ವಾರಕ್ಕೆ ಮೂರು ದಿನ ಕಾವೇರಿ ಆರತಿ – 10,000 ಆಸನಗಳ ವ್ಯವಸ್ಥೆ, 70% ಉಚಿತ, 30% ಟಿಕೆಟ್: -ಡಿಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು: ವಾರಕ್ಕೆ ಮೂರು ದಿನ ಕಾವೇರಿ ಆರತಿ ನಡೆಯಲಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಘೋಷಣೆ ಮಾಡಿದ್ದಾರೆ.

ವಿಧಾನಸೌಧದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರು ಸಚಿವರು, ಶಾಸಕರು, ರೈತ ಮುಖಂಡರ ಜೊತೆ ಸಭೆ ನಡೆಸಿ ಕಾವೇರಿ ಆರತಿ ಬಗ್ಗೆ ಚರ್ಚಿಸಿದರು. ಬಳಿಕ ಮಾತನಾಡಿದ ಅವರು, ಪ್ರಯತ್ನ ವಿಫಲ ಆಗಬಹುದು, ಪ್ರಾರ್ಥನೆ ವಿಫಲ ಆಗಲ್ಲ. ಕೆಆರ್‌ಎಸ್‌ನಲ್ಲಿ ಹೊಸ ರೂಪ ಕೊಡಲು ಪ್ರಾರಂಭ ಮಾಡಿದ್ದೇವೆ. ವಾರಕ್ಕೆ ಮೂರು ದಿನ ಕಾವೇರಿ ಆರತಿ ನಡೆಯಲಿದೆ. 10 ಸಾವಿರ ಆಸನಗಳ ವ್ಯವಸ್ಥೆ ಮಾಡುತ್ತೇವೆ. ಇದರಲ್ಲಿ 70% ಆಸನಗಳು ಉಚಿತ, 30% ಟಿಕೆಟ್ ಮಾಡ್ತೀವಿ ಎಂದು ಹೇಳಿದರು.

ಕೆಆರ್‌ಎಸ್‌ಗೆ ಬರುವ ಪ್ರವಾಸಿಗರ ಸಂಖ್ಯೆಯನ್ನು ಹೆಚ್ಚಿಸಬೇಕು, ಕಾವೇರಿಗೆ ನಮನ ಸಲ್ಲಿಸಲು ಸಾಕಷ್ಟು ಸಲಹೆಗಳು ಬಂದಿವೆ. ತಾಯಿ ಕಾವೇರಿಗೆ ಜಾತಿ, ಧರ್ಮ, ಬಣ್ಣ ಇಲ್ಲ, ಎಲ್ಲರ ಆಸ್ತಿ ಕಾವೇರಿ. ಕೆಲ ರೈತರು ಆತಂಕ ವ್ಯಕ್ತಪಡಿಸಿದರು. ಗೌರವಿಸಿ ಅವರ ಅಭಿಪ್ರಾಯವನ್ನು ಕೇಳಿದ್ದೇವೆ. ಡ್ಯಾಂಗೆ ತೊಂದರೆ ಆಗಬಹುದು ಎಂಬ ಆತಂಕ ರೈತರಿಗಿದೆ. ಆ ರೀತಿ ಆಗಲ್ಲ. ಕಾವೇರಿ ಆರತಿ ಯಾವ ರೀತಿ ನಡೆಯಲಿದೆ ಎಂಬುದನ್ನು ಇನ್ನೆರಡು ದಿನದಲ್ಲಿ ಬಿಡುಗಡೆ ಮಾಡುತ್ತೇನೆ. ಮೈಸೂರು, ಮಂಡ್ಯ, ಕೊಡಗು, ಮಂಗಳೂರು ಸಂಸ್ಕೃತಿಯನ್ನೂ ಸೇರಿಸುತ್ತೇವೆ. ಸ್ಥಳೀಯರಿಗೆ ಮಾತ್ರ ಆದ್ಯತೆ ಕೊಡಬೇಕು ಎಂದು ಸೂಚಿಸಿದ್ದೇವೆ ಎಂದು ಹೇಳಿದರು.

ಇನ್ನೂ ಹೆಚ್‌ಡಿಕೆಗೆ ತಿರುಗೇಟು ನೀಡಿದ ಅವರು, ಕುಮಾರಣ್ಣನೇ ಡಿಸ್ನಿಲ್ಯಾಂಡ್ ಮಾಡಬೇಕು ಎಂದು ನಮಗೆ ಹೇಳಿದ್ದರು. ನೀನು ಚೆನ್ನಾಗಿ ಬೆಳೆಯುತ್ತಿಯಾ ಅಂದರೆ ಅಪಸ್ವರ ಇದ್ದೇ ಇರುತ್ತದೆ ಎಂದು ಟಾಂಗ್ ಕೊಟ್ಟರು