9ನೇ ತರಗತಿಯ ಸ್ನೇಹಿತನ್ನೇ ಇರಿದು ಕೊಂದ 6ನೇ ಕ್ಲಾಸ್ ಬಾಲಕ: ಹುಬ್ಬಳ್ಳಿ ಪೊಲೀಸರೇ ಶಾಕ್​..!

ಅವರಿಬ್ಬರು ಅಪ್ರಾಪ್ತ ಬಾಲಕರು. ಇಬ್ಬರು ಕೂಡಾ ಸ್ನೇಹಿತರು. ಪ್ರತಿ ದಿನ ಕೂಡಿಯೇ ಆಟವಾಡುತ್ತಿದ್ದು, ಒಂದೇ ತಟ್ಟೆಯಲ್ಲಿ ಊಟ ಮಾಡುತ್ತಿದ್ದರು. ಆದ್ರೆ, ಅದೇನಾಯ್ತೋ ಏನೋ ಆಟವಾಡುತ್ತಿದ್ದಾಗಲೇ ಇಬ್ಬರು ಬಾಲಕರು ಜಗಳ ಮಾಡಿಕೊಂಡಿದ್ದು, ಕೊನೆಗೆ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಅಚ್ಚರಿ ಅಂದ್ರೆ ಆರನೇ ತರಗತಿ ಹುಡಗು ತನಗಿಂತ ಮೂರು ಕ್ಲಾಸ್ ಮುಂದಿದ್ದ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದವನನ್ನೇ ಕೊಂದಿದ್ದಾನೆ. ಈ ಪ್ರಕರಣದಿಂದ ಪೊಲೀಸರೇ ಶಾಕ್​ ಆಗಿದ್ದಾರೆ.

ಹುಬ್ಬಳ್ಳಿ, (ಮೇ 13): ಕೂಡಿ ಆಟವಾಡುತ್ತಿದ್ದ ಗೆಳೆಯರ  ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. 9ನೇ ತರಗತಿ ಓದುತ್ತಿದ್ದ ಬಾಲಕನನನ್ನು 6ನೇ ಕ್ಲಾಸ್ ಬಾಲಕ ಕೊಂದಿದ್ದಾನೆ. ಅಚ್ಚರಿ ಎನ್ನಿಸಿದರೂ ಸತ್ಯ. ಹದಿಮೂರು ವರ್ಷದ ಅಪ್ರಾಪ್ತ ಬಾಲಕ , ತನ್ನ ಮನೆ ಮುಂದೆಯೇ ಇರೋ ತನ್ನ ಸ್ನೇಹಿತನಾಗಿದ್ದ ಹದಿನೈದು ವರ್ಷದ ಬಾಲಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಈ ಘಟನೆ ಹುಬ್ಬಳ್ಳಿ  ನಗರದ ಗುರುಸಿದ್ದೇಶ್ವರ ನಗರದಲ್ಲಿ ನಡೆದಿದ್ದು, ಗುರುಸಿದ್ದೇಶ್ವರ ನಗರದ ನಿವಾಸಿಯಾಗಿರೋ ಹದಿನೈದು ವರ್ಷದ ಚೇತನ್ ರಕ್ಕಸಗಿ ಕೊಲೆಯಾದ ಬಾಲಕ. ಇನ್ನು ಕೊಲೆ ಮಾಡಿದ್ದು, ಆತನ ಮನೆ ಮುಂದೆಯೇ ಇರು ಗೆಳೆಯ ಹದಿಮೂರು ವರ್ಷದ ಬಾಲಕ.

ನಿನ್ನೆ(ಮೇ 12 ) ಸಂಜೆ ಏಳು ಗಂಟೆ ಸಮಯದಲ್ಲಿ ಮನೆಯಿಂದ ಚಾಕುತಂದು, ಚೇತನ್ ನ ಹೊಟ್ಟೆಯ ಎಡಬಾಗದಲ್ಲಿ ಇರದಿದ್ದಾನೆ. ಚಾಕು ಇರಿಯುತ್ತಿದ್ದಂತೆ ಚೇತನ್ ಕುಸಿದು ಬಿದ್ದಿದ್ದಾನೆ. ಮಕ್ಕಳೆಲ್ಲರು ಚೀರುತ್ತಿದ್ದಂತೆ, ಕೊಲೆ ಮಾಡಿದ ಬಾಲಕನ ತಾಯಿ ಓಡಿ ಬಂದು, ಚೇತನ ನೆರವಿಗೆ ಬಂದಿದ್ದಾರೆ. ಕೂಡಲೇ ಚೇತನ್ ನನ್ನು, ಕೊಲೆ ಮಾಡಿದ ಬಾಲಕನ ತಾಯಿಯೇ ಕರೆದುಕೊಂಡು ಕಿಮ್ಸ್ ಆಸ್ಪತ್ರೆಗೆ ಬಂದಿದ್ದಾರೆ. ಆದ್ರೆ ಆಸ್ಪತ್ರೆ ಸೇರುವ ಮುನ್ನವೇ ಚೇತನ್ ಬಾರದ ಲೋಕಕ್ಕೆ ಹೋಗಿದ್ದಾನೆ.

