ಏರ್‌ ಇಂಡಿಯಾ ವಿಮಾನ ದುರಂತ ತನಿಖೆಗೆ ಉನ್ನತ ಮಟ್ಟದ ಸಮಿತಿ – 3 ತಿಂಗಳ ಡೆಡ್‌ಲೈನ್: ಸಚಿವ ರಾಮಮೋಹನ್ ನಾಯ್ಡು

ನವದೆಹಲಿ, ಜೂನ್ 14: ಗುಜರಾತ್​ನ ಅಹಮದಾಬಾದ್​​ನಲ್ಲಿ ನಡೆದ ಏರ್ ಇಂಡಿಯಾ  ವಿಮಾನ ಅಪಘಾತದ ಬಗ್ಗೆ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದ ಸಚಿವ ರಾಮ ಮೋಹನ್ ನಾಯ್ಡು ಸುದ್ದಿಗೋಷ್ಠಿ ನಡೆಸಿದ್ದಾರೆ. ವಿಮಾನದಲ್ಲಿದ್ದ ಬ್ಲ್ಯಾಕ್‌ ಬಾಕ್ಸ್ ಡೇಟಾವನ್ನು ಡಿಕೋಡ್ ಮಾಡಲಾಗುತ್ತಿದೆ. ಈ ಘಟನೆಯ ತನಿಖೆಗೆ ಉನ್ನತ ಮಟ್ಟದ ಸಮಿತಿ ರಚಿಸಲಾಗಿದೆ. ಆ ಸಮಿತಿ 3 ತಿಂಗಳಲ್ಲಿ ವರದಿ ಸಲ್ಲಿಸಲಿದೆ. ಹಾಗೇ, ದೇಶದಲ್ಲಿರುವ ಎಲ್ಲಾ ಬೋಯಿಂಗ್ 787 ವಿಮಾನಗಳನ್ನು ಪರಿಶೀಲಿಸಲಾಗುವುದು ಎಂದು ತಿಳಿಸಿದ್ದಾರೆ.

ಗುರುವಾರ ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ಅಪಘಾತದ ನಂತರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಅವರು ತಮ್ಮ ಮೊದಲ ಸುದ್ದಿಗೋಷ್ಠಿಯಲ್ಲಿ, ಅಪಘಾತಕ್ಕೀಡಾದ ವಿಮಾನದ ಕಪ್ಪು ಪೆಟ್ಟಿಗೆಯ ಡೇಟಾವನ್ನು ಡಿಕೋಡ್ ಮಾಡಲಾಗುತ್ತಿದೆ. ಅದರ ಜೊತೆ ಅನೇಕ ಸಂಸ್ಥೆಗಳು ಮತ್ತು ಉನ್ನತ ಮಟ್ಟದ ಸಮಿತಿಗಳು ಈ ಘಟನೆಯ ಬಗ್ಗೆ ವ್ಯಾಪಕ ತನಿಖೆ ನಡೆಸುತ್ತಿವೆ. ಬ್ಲ್ಯಾಕ್ ಬಾಕ್ಸ್ ಡೇಟಾ ಈ ಅಪಘಾತದ ಕಾರಣದ ಬಗ್ಗೆ ನಿರ್ಣಾಯಕ ಮಾಹಿತಿಯನ್ನು ಒದಗಿಸುತ್ತದೆ ಎಂದು ನಿರೀಕ್ಷಿಸಲಾಗಿದೆ ಎಂದಿದ್ದಾರೆ.

“ಈ ಘಟನೆಯ ಬಗ್ಗೆ ಸಚಿವಾಲಯವು ಅತ್ಯಂತ ಗಂಭೀರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ವಿಮಾನ ಅಪಘಾತ ತನಿಖಾ ಬ್ಯೂರೋ ಅನ್ನು ತಕ್ಷಣವೇ ಸಜ್ಜುಗೊಳಿಸಲಾಯಿತು. ಪರಿಸ್ಥಿತಿಯನ್ನು ಪರಿಶೀಲಿಸಲು DG AAIB ತಕ್ಷಣ ಸ್ಥಳಕ್ಕೆ ಧಾವಿಸಿದರು. AAIB ಮೂಲಕ ನಡೆಯುತ್ತಿರುವ ತಾಂತ್ರಿಕ ತನಿಖಾ ತಂಡದಿಂದ ನಿನ್ನೆ ಸಂಜೆ 5 ಗಂಟೆ ಸುಮಾರಿಗೆ ಅಪಘಾತದ ಸ್ಥಳದಿಂದ ಕಪ್ಪು ಪೆಟ್ಟಿಗೆಯನ್ನು ವಶಕ್ಕೆ ಪಡೆಯಲಾಗಿದೆ. AAIB ತನಿಖೆಯ ಫಲಿತಾಂಶಗಳಿಗಾಗಿ ನಾವು ಕುತೂಹಲದಿಂದ ಕಾಯುತ್ತಿದ್ದೇವೆ” ಎಂದು ಸಚಿವರು ಹೇಳಿದ್ದಾರೆ.

