ಸೋನಮ್ ಪೊಲೀಸರಿಗೆ ಶರಣಾಗಿರಲಿಲ್ಲ, ‘ಗಂಡನ ಕೊಲೆ ಮಾಡಿಸಿ ಸಿಕ್ಕಿಬಿದ್ದಿದ್ಹೇಗೆ ‘?

ಗಾಜಿಪುರ, ಜೂನ್ 09: ಹನಿಮೂನ್​​ಗೆ ಕರೆದೊಯ್ದು ಗಂಡನನ್ನು ಕೊಲೆ ಮಾಡಿಸಿದ ಆರೋಪದ ಮೇಲೆ ಸೋನಮ್​ರನ್ನು ಪೊಲೀಸರು ಉತ್ತರ ಪ್ರದೇಶದ ಗಾಜಿಪುರದಲ್ಲಿ ಇಂದು ಬಂಧಿಸಿದ್ದಾರೆ. ಮೇ 23ರಂದು ದಂಪತಿ ಶಿಲ್ಲಾಂಗ್​​ನಲ್ಲಿ ನಾಪತ್ತೆಯಾಗಿದ್ದರು. ಮೊದಲು ಆಕೆಯೇ ಪೊಲೀಸರ ಮುಂದೆ ಶರಣಾಗಿದ್ದಾಳೆ ಎಂದು ಹೇಳಲಾಗಿತ್ತು. ಆದರೆ ರಾಜಾ ಅವರ ಸಹೋದರ ಆಕೆ ಪೊಲೀಸರ ಮುಂದೆ ಶರಣಾಗಿಲ್ಲ, ಆಕೆಯ ಸಹೋದರ ಹಾಗೂ ಹೋಟೆಲ್​ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದ ಕಾರಣ ಆಕೆ ಸಿಕ್ಕಿಬಿದ್ದಿದ್ದಾಳೆ ಎಂದು ಹೇಳಿದ್ದಾರೆ.

ರಾಜಾ ರಘುವಂಶಿ ಅವರ ಶವ ಚಿರಾಪುಂಜಿ ಪ್ರದೇಶದ ಕಂದಕವೊಂದರಲ್ಲಿ ಪತ್ತೆಯಾಗಿತ್ತು. ಇದಾದ ಒಂದು ವಾರದ ಬಳಿಕ ಇಂದು ಸೋನಮ್ ಸಿಕ್ಕಿಬಿದ್ದಿದ್ದಾರೆ. ಮೇಘಾಲಯದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಇಂಡಿಯಾ ಟುಡೇಗೆ ನೀಡಿದ ಮಾಹಿತಿಯ ಪ್ರಕಾರ, ರಾಜಾ ಹನಿಮೂನ್ ಪ್ರವಾಸದಲ್ಲಿ ಪತ್ನಿ ಸೋನಮ್ ಅಕ್ರಮ ಸಂಬಂಧ ಹೊಂದಿರುವುದು ತಿಳಿದಿತ್ತು, ಯಾರ ಜತೆಗೆ ಆಕೆ ಸಂಬಂಧ ಹೊಂದಿದ್ದಾಳೋ ಆತನನ್ನು ಹತ್ಯೆ ಮಾಡಬೇಕೆಂದುಕೊಂಡಿದ್ದ ಎಂದು ತಿಳಿದುಬಂದಿದೆ.

ರಾಜಾ ಅವರ ಸಹೋದರ ವಿಪುಲ್, ಮಾತನಾಡಿ, ಸೋನಂ ಶರಣಾಗಲಿಲ್ಲ, ಆಕೆ ಹೋಟೆಲ್ ಮಾಲೀಕರ ಮೊಬೈಲ್​​ನಿಂದ ಸಹೋದರನಿಗೆ ಕರೆ ಮಾಡಿದ್ದಳು. ಬಳಿಕ ಆಕೆಯ ಸಹೋದರ ಮತ್ತು ಧಾಬಾ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ ನಂತರ ಗಾಜಿಪುರದ ರಸ್ತೆ ಬದಿಯ ಉಪಾಹಾರ ಗೃಹದಿಂದ ವಶಕ್ಕೆ ಪಡೆಯಲಾಯಿತು ಎಂದು ಹೇಳಿದ್ದಾರೆ.ನಾನು ಗೋವಿಂದ್ ಅವರೊಂದಿಗೆ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಮಾತನಾಡಿದ್ದೆ. ಸೋನಮ್ ಉತ್ತರ ಪ್ರದೇಶದಲ್ಲಿ ಪತ್ತೆಯಾಗಿದ್ದಾರೆ ಎಂದು ಅವರು ನನಗೆ ತಿಳಿಸಿದರು.

