್ಯಾ.ಸುನಿಲ್ ದತ್ ಯಾದವ್ ಅವರ ಏಕಸದಸ್ಯ ಪೀಠದಲ್ಲಿ ನಡೆಯಿತು.
ವಿಚಾರಣೆ ವೇಳೆ, ನೀವಿಷ್ಟು ಪ್ರಬಲರಾಗಿದ್ದೂ ನಿಮಗೆ ವರದಿ ಸಿಗುತ್ತಿಲ್ಲವೇ ಎಂದು ನ್ಯಾಯಮೂರ್ತಿಗಳು ತೇಜಸ್ವಿ ಸೂರ್ಯ ಪರ ವಕೀಲರಿಗೆ ಪ್ರಶ್ನಿಸಿದರು.
ಡಿಸೆಂಬರ್ ತಿಂಗಳಲ್ಲೇ ದರ ನಿಗದಿ ಸಮಿತಿ ವರದಿ ನೀಡಿದ್ದರೂ ಬಿಎಂಆರ್ಸಿಎಲ್ ವರದಿ ನೀಡುತ್ತಿಲ್ಲ. ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಿದ್ದರೂ ಸಮಿತಿ ವರದಿ ಬಹಿರಂಗಪಡಿಸಿಲ್ಲ ಎಂದು ವಕೀಲರು ಉತ್ತರಿಸಿದರು. ಕೊನೆಗೆ ಬಿಎಂಆರ್ಸಿಎಲ್ಗೆ ನೋಟಿಸ್ ಜಾರಿ ಮಾಡಿದ ಕೋರ್ಟ್ ಅರ್ಜಿ ವಿಚಾರಣೆಯನ್ನು 2 ವಾರ ಮುಂದೂಡಿಕೆ ಮಾಡಿತು.
ಅರ್ಜಿಯಲ್ಲಿ ಏನಿತ್ತು?
ದರ ನಿಗದಿ ಸಮಿತಿಯ ತಜ್ಞರು ವಿದೇಶಿ ಪ್ರವಾಸವನ್ನು ಕೈಗೊಂಡು ಅಲ್ಲಿನ ಮೆಟ್ರೋ ದರವನ್ನು ಪರಿಶೀಲಿಸಿದ ಬಳಿಕ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿದ್ದರು. ಈ ವರದಿಯ ನಂತರ ಬಿಎಂಆರ್ಸಿಎಲ್ 130% ರವರೆಗೆ ಮೆಟ್ರೋ ರೈಲು ಟಿಕೆಟ್ ದರವನ್ನು ಏರಿಕೆ ಮಾಡಿದೆ.
ದರ ಏರಿಕೆ ಬಳಿಕ ಮೆಟ್ರೋ ರೈಲು ಪ್ರಯಾಣಿಕರ ಸಂಖ್ಯೆ ಕುಸಿದಿದೆ. ದರ ನಿಗದಿ ಸಮಿತಿ ವರದಿಯನ್ನು ನೀಡುವಂತೆ ಬಿಎಂಆರ್ಸಿಎಲ್ ಅನ್ನು ಕೇಳಿದ್ದರೂ ನೀಡಿಲ್ಲ. ಅಂತಿಮವಾಗಿ ಮಾಹಿತಿ ಹಕ್ಕು ಕಾಯ್ದೆಯ ಅಡಿ ಪ್ರಶ್ನಿಸಿದ್ದರೂ ಉತ್ತರ ನೀಡಿಲ್ಲ. ಹೀಗಾಗಿ ದರ ನಿಗದಿ ಸಮಿತಿಯ ವರದಿಯನ್ನು ಬಹಿರಂಗ ಪಡಿಸಬೇಕೆಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು.
ತೇಜಸ್ವಿ ಕಿಡಿ:
ಶುಲ್ಕ ನಿಗದಿ ಸಮಿತಿ ವರದಿಯನ್ನು ಬಿಎಂಆರ್ಸಿಎಲ್ ಮತ್ತು ಕರ್ನಾಟಕ ಸರ್ಕಾರ ರಹಸ್ಯವಾಗಿಡುವುದು ಆಕ್ರೋಶದ ಸಂಗತಿ. ಬೆಂಗಳೂರು ಮೆಟ್ರೋ ಈಗ ಭಾರತದಲ್ಲಿ ಅತ್ಯಂತ ದುಬಾರಿಯಾಗಿದ್ದು ಅನೇಕ ಮಧ್ಯಮ ವರ್ಗದ ಪ್ರಯಾಣಿಕರಿಗೆ ಇದು ಕೈಗೆಟುಕುವಂತಿಲ್ಲ.
ದೆಹಲಿ ಸೇರಿದಂತೆ ದೇಶದ ಇತರ ಪ್ರತಿಯೊಂದು ಮೆಟ್ರೋ ವ್ಯವಸ್ಥೆಯು ತನ್ನ ಶುಲ್ಕ ನಿಗದಿ ಸಮಿತಿಯ ವರದಿಗಳನ್ನು ಸಾರ್ವಜನಿಕಗೊಳಿಸಿರುವಾಗ ಬಿಎಂಆರ್ಸಿಎಲ್ ಯಾಕೆ ಈ ವರದಿಯನ್ನು ಬಹಿರಂಗ ಪಡಿಸುತ್ತಿಲ್ಲ. ಸರ್ಕಾರ ಏನನ್ನು ಮರೆಮಾಡಲು ಪ್ರಯತ್ನಿಸುತ್ತಿದೆ?
ಮೂರು ತಿಂಗಳಿನಿಂದ ಪದೇ ಪದೇ ಮನವಿ ಮಾಡಲಾಗಿತ್ತು. ನಂತರ ಆರ್ಟಿಐ ಅರ್ಜಿಗಳ ಹೊರತಾಗಿಯೂ ವರದಿಯನ್ನು ರಹಸ್ಯವಾಗಿಡಲಾಗಿದೆ. ಇಲ್ಲಿ ಯಾವುದೇ ರಾಷ್ಟ್ರೀಯ ಭದ್ರತಾ ಕಾಳಜಿ ಇಲ್ಲ. ಹಾಗಾದರೆ ಇಷ್ಟೊಂದು ಗೌಪ್ಯತೆ ಏಕೆ? ಸಿಎಂ ಸಿದ್ದರಾಮಯ್ಯನವರು ಈ ವರದಿಯನ್ನು ಬಿಡುಗಡೆ ಮಾಡಲು ನಿರಾಕರಿಸುತ್ತಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ.
