ಹೇಮಾವತಿ ಲಿಂಕ್ ಕೆನಾಲ್ ಕದನ – ಇಬ್ಬರು ಸ್ವಾಮೀಜಿಗಳು ಸೇರಿ ನೂರಾರು ರೈತರ ವಿರುದ್ಧ ಎಫ್‌ಐಆರ್

ತುಮಕೂರು: ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ವಿರೋಧಿಸಿ ಶನಿವಾರ ರೈತರು ಪ್ರತಿಭಟನೆ ನಡೆಸಿದ ಹಿನ್ನೆಲೆ ಇಬ್ಬರು ಸ್ವಾಮೀಜಿಗಳು ಸೇರಿದಂತೆ ನೂರಾರು ರೈತರ ವಿರುದ್ಧ ಗುಬ್ಬಿ ಪೊಲೀಸರು 11 ಎಫ್‌ಐಆರ್ ದಾಖಲಿಸಿದ್ದಾರೆ

ತುಮಕೂರಿನಿಂದ ರಾಮನಗರಕ್ಕೆ ನೀರು ಒದಗಿಸುವ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿಯನ್ನು ವಿರೋಧಿಸಿ ನಿಷೇಧಾಜ್ಞೆಯ ನಡುವೆಯೂ ರೈತರು, ರಾಜಕೀಯ ಮುಖಂಡರು ಶನಿವಾರ ಬೃಹತ್ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಪೊಲೀಸರು ಹೋರಾಟಗಾರರನ್ನು ವಶಕ್ಕೆ ಪಡೆದ ಪ್ರಸಂಗವೂ ನಡೆಯಿತು. ಈ ಬೆನ್ನಲ್ಲೇ ನೀರಿಗಾಗಿ ಪ್ರತಿಭಟನೆ ನಡೆಸಿದವರ ವಿರುದ್ಧ ಪೊಲೀಸರು ಗುಬ್ಬಿ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಿದ್ದಾರೆ. 

ಪ್ರತಿಭಟನೆ ವೇಳೆ ಎಸ್ಪಿ ಮತ್ತು ಪೊಲೀಸ್ ಅಧಿಕಾರಿಗಳ ಮೇಲೆ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದರು. ಅಲ್ಲದೇ ಹಿಟಾಚಿಗಳನ್ನು ತಾವೇ ಚಾಲನೆ ಮಾಡಿ ಬೃಹತ್ ಗಾತ್ರದ ಪೈಪ್‌ಗಳನ್ನು ಪುಡಿಪುಡಿ ಮಾಡಿದ್ದರು. ಈ ಹಿನ್ನೆಲೆ ತುಮಕೂರು ನಗರ ಶಾಸಕ ಜ್ಯೋತಿಗಣೇಶ್, ತುಮಕೂರು ಗ್ರಾಮಾಂತರ ಶಾಸಕ ಸುರೇಶ್ ಗೌಡ, ತುರುವೇಕೆರೆ ಜೆಡಿಎಸ್ ಶಾಸಕ ಎಂಟಿ ಕೃಷ್ಣಪ್ಪ, ಬಿಜೆಪಿ ಮುಖಂಡ ದಿಲೀಪ್ ಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಹೆಬ್ಬಾಕ ರವಿ ಸೇರಿದಂತೆ ಹಲವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಸಾಕ್ಷ್ಯಧಾರದ ಮೇಲೆ ಮತ್ತಷ್ಟು ಎಫ್‌ಐಆರ್ ದಾಖಲಾಗುವ ಸಾಧ್ಯತೆಯಿದೆ.