
- ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣಕ್ಕೆ ಇಂದು ಒಂದು ವರ್ಷ
- ಸೊಸೆಗೆ ನೌಕರಿ ಕೊಡಲು ಕಾನೂನು ಪ್ರಕಾರ ಬರಲ್ಲ ಅಂದಿದ್ದಾರೆ
- ಮಗುವನ್ನು ನೊಡಿದ್ರೆ ನಮಗೆ ತುಂಬಾ ದುಃಖ ಅನಿಸುತ್ತೆ
ಚಿತ್ರದುರ್ಗದ ರೇಣುಕಾಸ್ವಾಮಿ ದುರಂತ ಪ್ರಕರಣಕ್ಕೆ ಇಂದಿಗೆ ಒಂದು ವರ್ಷ. ಈ ಹಿನ್ನೆಲೆಯಲ್ಲಿ ಮಗನನ್ನು ಕಳೆದುಕೊಂಡಿರುವ ರೇಣುಕಾಸ್ವಾಮಿ ಕುಟುಂಬಸ್ಥರು ಕಣ್ಣೀರಿಡುತ್ತಲೇ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಪುತ್ರ ಶೋಕ ನಿರಂತರವಾಗಿದ್ದು ಎಂದೂ ಮರೆಯಲಾಗಲ್ಲ. ಮೊಮ್ಮಗನ ಆರೈಕೆ ಆಟ ಪಾಠದಲ್ಲಿ ನೋವನ್ನು ಮರೆಯುತ್ತಿದ್ದೇವೆ ಎಂದು ರೇಣುಕಾಸ್ವಾಮಿ ತಂದೆ ಕಾಶಿನಾಥ ಶಿವನಗೌಡ್ರು ಪ್ರತಿಕ್ರಿಯೆ ನೀಡಿದ್ದಾರೆ.
ಇದೇ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು ರಾಜ್ಯ ಸರ್ಕಾರ ಭರವಸೆ ಕೊಟ್ಟಂತೆ ನಡೆದಿಲ್ಲ. ಪ್ರಕರಣ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಸರ್ಕಾರ ಪ್ರಕರಣವನ್ನು ಫಾಸ್ಟ್ ಟ್ರಾಕ್ ಮೂಲಕ ನಡೆಸಬೇಕು. ಮಾನವೀಯ ನೆಲೆಗಟ್ಟಿನಲ್ಲಿ ನಮ್ಮ ಸೊಸೆಗೆ ನೌಕರಿ ವ್ಯವಸ್ಥೆ ಮಾಡಬೇಕು. ನಮಗೆ ಕಾನೂನು, ಸರ್ಕಾರ ಪೊಲೀಸ್ ವ್ಯವಸ್ಥೆಯಲ್ಲಿ ನಂಬಿಕೆ ಇದೆ. ಆದರೆ ಸೊಸೆಗೆ ನೌಕರಿ ಕೊಡಲು ಕಾನೂನು ಪ್ರಕಾರ ಬರಲ್ಲ ಅಂದಿದ್ದಾರೆ.
ತಂದೆ-ತಾಯಿಯಾಗಿ ನಾವು ಹೇಳೋದು ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಅನ್ನೋದು. ನಟ ದರ್ಶನ್ ಅವರು ಜೈಲಿಂದ ಹೊರ ಬಂದ ಮೇಲೆ ಯಾರೂ ನಮ್ಮನ್ನು ಸಂಪರ್ಕ ಮಾಡಿಲ್ಲ. ಒಂದು ವೇಳೆ ಸಂಪರ್ಕಕ್ಕೆ ಬಂದ್ರೆ ಆ ವಿಚಾರ ಬೇರೆ. ನಮ್ಮ ಹಿರಿಯರು ಅಂತಹ ಪ್ರಸಂಗದಲ್ಲಿ ತೀರ್ಮಾನ ಮಾಡುತ್ತಾರೆ ಎಂದು ಶಿವನಗೌಡ್ರು ಹೇಳಿದ್ದಾರೆ.
ಮೃತ ರೇಣುಕಾಸ್ವಾಮಿ ಚಿಕ್ಕಪ್ಪ ಷಡಕ್ಷರಯ್ಯನವರು, ರೇಣುಕಾಸ್ವಾಮಿ ಸಾವನ್ನಪ್ಪಿದ ನಕ್ಷತ್ರದ ಪ್ರಕಾರ ಆತ್ಮಶಾಂತಿಗೆ ಪೂಜೆ ಮಾಡಿದ್ದೇವೆ. ಮಗುವನ್ನು ನೊಡಿದ್ರೆ ನಮಗೆ ತುಂಬಾ ದುಃಖ ಅನಿಸುತ್ತೆ. ರೇಣುಕಾಸ್ವಾಮಿ ಪತ್ನಿ ಸಹನಾ ಜೀವನಕ್ಕೆ ಒಂದು ದಾರಿ ಮಾಡಬೇಕು. ಮಾನವೀಯ ನೆಲೆಗಟ್ಟಿನಲ್ಲಿ ನೌಕರಿ ಕೊಡಬೇಕು. ದೇಶದ ಕಾನೂನು ಇತಿಹಾಸದಲ್ಲಿ ಯಾರನ್ನೂ ಬಿಟ್ಟಿಲ್ಲ. ಹಾಗಾಗಿ ತಪ್ಪಿತಸ್ಥರಿಗೆ ಶಿಕ್ಷೆ ಆಗುವ ಭರವಸೆ ಇದೆ ಎಂದಿದ್ದಾರೆ
ರೇಣುಕಾಸ್ವಾಮಿ ತಾಯಿ ರತ್ನಪ್ರಭಾ ಅವರು ದುಃಖ ತುಂಬಿದ ಮನಸ್ಸಿನಿಂದ ಕಣ್ಣೀರು ಹಾಕಿದ್ದಾರೆ. ಮಗನನ್ನು ಕಳೆದುಕೊಂಡು ದುಃಖದಲ್ಲಿದ್ದೇವೆ. ಆ ನೋವನ್ನು ಮರೆಯಲು ನಮಗೆ ಇಂದಿಗೂ ಆಗುತ್ತಿಲ್ಲ. ಸರ್ಕಾರ ನನ್ನ ಸೊಸೆಯ ಭವಿಷ್ಯಕ್ಕೆ ಒಂದು ಆಧಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ. ರೇಣುಕಾಸ್ವಾಮಿ ಪತ್ನಿ ಸಹನಾ ಅವರು ನಮ್ಮ ಮನೆಯವರು ತೀರಿ ಒಂದು ವರ್ಷ ಆಯ್ತು. ಮನೆಯಲ್ಲಿ ತಂದೆ ತಾಯಿಗೆ ವಯಸ್ಸಾಗಿದೆ. ಒಂದು ವರ್ಷದಿಂದ ಸಾಕಷ್ಟು ದುಃಖ ಅನುಭವಿಸಿದ್ದೀವಿ. ನನ್ನ ಹಾಗೂ ಮಗುವಿನ ಭವಿಷ್ಯಕ್ಕೆ ಸರ್ಕಾರ ನೆರವಾಗಬೇಕು ಎಂದಿದ್ದಾರೆ.