ಇನ್ನು ಕೊಲೆಯಾದ ಚೇತನ್ ಈಗಷ್ಟೇ ಒಂಬತ್ತನೇ ತರಗತಿ ಪಾಸ್ ಆಗಿದ್ದ. ಕೊಲೆ ಮಾಡಿದ ಬಾಲಕ ಆರನೇ ತರಗತಿ ಪಾಸ್ ಉತ್ತೀರ್ಣನಾಗಿದ್ದು, ಇಬ್ಬರು ಎದುರು ಬಿದುರು ಮನೆಯ ಸ್ನೇಹಿತರು. ಸದ್ಯ ರಜೆ ಇದ್ದಿದ್ದರಿಂದ, ಎಲ್ಲಾ ಬಾಲಕರು ಸೇರಿದಕೊಂಡು ರಜಾ ದಿನಗಳನ್ನು ಮಜಾ ಮಾಡುತ್ತಿದ್ದರು.

ಅದರಂತೆ ಸೋಮವಾರ ಸಹ ಚೇತನ್ ಮತ್ತು ಕೊಲೆ ಮಾಡಿದ ಬಾಲಕ ಸೇರಿದಂತೆ ಐದಾರು ಸ್ನೇಹಿತರು ಸೇರಿಕೊಂಡು ಆಟವಾಡುತ್ತಿದ್ದರು. ಅಂಗಡಿ ರೀತಿಯ ಸೆಟ್ ಆಪ್ ಮಾಡಿಕೊಂಡು, ಅನೇಕ ವಸ್ತುಗಳನ್ನು ಮಾರಾಟ ಮಾಡುವ ಆಡವಾಡುತ್ತಿದ್ದರಂತೆ. ಆಟವಾಡುತ್ತಿದ್ದಾಗಲೇ ಚೇತನ್ ಮತ್ತು ಕೊಲೆ ಮಾಡಿರೋ ಬಾಲಕನ ನಡುವೆ ಕಿರಿಕ್ ಆಗಿದೆ. ಅಷ್ಟಕ್ಕೆ ಬಾಲಕ ಮನೆಗೆ ಹೋಗಿ ಚಾಕುತಂದು ಚೇತನ್​ಗೆ ಇರಿದಿದ್ದಾನೆ.

ಇನ್ನು ಕೊಲೆ ಮಾಡಿದ ಬಾಲಕ ಮತ್ತು ಕೊಲೆಯಾದ ಬಾಲಕ ಇಬ್ಬರು ಪರಮಾಪ್ತ ಸ್ನೇಹಿತರಂತೆ. ಒಂದೇ ತಟ್ಟೆಯಲ್ಲಿ ಊಟ ಮಾಡುತ್ತಿದ್ದರಂತೆ. ಪ್ರತಿನಿತ್ಯ ಇಬ್ಬರು ಮನೆ ಬಳಿಯೇ ಆಟವಾಡುತ್ತಿದ್ದರು. ಚೇತನ್, ಬಹಳ ಒಳ್ಳೆಯ ಹುಡುಗ ಇದ್ದ ಅಂತ ಸ್ವತ ಕೊಲೆ ಮಾಡಿದ ಬಾಲಕನ ತಾಯಿ ಕೂಡಾ ಕಣ್ಣೀರು ಹಾಕಿ, ಮಗ ಮಾಡಿದ ಕೃತ್ಯಕ್ಕೆ ಕಂಗಾಲಾಗಿದ್ದಾಳೆ. ಇನ್ನು ಹುಬ್ಬಳ್ಳಿಯಲ್ಲಿ ನಡೆದ ಘಟನೆ ಕೇಳಿ ಸ್ವತ ಪೊಲೀಸ್ ಅಧಿಕಾರಿಗಳು ಶಾಕ್ ಆಗಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಕಿಮ್ಸ್ ಗೆ ಆಗಮಿಸಿದ ನಗರ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್, ಪರಿಶೀಲನೆ ನಡೆಸಿದ್ದು, ಕೊಲೆಯಾದ ಬಾಲಕನ ಕುಟುಂಬದವರನ್ನು ಸಮಾಧಾನ ಮಾಡಿದರು.

ಪುಟ್ಟ ಪುಟ್ಟ ಮಕ್ಕಳು ಗಲಾಟೆ ಮಾಡಿಕೊಂಡು ಕೊಲೆ ಮಾಡಿದ್ದು, ನಮ್ಮ ಸರ್ವಿಸ್ ನಲ್ಲಿಯೇ ಇದೇ ಮೊದಲು. ಪಾಲಕರು ಮಕ್ಕಳ ಬಗ್ಗೆ ಜಾಗೃತಿ ವಹಿಸಿಬೇಕು ಎಂದು ನಗರ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್, ಪಾಲಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಸದ್ಯ ಚೇತನ್ ಕೊಲೆಗೆ ಸಂಬಂಧಿದಂತೆ ಕಮರಿಪೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಕೊಲೆ ಮಾಡಿದ ಬಾಲಕನನ್ನು ಬಾಲ ಮಂದಿರಕ್ಕೆ ಕಳುಹಿಸಿದ್ದಾರೆ.

ಆಟವಾಡುತ್ತಿದ್ದಾಗಲೇ ಅಪ್ರಾಪ್ತ ಮಕ್ಕಳು ಜಗಳ ಮಾಡಿಕೊಂಡು, ಕೊಲೆ ಮಾಡುವ ಮಟ್ಟಕ್ಕೆ ಹೋಗಿದ್ದು ಮಾತ್ರ ದುರಂತವೇ ಸರಿ.