
ಬೆಂಗಳೂರು: ದ್ವಿಚಕ್ರ ವಾಹನದಲ್ಲಿ ಚಲಿಸುತ್ತಿದ್ದಾಗಲೇ ಮರದ ಕೊಂಬೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಯುವಕ ಅಕ್ಷಯ್ ಸಾವನ್ನಪ್ಪಿದ್ದಾರೆ. ಕಳೆದ ಐದು ದಿನಗಳಿಂದ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ್ದ ಅಕ್ಷಯ್ ಇಂದು (ಜೂನ್ 19) ಹೃದಯಘಾತದಿಂದ ಕೊನೆಯುಸಿರೆಳೆದಿದ್ದಾನೆ. ಜಯನಗರದ ಅಪೊಲೋ ಆಸ್ಪತ್ರೆಯಲ್ಲಿ ದಾಖಲಿಸಿ ತಲೆಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತಾದರೂ ಬ್ರೈನ್ ಡೆಡ್ ಆಗಿತ್ತು. ಆದ್ರೆ, ಇಂದು(ಜೂನ್ 19) ಮಧ್ಯಾಹ್ನ 1.15ಕ್ಕೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ.
ಅಕ್ಷಯ್ ಮೂಲತಃ ಬನಶಂಕರಿಯ ಕತ್ರಿಗುಪ್ಪೆಯ ಶ್ರೀನಗರದ ನಿವಾಸಿ. ರಾಜಾಜಿನಗರದ ಖಾಸಗಿ ಕಂಪನಿವೊಂದರಲ್ಲಿ ಹೆಚ್.ಆರ್. ಕೆಲಸ ಮಾಡುತ್ತಿದ್ದ. ಇಡೀ ಕುಟುಂಬದ ಆಧಾರ ಸ್ತಂಭವಾಗಿದ್ದ. ತಾನೇ ದುಡಿದು ಇಡೀ ಕುಟುಂವನ್ನ ಸಾಕುತ್ತಿದ್ದ. ಆದ್ರೆ ಇದ್ದ ಒಬ್ಬ ಮಗನನ್ನು ಕಳೆದುಕೊಂಡ ಕುಟುಂಬಸ್ಥರು ಕಣ್ಣಿರು ಹಾಕುತ್ತಿದ್ದಾರೆ. ಇನ್ನೂ ಮೃತ ಅಕ್ಷಯ್ ಕುಟುಂಬಕ್ಕೆ ಬಿಬಿಎಂಪಿ ಚಿಕಿತ್ಸಾ ವೆಚ್ಚದ ಹೊರತುಪಡಿಸಿ ಐದು ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದೆ.
ಇನ್ನು ಅಕ್ಷಯ್ ಸಾವನ್ನಪ್ಪುತ್ತಿದ್ದಂತೆಯೇ ಕುಟುಂಬಸ್ಥರು ಬಿಬಿಎಂಪಿ ನಿರ್ಲಕ್ಷ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಜಯನಗರದ ಅಪೋಲೋ ಆಸ್ಪತ್ರೆ ಮುಂದೆ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಜೂನ್ 19ರಂದು ತಂದೆಯ ಬರ್ತ್ ಡೇ ದಿನದಂದು ಅಕ್ಷಯ್ ಮಟನ್ ತರಲು ಹೋಗಿದ್ದ. ಆಗ ಅಪ್ಪನಿಗೆ ಮಟನ್ ಇಷ್ಟ ಅನ್ನೋ ಕಾರಣಕ್ಕೆ ಮಧ್ಯಾಹ್ನ ಒಂದು ಗಂಟೆಯ ಸುಮಾರಿಗೆ ಮಟನ್ ತರಲು ಹೋಗಿ ವಾಪಸ್ ಬರುತ್ತಿದ್ದಾಗ ಶ್ರೀನಿವಾಸ್ ನಗರದ ಬ್ರಹ್ಮ ಮಂದಿರದ ಬಳಿ ಮರದ ಕೊಂಬೆ ಮುರಿದು ಅಕ್ಷಯ್ ತಲೆ ಮೇಲೆ ಬಿದ್ದಿದೆ. ಪರಿಣಾಮ ಪ್ರಜ್ಜೆ ತಪ್ಪಿ ರಸ್ತೆಯಲ್ಲಿ ಬಿದ್ದ ಅಕ್ಷಯ್ನನ್ನ ಕೂಡಲೇ ಸ್ಥಳೀಯ ಪ್ರಶಾಂತ್ ಆಸ್ಪತ್ರೆಗೆ ದಾಖಲು ಮಾಡಿದ್ದರು.
ತಲೆ ಭಾಗಕ್ಕೆ ಗಂಭೀರ ಗಾಯವಾದ ಕಾರಣ, ತಲೆಯಲ್ಲಿ ರಕ್ತ ಹರಿಯುತ್ತಿರುವುದು ನಿಲ್ಲದ ಕಾರಣ ತ್ಯಾಗರಾಜನಗರದ ಪ್ರಶಾಂತ್ ಆಸ್ಪತ್ರೆಯಿಂದ ಜಯನಗರದ 3ನೇ ಬ್ಲಾಕ್ ನಲ್ಲಿರುವ ಅಪೊಲೊ ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ, ಅಕ್ಷಯ್ ನ ಉಳಿಸಿಕೊಳ್ಳಲು ವೈದ್ಯರು ಇನ್ನಿಲ್ಲದ ಕಸರತ್ತು ಮಾಡಿದ್ದರು. ಇನ್ನು ಕುಟುಂಬಸ್ಥರು ಸಹ ದೇವರ ಮೊರೆ ಹೋಗಿ ಹೋಮ, ಹವನ, ಪೂಜೆ ಪುನಸ್ಕಾರ ಮಾಡಿದ್ದರು. ಆದ್ರೆ, ಅದೆಲ್ಲವೂ ಫಲ ಕೊಟ್ಟಿಲ್ಲ.