“ತನಿಖೆಯ ತಾಂತ್ರಿಕ ಭಾಗವನ್ನು ಎಎಐಬಿ ಮಾಡುತ್ತದೆ, ಉನ್ನತ ಮಟ್ಟದ ಸಮಿತಿಯು ಸೋಮವಾರವೇ ಸಭೆ ಸೇರುತ್ತದೆ. ಅವರು 3 ತಿಂಗಳೊಳಗೆ ವರದಿಯನ್ನು ಸಲ್ಲಿಸಲು ಪ್ರಯತ್ನಿಸುತ್ತಾರೆ. ಡಿಎನ್ಎ ಪರೀಕ್ಷೆಗಳು ಸಹ ನಡೆಯುತ್ತಿವೆ. ಗುಜರಾತ್ ಸರ್ಕಾರವು ಅದರಲ್ಲಿ ಸಮನ್ವಯ ಸಾಧಿಸುತ್ತಿದೆ. ಆ ಕಾರ್ಯವಿಧಾನವು ಶೀಘ್ರದಲ್ಲೇ ಮುಗಿಯುತ್ತದೆ ಎಂದುಕೊಂಡಿದ್ದೇವೆ. ಆದರೆ ಯಾವುದೇ ಲೋಪವಾಗದಂತೆ ನೋಡಿಕೊಳ್ಳಲು ಸರಿಯಾದ ಕಾರ್ಯವಿಧಾನವನ್ನು ಅನುಸರಿಸಬೇಕಾಗಿದೆ” ಎಂದು ಕೆ. ರಾಮ್ ಮೋಹನ್ ನಾಯ್ಡು ಹೇಳಿದ್ದಾರೆ.

“ಈ ಘಟನೆ ಸಂಭವಿಸಿದ ನಂತರ ಭಾರತದಲ್ಲಿರುವ ಬೋಯಿಂಗ್ 787 ಫ್ಲೀಟ್‌ನ ವಿಸ್ತೃತ ಕಣ್ಗಾವಲಿನ ಅಗತ್ಯವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ನಮ್ಮಲ್ಲಿ 34 ಬೋಯಿಂಗ್ ವಿಮಾನಗಳಿವೆ, ಅದರಲ್ಲಿ 8 ವಿಮಾನಗಳನ್ನು ಈಗಾಗಲೇ ಪರಿಶೀಲಿಸಲಾಗಿದೆ” ಕೆ ರಾಮ್ ಮೋಹನ್ ನಾಯ್ಡು ಹೇಳಿದ್ದಾರೆ.

“ಕಳೆದ ಎರಡು ದಿನಗಳು ತುಂಬಾ ಕಷ್ಟಕರವಾಗಿದ್ದವು. ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ನಡೆದ ಅಪಘಾತವು ಇಡೀ ರಾಷ್ಟ್ರವನ್ನೇ ಬೆಚ್ಚಿಬೀಳಿಸಿದೆ. ಈ ಘಟನೆಯಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಎಲ್ಲಾ ಕುಟುಂಬಗಳಿಗೆ ನನ್ನ ಸಂತಾಪಗಳು. ಏನು ಮಾಡಬೇಕು, ಏನು ಬೆಂಬಲ ನೀಡಬೇಕು ಎಂಬುದನ್ನು ಮೇಲ್ವಿಚಾರಣೆ ಮಾಡಲು ನಾನು ವೈಯಕ್ತಿಕವಾಗಿ ಸ್ಥಳಕ್ಕೆ ಧಾವಿಸಿದೆ ಮತ್ತು ಗುಜರಾತ್ ಸರ್ಕಾರ ಕೂಡ ಈ ಬಗ್ಗೆ ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಂಡಿದೆ. ನಾವು ಸ್ಥಳಕ್ಕೆ ಧಾವಿಸಿದ ತಕ್ಷಣ, ಸಂಬಂಧಪಟ್ಟ ಎಲ್ಲಾ ಇಲಾಖೆಗಳ ತಂಡಗಳು ತುರ್ತಾಗಿ ಕೆಲಸ ಮಾಡುತ್ತಿದ್ದವು, ಸಾಧ್ಯವಾದಷ್ಟು ರಕ್ಷಿಸಲು ಪ್ರಯತ್ನಿಸಿದರೂ ಬೆಂಕಿಯನ್ನು ನಂದಿಸಲು ಸಾಧ್ಯವಾಗಲಿಲ್ಲ. ಇನ್ನೂ ಅವಶೇಷಗಳನ್ನು ಸ್ಥಳಾಂತರಿಸಲು ಪ್ರಯತ್ನಿಸುಲಾಗುತ್ತಿದೆ. ಇದರಿಂದಾಗಿ ಶವಗಳನ್ನು ಆದಷ್ಟು ಬೇಗ ಆಸ್ಪತ್ರೆಗೆ ಕಳುಹಿಸಲು ಸಾಧ್ಯವಾಯಿತು” ಎಂದು ಸಚಿವ ರಾಮ್ ಮೋಹನ್ ನಾಯ್ಡು ಹೇಳಿದ್ದಾರೆ.