ಗದಗ : ವರುಣನ ಆರ್ಭಟಕ್ಕೆ ಕೊಚ್ಚಿಹೋದ ಸೇತುವೆ, ಮಾಡಳ್ಳಿ ಗುಂಜಳ ರಸ್ತೆ ಸಂಚಾರ ಸ್ಥಗಿತ

ಗದಗ: ಜಿಲ್ಲೆಯಲ್ಲಿ ವರುಣನ ಆರ್ಭಟಕ್ಕೆ ಲಕ್ಷ್ಮೇಶ್ವರ ತಾಲೂಕಿನ ಮಾಡಳ್ಳಿ ಬಳಿ ಸೇತುವೆಯೊಂದು ಕೊಚ್ಚಿ ಹೋಗಿ ಮಾಡಳ್ಳಿ – ಗುಂಜಳ ರಸ್ತೆ ಸಂಚಾರ ಸ್ಥಗಿತಗೊಂಡಿದೆ.

ಬಿಡದೇ ಸುರಿಯುತ್ತಿರುವ ಮಳೆಗೆ ಕಲ್ಲಿನ ಹಳೆಯ ಸೇತುವೆ ಕೊಚ್ಚಿಹೋಗಿದ್ದು, ಮಾಗಡಿ, ಮಾಡಳ್ಳಿ, ಗುಂಜಳದಿಂದ ಕುಂದಗೋಳ ರಸ್ತೆ ಸಂಪರ್ಕ ಕಡಿತಗೊಂಡಿದೆ. ಇದೀಗ ರೈತರು, ಪ್ರಯಾಣಿಕರು ಪರದಾಡುವಂತಾಗಿದೆ.

ಜಿಲ್ಲೆಯಲ್ಲಿ ಹಳ್ಳ-ಕೊಳ್ಳಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ರೋಣ ತಾಲೂಕಿನ ಬೆಳವಣಕಿ ಗ್ರಾಮದ ಬಳಿ ಸೇತುವೆ ಸಂಪೂರ್ಣ ಜಲಾವೃತವಾಗಿವೆ. ತುಂಬಿ ಹರಿಯುತ್ತಿರುವ ಬೆಳವಣಕಿ ಬಿಸಿ ಬೂದಿಹಳ್ಳದ ನೀರಿನ ರಭಸಕ್ಕೆ ರಸ್ತೆಗಳು ಕೊಚ್ಚಿ ಹೋಗಿವೆ.

ಹರಿಯುವ ನೀರಲ್ಲಿ ಜನರು ಹುಚ್ಚಾಟ ಮಾಡುತ್ತಿದ್ದು, ನೀರಿನ ಸೆಳೆತದ ನಡುವೆಯೂ ಅತ್ತಿಂದಿತ್ತ ಸಂಚರಿಸುತ್ತಿದ್ದಾರೆ. ಕೊಚ್ಚಿಹೋದ ರಸ್ತೆಯಿಂದ ಬೆಳವಣಕಿ, ಬಳಗಾನೂರ ಗದಗ ಸಂಪರ್ಕ ಕಲ್ಪಿಸುವ ರಸ್ತೆ ಬಂದ್ ಆಗಿದೆ. ಮೇಲ್ಸೇತುವೆ ಮಾಡುವಂತೆ ಸಾರ್ವಜನಿಕರು ಸಾಕಷ್ಟು ಮನವಿ ಮಾಡಿದ್ರೂ ಸ್ಪಂದಿಸದೇ ಇರುವ ಜನಪ್ರತಿನಿಧಿಗಳು, ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.