ನಾವು ಉತ್ತರ ಪ್ರದೇಶದ ಪೊಲೀಸರನ್ನು ಸಂಪರ್ಕಿಸಿದ ನಂತರ, ಸೋನಮ್ ಅವರನ್ನು ಪೊಲೀಸರು ಕರೆದೊಯ್ದರು. ಅವರು ಶರಣಾಗಲಿಲ್ಲ. ಅವರು ತಪ್ಪೊಪ್ಪಿಕೊಳ್ಳುವವರೆಗೆ ಸೋನಮ್ ಆರೋಪಿ ಎಂದು ನಾವು ಒಪ್ಪುವುದಿಲ್ಲ. ಇಬ್ಬರೂ (ರಾಜಾ ಮತ್ತು ಸೋನಮ್) ತಮ್ಮ ದಾಂಪತ್ಯದಲ್ಲಿ ಸಂತೋಷವಾಗಿದ್ದರು ಎಂದು ಹೇಳಿದ್ದಾರೆ. ರಘುವಂಶಿಯನ್ನು ಕೊಲ್ಲಲು ಪತ್ನಿಯೇ ತಮ್ಮನ್ನು ನೇಮಿಸಿಕೊಂಡಿದ್ದಳು ಎಂದು ಬಂಧಿತರು ಮಾಹಿತಿ ನೀಡಿದ್ದಾರೆ.

ಅಪರಾಧದಲ್ಲಿ ಭಾಗಿಯಾಗಿರುವ ಇನ್ನೂ ಕೆಲವರನ್ನು ಹಿಡಿಯಲು ಮಧ್ಯಪ್ರದೇಶದಲ್ಲಿ ಪೊಲೀಸರು ಕಾರ್ಯಾಚರಣೆಯನ್ನು ಮುಂದುವರೆಸಿದ್ದಾರೆ. ಸುಮಾರು 24 ವರ್ಷ ವಯಸ್ಸಿನ ಸೋನಮ್ ರಘುವಂಶಿ ವಾರಣಾಸಿ-ಘಾಜಿಪುರ ಮುಖ್ಯ ರಸ್ತೆಯ ಕಾಶಿ ಧಾಬಾದಲ್ಲಿ ಪತ್ತೆಯಾಗಿದ್ದರು.

ರಾಜಾ ರಘುವಂಶಿ ಮತ್ತು ಅವರ ಪತ್ನಿ ಸೋನಮ್ ಮೇ 23 ರಂದು ಶಿಲ್ಲಾಂಗ್‌ನ ಸೊಹ್ರಾ ಪ್ರದೇಶದ ನೊಂಗ್ರಿಯಾತ್ ಗ್ರಾಮದಲ್ಲಿ ಹೋಂಸ್ಟೇಯಿಂದ ಹೊರಬಂದ ಕೆಲವೇ ಗಂಟೆಗಳ ನಂತರ ನಾಪತ್ತೆಯಾಗಿದ್ದರು. ಜೂನ್ 2 ರಂದು ವೀಸಾವ್ಡಾಂಗ್ ಜಲಪಾತದ ಬಳಿಯ ಕಮರಿಯಲ್ಲಿ ರಾಜಾ ಅವರ ಮೃತದೇಹ ಪತ್ತೆಯಾಗಿತ್ತು. ಅವರ ದೇಹದಿಂದ ಒಂದು ಚಿನ್ನದ ಉಂಗುರ ಮತ್ತು ಸರ ಕಾಣೆಯಾಗಿತ್ತು. ಅವರನ್ನು ಕೊಲೆ ಮಾಡಲಾಗಿದೆ ಎಂಬ ಅನುಮಾನ ಮೂಡಿತ್ತು.