ಕರ್ನಾಟಕದಲ್ಲಿ ಕೊರೋನಾ ಮಧ್ಯೆ ಡೆಂಘಿ, ಚಿಕುನ್ ಗುನ್ಯಾ ಟೆನ್ಷನ್

ಬೆಂಗಳೂರು, ಮೇ 29: ಮಳೆ ಹೆಚ್ಚಾದ ಹಿನ್ನೆಲೆ, ಎಲ್ಲೆಡೆ ಸಾಂಕ್ರಾಮಿಕ ರೋಗಗಳ ಸಮಸ್ಯೆ ಉಂಟಾಗುತ್ತಿದೆ. ಈ ಮಧ್ಯೆ ಡೆಂಘಿ ಹಾಗೂ ಚಿಕುನ್ ಗುನ್ಯಾದ ಪ್ರಕರಣಗಳು ಕೂಡ ಉಲ್ಬಣವಾಗಿದೆ. ಬೆಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ಡೆಂಘಿ ಟೆನ್ಷನ್ ಶುರುವಾಗಿದೆ. ಈಗಾಗಲೇ ಕೊರೋನಾ‌ ಪ್ರಕರಣ ನೂರರ ಗಡಿಯನ್ನ ತಲುಪಿದ್ದು, ಆರೋಗ್ಯ ಇಲಾಖೆ ಇದನ್ನ ತಡೆಯಲು ಮುಂದಾಗಿದೆ. ಈ ಬೆನ್ನಲ್ಲೇ ಇದೀಗ ಸಿಲಿಕಾನ್ ಸಿಟಿಯಲ್ಲಿ ಡೆಂಘಿ ಪ್ರಕರಣಗಳ ಹೆಚ್ಚಳವಾಗಿದ್ದು, ಇದರ ಗ್ರಾಫ್ ಏರುತ್ತಿದೆ.

1 ಸಾವಿರಕ್ಕೂ ಹೆಚ್ಚು ಜನರಲ್ಲಿ ಡೆಂಘಿ, 366 ಜನರಲ್ಲಿ ಚಿಕನ್ ಗುನ್ಯಾ

ರಾಜಧಾನಿ ಬೆಂಗಳೂರು ಸೇರಿದ್ದಂತೆ ರಾಜ್ಯದಲ್ಲಿ ಡೆಂಘಿ ಹಾಗೂ ಚಿಕನ್ ಗೂನ್ಯಾ ಕೇಸ್ ಹೆಚ್ಚಳವಾಗುತ್ತಿದೆ. ಮುಂಗಾರು ಮಳೆ ಎಫೆಕ್ಟ್ ಹಿನ್ನೆಲೆ ಬೆಂಗಳೂರು ಹಾಗೂ ರಾಜ್ಯದಲ್ಲಿ ಡೆಂಘಿ ಹಾಗೂ ಚಿಕನ್ ಗುನ್ಯಾ ಕೇಸ್ ಜಾಸ್ತಿಯಾಗಿದೆ. 25 ಸಾವಿರಕ್ಕೂ ಅಧಿಕ ಡೆಂಘಿ ಟೆಸ್ಟ್ ಮಾಡಲಾಗಿದ್ದು, 1 ಸಾವಿರಕ್ಕೂ ಹೆಚ್ಚು ಜನರಲ್ಲಿ ಡೆಂಘಿ ಜ್ವರ ಹಾಗೂ 366 ಜನರಲ್ಲಿ ಚಿಕನ್ ಗುನ್ಯಾ ದೃಢಪಟ್ಟಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಗರಿಷ್ಠ ಪ್ರಕರಣಗಳು ವರದಿಯಾಗಿದೆ. 4509 ಡೆಂಘಿ ಶಂಕಿತರ ರಕ್ತದ ಮಾದರಿಗಳನ್ನು ಪರೀಕ್ಷಿಸಲಾಗಿದೆ. ಅವರಲ್ಲಿ 705 ಮಂದಿಯಲ್ಲಿ ಡೆಂಘಿ ದೃಢಪಟ್ಟಿದೆ. ಸೊಳ್ಳೆ ಕಾಟದಿಂದ  ರಾಜ್ಯದಲ್ಲಿ 821 ಜನರಲ್ಲಿ ಡೆಂಘಿ ಪತ್ತೆಯಾಗಿದ್ದು, ಒಟ್ಟು 1526 ಜನರಲ್ಲಿ ಡೆಂಘಿ ಜ್ವರ ಕಂಡು ಬಂದಿದೆ. ಕಳೆದ ವರ್ಷ ಡೆಂಘಿ ಕೇಸ್ 32 ಸಾವಿರದ ಗಡಿ ದಾಟಿತ್ತು. ಈ ವರ್ಷ ಮೇ ನಲ್ಲಿಯೇ ಮಳೆ ‌ಮುಂಗಾರು ಶುರುವಾಗಿದ್ದು, ಡೆಂಘಿ ಪ್ರಕರಣಗಳು ಹೆಚ್ಚಳವಾಗಿದೆ. ಡೆಂಘಿ ಜೊತೆ ಚಿಕನ್ ಗೂನ್ಯಾ ಕೇಸ್ ಕೂಡ ಬಂದಿವೆ. ರಾಜ್ಯದಲ್ಲಿ 366 ಚಿಕನ್ ಗೂನ್ಯಾ ಕೇಸ್ ಕಂಡು ಬಂದಿದ್ದು, ಆರೋಗ್ಯ ಇಲಾಖೆ ಅಲರ್ಟ್ ಆಗಿದೆ.

ಇನ್ನು ಕೊವಿಡ್ ಜೊತೆಗೆ ಡೆಂಘಿ ಹಾಗೂ ಚಿಕುನ್ ಗುನ್ಯಾ ಹೆಚ್ಚಳವಾಗಿದ್ದರಿಂದ, ವೈದ್ಯರು ಆರೋಗ್ಯದ ಬಗ್ಗೆ ನಿಗಾ ವಹಿಸಿ ಅಂತಿದ್ದಾರೆ. ಜೊತೆಗೆ ವೈದ್ಯರನ್ನ ಸಂಪರ್ಕಿಸಿ, ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ಜನರಲ್ ಫಿಜಿಶಿಯನ್​ ಡಾ ರಶ್ಮಿ ಅವರು ಹೇಳಿದ್ದಾರೆ.

ಒಟ್ಟಿನಲ್ಲಿ ಸದ್ಯ ಕೊರೋನಾ‌ದ ಜೊತೆಗೆ ಡೆಂಘಿ ಹಾಗೂ ಚಿಕುನ್ ಗುನ್ಯಾ ಕೂಡ ಶುರುವಾಗಿದ್ದು, ಜನರು ಈ ಬಗ್ಗೆ ಆತಂಕ ಪಡದೆ ಗಮನಹರಿಸಬೇಕಿದೆ. ಹಾಗೂ ಆರೋಗ್ಯ ಇಲಾಖೆ ಕೂಡ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಿದೆ.