ಶಾಲಾ ಬಸ್, ಲಾರಿ ನಡುವೆ ಸಿಲುಕಿ ಆಟೋ ಅಪ್ಪಚ್ಚಿ – ಪವಾಡ ಸದೃಶವಾಗಿ ಚಾಲಕ ಪಾರು


ಆನೇಕಲ್:
 ಶಾಲಾ ಬಸ್ ಹಾಗೂ ಲಾರಿ ನಡುವೆ ಸಿಲುಕಿ ಆಟೋ ಅಪ್ಪಚ್ಚಿಯಾಗಿದ್ದು, ಚಾಲಕ ಪವಾಡ ಸದೃಶವಾಗಿ ಪಾರಾಗಿರುವ ಘಟನೆ ಹೊಸೂರು ಮುಖ್ಯರಸ್ತೆಯ ಕೂಡ್ಲು ಗೇಟ್ ಬಳಿ ನಡೆದಿದೆ.

ಕೂಡ್ಲು ಗೇಟ್ ಬಳಿ ಹೋಗುತ್ತಿದ್ದಾಗ ಶಾಲಾ ಬಸ್‌ನ ಚಾಲಕ ದಿಢೀರ್ ಬ್ರೇಕ್ ಹಾಕಿದ್ದಾನೆ. ಇದರಿಂದ ಹಿಂದೆ ಇದ್ದ ಆಟೋ ಚಾಲಕ ಕೂಡ ತಕ್ಷಣ ಬ್ರೇಕ್ ಹಾಕಿದ್ದಾನೆ. ಆದರೆ ಆಟೋ ಹಿಂದಿದ್ದ ಲಾರಿ ಚಾಲಕ ಬ್ರೇಕ್ ಹಾಕದೇ ಆಟೋಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯಾದ ರಭಸಕ್ಕೆ ಶಾಲಾ ಬಸ್ ಹಾಗೂ ಲಾರಿ ನಡುವೆ ಸಿಲುಕಿ ಆಟೋ ಅಪ್ಪಚ್ಚಿಯಾಗಿದೆ

ಇದೆಲ್ಲದರ ನಡುವೆ ಆಟೋ ಚಾಲಕ ಸಿಲುಕಿ ನರಳಾಡಿದ್ದು, ಸ್ಥಳೀಯರು ಬಂದು ರಕ್ಷಣೆ ಮಾಡಿದ್ದಾರೆ. ಆಟೋ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸಣ್ಣ-ಪುಟ್ಟ ಗಾಯಗಳಿಂದ ಆಟೋ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಲಾರಿ ಚಾಲಕ ರೀಲ್ಸ್ ನೋಡಿಕೊಂಡು ವಾಹನ ಚಲಾಯಿಸಿದ್ದು, ಘಟನೆಗೆ ಕಾರಣ ಎಂದು ಆರೋಪ ಕೇಳಿಬಂದಿದೆ