ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ ತೆಲಂಗಾಣದ ಬಾಲಕಂಪೇಟ್ನಲ್ಲಿರುವ ಯೆಲ್ಲಮ್ಮ ದೇವಸ್ಥಾನಕ್ಕೆ 1ಕೋಟಿ ರೂ. ದೇಣಿಗೆ ನೀಡಿದ್ದಾರೆ. ಆದಾಗ್ಯೂ, ಅವರು ದೇವಸ್ಥಾನಕ್ಕೆ ದೇಣಿಗೆ ನೀಡುತ್ತಿರುವುದು ಇದೇ ಮೊದಲಲ್ಲ. ಸಾಕಷ್ಟು ಬಾರಿ ಅವರು ದೇಶದ ಹಲವು ಪ್ರಸಿದ್ಧ ದೇವಾಲಯಗಳ ಅಭಿವೃದ್ಧಿಗೆ ದೇಣಿಗೆ ನೀಡಿದ್ದಾರೆ.

ಅದರಲ್ಲೂ ಈ ಯಲ್ಲಮ್ಮ ದೇವಿಯ ಮೇಲೆ ನೀತಾ ಅಂಬಾನಿಯವರಿಗೆ ಆಳವಾದ ನಂಬಿಕೆಯಿದೆ. ಪ್ರತಿ ಬಾರಿ ಹೈದರಾಬಾದ್ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಐಪಿಎಲ್ ಪಂದ್ಯ ನಡೆಯುವ ಸಮಯದಲ್ಲಿ, ಯಲ್ಲಮ್ಮ ದೇವಿಯ ದರ್ಶನ ಪಡೆಯುತ್ತಾರೆ.
ಈ ವರ್ಷ ಏಪ್ರಿಲ್ 23 ರಂದು, ನೀತಾ ಅಂಬಾನಿ ತಮ್ಮ ತಾಯಿ ಪೂರ್ಣಿಮಾ ದಲಾಲಾ ಮತ್ತು ಸಹೋದರಿ ಮಮತಾ ದಲಾಲಾ ಅವರೊಂದಿಗೆ ಯಲ್ಲಮ್ಮ ದೇವಿಯ ದರ್ಶನ ಪಡೆದಿದ್ದರು. ಈ ವೇಳೆ ದೇವಾಲಯವು ಕೈಗೊಳ್ಳುತ್ತಿರುವ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಕೊಡುಗೆ ನೀಡುವಂತೆ ಆಡಳಿತ ಮಂಡಳಿ ನೀತಾ ಅಂಬಾನಿಯ ಬಳಿ ಕೇಳಿಕೊಂಡಿತ್ತು. ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ನೀತಾ ಈಗ 1 ಕೋಟಿ ರೂ.ಗಳನ್ನು ದೇಣಿಗೆ ನೀಡಿದ್ದಾರೆ.
ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಮಹೇಂದ್ರ ಗೌರ್ ಮಾತನಾಡಿ, ನೀತಾ ಅಂಬಾನಿ ದೇವಸ್ಥಾನಕ್ಕೆ 1 ಕೋಟಿ ರೂ. ದೇಣಿಗೆ ನೀಡಿದ್ದಾರೆ. ಈ ಮೊತ್ತವನ್ನು ಸ್ಥಿರ ಠೇವಣಿಯಲ್ಲಿ ಇಡಲಾಗುತ್ತದೆ ಮತ್ತು ಅದರಿಂದ ಬರುವ ಬಡ್ಡಿಯನ್ನು ಪ್ರತಿದಿನ ದೇವಸ್ಥಾನಕ್ಕೆ ಭೇಟಿ ನೀಡುವ ಜನರಿಗೆ ಉಚಿತ ಊಟವನ್ನು ಆಯೋಜಿಸಲು ಬಳಸಲಾಗುತ್ತದೆ ಎಂದು ಹೇಳಿದ್ದಾರೆ.



