ಸಚಿವ ಶಿವರಾಜ್ ತಂಗಡಗಿ ಬೆಂಗಾವಲು ಪಡೆ ವಾಹನ ಅಪಘಾತ, ಇಬ್ಬರಿಗೆ ಗಾಯ

ವಿಜಯನಗರ, ಜೂನ್ 18: ಸಚಿವ ಶಿವರಾಜ್ ತಂಗಡಗಿ ಬೆಂಗಾವಲು ಪಡೆ ವಾಹನ ಅಪಘಾತಕ್ಕೀಡಾಗಿ ಇಬ್ಬರು ಪೊಲೀಸ್ ಸಿಬ್ಬಂದಿ ಗಾಯಗೊಂಡ ಘಟನೆ ಮಂಗಳವಾರ ತಡರಾತ್ರಿ ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಖಾನಾಹೊಸಹಳ್ಳಿ ಬಳಿ ನಡೆದಿದೆ. ಅದೃಷ್ಟವಶಾತ್, ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಸಚಿವರು ಕನಕಗಿರಿಯಿಂದ ಬೆಂಗಳೂರಿಗೆ ತೆರಳುತ್ತಿದ್ದಾಗ ಅವರ ಬೆಂಗಾವಲು ಪಡೆ ವಾಹನ ಹೆದ್ದಾರಿ ಗಸ್ತು ವಾಹನಕ್ಕೆ ಡಿಕ್ಕಿ ಹೊಡೆದಿದೆ. ಹೆದ್ದಾರಿ ಗಸ್ತು ವಾಹನದಲ್ಲಿದ್ದ ಎಎಸ್​​ಐ ಹಾಗೂ ಮತ್ತೊಬ್ಬ ಸಿಬ್ಬಂದಿಗೆ ಗಾಯವಾಗಿದೆ. ತಕ್ಷಣವೇ ಅವರನ್ನು ಕೂಡ್ಲಿಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ವಿಚಾರಿಸಿದ ನಂತರ ಸಚಿವರು ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ.