
ಬೆಂಗಳೂರು: ಇಸ್ರೇಲ್-ಇರಾನ್ ಯುದ್ಧದಲ್ಲಿ ಭಾರತ ಇರಾನ್ ಪರವಾಗಿ ನಿಲ್ಲುವಂತೆ ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಎರಡು ಕಡೆ ಭಾರೀ ಪ್ರಮಾಣದಲ್ಲಿ ಕ್ಷಿಪಣಿ ದಾಳಿ ನಡೆಸುತ್ತಿದ್ದರೂ ಭಾರತ ಇಲ್ಲಿಯವರೆಗೆ ಯಾವುದೇ ದೇಶದ ಪರ ನಿಲ್ಲದೇ ತಟಸ್ಥ ನಿಲುವು ತಳೆದಿದೆ. ಹೀಗಾಗಿ ಸಿದ್ದರಾಮಯ್ಯ ಇಂದು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರ ಬರಹವನ್ನು ಹಂಚಿ ಇರಾನ್ ಪರ ನಿಲ್ಲುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಪೋಸ್ಟ್ನಲ್ಲಿ ಏನಿದೆ?
ಇರಾನ್ ಮೇಲೆ ಇಸ್ರೇಲ್ ನಡೆಸಿದ ಅಪಾಯಕಾರಿ ದಾಳಿ ಕಾನೂನುಬಾಹಿರ. ಇದು ಪ್ರಾದೇಶಿಕ ಶಾಂತಿಗೆ ಬೆದರಿಕೆ ಹಾಕುತ್ತದೆ ಮತ್ತು ಭಾರತದ ಹಿತಾಸಕ್ತಿಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.
ಸೋನಿಯಾ ಗಾಂಧಿಯವರ ಲೇಖನವು ನಾಗರಿಕರ ಜೀವಗಳು ಬಲಿಯಾದಾಗ, ಅಂತರರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಿದಾಗ ಮತ್ತು ರಾಜತಾಂತ್ರಿಕತೆಯನ್ನು ತ್ಯಜಿಸಿದಾಗ ಭಾರತ ಮೌನವಾಗಿರಲು ಸಾಧ್ಯವಿಲ್ಲ ಎಂಬುದನ್ನು ಪ್ರಬಲವಾಗಿ ನೆನಪಿಸುತ್ತದೆ.
ಕಾಶ್ಮೀರ ಸೇರಿದಂತೆ ನಿರ್ಣಾಯಕ ಸಮಯದಲ್ಲಿ ಇರಾನ್ ಭಾರತದ ಪರವಾಗಿ ನಿಂತಿದ್ದರೂ ಕೇಂದ್ರ ಸರ್ಕಾರದ ಮೌನವಾಗಿದೆ. ಈ ಮೊದಲು ಗಾಜಾ ಈಗ ಇರಾನ್ ವಿಚಾರಲ್ಲಿ ಮೌನವಾಗಿರುವುದು ಶಾಂತಿಯನ್ನು ಪ್ರತಿಪಾದಿಸುವ ನಮ್ಮ ವಿದೇಶಾಂಗ ನೀತಿಯ ನಿರ್ಗಮನವನ್ನು ಸೂಚಿಸುತ್ತದೆ. ಪಶ್ಚಿಮ ಏಷ್ಯಾದಲ್ಲಿ ನಮ್ಮದೇ ಆದ ದೀರ್ಘಕಾಲೀನ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಭಾರತ ಈಗ ಮಾತನಾಡಬೇಕು ಎಂದು ಸಿಎಂ ಒತ್ತಾಯಿಸಿದ್ದಾರೆ.
ಇಸ್ರೇಲ್ ಮತ್ತು ಇರಾನ್ ಎರಡು ದೇಶಗಳೊಂದಿಗೆ ಭಾರತ ಉತ್ತಮ ಬಾಂಧವ್ಯ ಹೊಂದಿದೆ. ಜಮ್ಮು ಕಾಶ್ಮೀರದ ವಿಚಾರ ಬಂದಾಗ ಇರಾನ್ ಮತ್ತು ಇಸ್ರೇಲ್ ಎರಡೂ ಭಾರತದ ಪರವಾಗಿಯೇ ತನ್ನ ನಿಲುವು ಪ್ರಕಟಿಸುತ್ತಾ ಬಂದಿದೆ.

ಇರಾನ್ನಲ್ಲಿ ಭಾರತ ಛಬಹಾರ್ ಬಂದರನ್ನು ಅಭಿವೃದ್ಧಿ ಪಡಿಸುತ್ತಿದ್ದರೆ ಇಸ್ರೇಲ್ ಜೊತೆ ಭಾರತ ಹಲವಾರು ರಕ್ಷಣಾ ಒಪ್ಪಂದಗಳ ಜೊತೆ ಸಹಿ ಹಾಕಿದೆ. ಅಷ್ಟೇ ಅಲ್ಲದೇ ಭಾರತ ಮತ್ತು ಇಸ್ರೇಲ್ ಕಂಪನಿ ಜಂಟಿಯಾಗಿ ಹಲವಾರು ರಕ್ಷಣಾ ಸಾಮಾಗ್ರಿಗಳನ್ನು ಜಂಟಿಯಾಗಿ ಉತ್ಪಾದನೆ ಮಾಡುತ್ತಿದೆ. ಹೀಗಾಗಿ ಭಾರತ ಇಲ್ಲಿಯವರೆಗೆ ತನ್ನ ಬೆಂಬಲವನ್ನು ಯಾವುದೇ ದೇಶಕ್ಕೆ ನೀಡಿಲ್ಲ. ಆದರೆ ಯುದ್ಧ ನಿಲ್ಲಿಸುವಂತೆ ಎರಡೂ ದೇಶಗಳ ಜೊತೆ ಮನವಿ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಯುದ್ಧದ ಸಮಯವಲ್ಲ ಎಂದು ಹೇಳಿದ್ದಾರೆ.
