ಬೆಂಗಳೂರಿನಲ್ಲಿ ತರಕಾರಿ ಬೆಲೆಗಳು ಏರಿಕೆಯಾಗಿವೆ. ಕೆಲವು ಕಡೆ ಮಳೆಯ ಅಭಾವ ಮತ್ತು ಬಿಸಿಲಿನ ತೀವ್ರತೆಯಿಂದ ಬೆಳೆಗಳಿಗೆ ಹಾನಿಯಾಗಿದೆ. ಇದರಿಂದಾಗಿ ಬೀನ್ಸ್, ಬಟಾಣಿ, ನಿಂಬೆ, ಮತ್ತು ಇತರ ತರಕಾರಿಗಳ ದರಗಳು ಗಗನಕ್ಕೇರಿವೆ. ಮಳೆಯಿಂದಾಗಿ ಹಸಿಮೆಣಸು, ಹಾಗಲಕಾಯಿ ಮುಂತಾದ ತರಕಾರಿಗಳ ಇಳುವರಿ ಕೂಡ ಕಡಿಮೆಯಾಗಿದೆ. ಇದರಿಂದಾಗಿ ಬಡ ಮತ್ತು ಮಧ್ಯಮ ವರ್ಗದ ಜನರು ತೊಂದರೆ ಅನುಭವಿಸುತ್ತಿದ್ದಾರೆ.

ಬೆಂಗಳೂರು, ಮೇ 06: ಕೆಲವಡೆ ಮಳೆಯ ಅಭಾವ ಹಾಗೂ ಬಿಸಿಲಿನ ಝಳದಿಂದ ಬೆಳೆಗಳು ಹಾನಿಗೀಡಾಗಿವೆ. ಹೀಗಾಗಿ ಕೆಲ ತರಕಾರಿಗಳ ದರ ಏರಿಕೆಯಾಗಿದೆ. ಇದರಿಂದ ಬೆಂಗಳೂರಿನ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಮೇಲಿಂದ ಮೇಲೆ ಬೆಲೆ ಏರಿಕೆಯ ಬಿಸಿ ತಟ್ಟುತ್ತಿದೆ. ತರಕಾರಿ ಕೊಳ್ಳಲು ಯೋಚಿಸಬೇಕಾದ ಪರಿಸ್ಥಿತಿ ಉದ್ಭವವಾಗಿದೆ. ಬೀನ್ಸ್, ಬಟಾಣಿ, ನೌಕಲ್, ಖಾಲಿ ಫ್ಲವರ್, ನಿಂಬೆ, ಕ್ಯಾಪ್ಸಿಕಂ, ತೆಂಗಿನಕಾಯಿ ದರಗಳು ಗಗನಕ್ಕೆ ಏರಿಕೆಯಾಗಿವೆ. ಹೇಗಪ್ಪ ಖರೀದಿ ಮಾಡುವುದು ಅಂತ ಗ್ರಾಹಕರು ಯೋಚಿಸುತ್ತಿದ್ದಾರೆ. ಇನ್ನು, ಬಾಳೆ ಹಣ್ಣಿನ ದರ ಕೂಡ ದಿಢೀರ್ ಹೆಚ್ಚಾಗಿದ್ದು, ಕೇಜಿಗೆ 80 ರಿಂದ 100 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ.

| ತರಕಾರಿ ಬೆಲೆ (ರೂ.ಗಳಲ್ಲಿ) | |
| ತರಕಾರಿ | ಪ್ರಸ್ತುತ ದರ |
| ಸೌತೆ ಕಾಯಿ | 40 |
| ಬೀನ್ಸ್ | 80 |
| ಬಟಾಣಿ | 140 |
| ನೌಕಲ್ | 60 |
| ದಪ್ಪ ಮೆಣಸಿನಕಾಯಿ | 60 |
| ನಿಂಬೆ | 7 |
| ತೆಂಗಿನಕಾಯಿ | 70 |
| ಬಿಳಿ ಬದನೆಕಾಯಿ | 36 |
| ಗುಂಡು ಬದನೆಕಾಯಿ | 28 |
| ದಪ್ಪ ಮೆಣಸಿನಕಾಯಿ | 56 |
| ಗೋರಿಕಾಯಿ | 64 |
| ಡಬ್ಬಲ್ ಬೀನ್ಸ್ | 115 |
| ಬೆಳ್ಳುಳ್ಳಿ | 174 |
| ಎಲೆಕೋಸು | 22 |
| ಟೊಮೇಟೊ | 21 |
| ಹೀರೇಕಾಯಿ | 46 |
| ಸಬ್ಬಕ್ಕಿ ಸೊಪ್ಪು | 80 |
| ಮೆಂತ್ಯ ಸೊಪ್ಪು | 85 |
| ಬೆಂಡೆಕಾಯಿ | 44 |
ಮಳೆಯಿಂದ ಇಳುವರಿ ಕುಸಿತ
ಮೋಡ ಕವಿದ ವಾತಾವರಣದೊಂದಿಗೆ ಮಳೆ ಬರುತ್ತಿದ್ದರೆ ಕೆಲವು ತರಕಾರಿಗಳು ಬೇಗ ಕೊಯ್ಲಿಗೆ ಬರುವುದಿಲ್ಲ. ಈ ಹಿನ್ನೆಲೆಯಲ್ಲಿ ಹಸಿಮೆಣಸಿಕಾಯಿ, ಚಪ್ಪರದವರೆಕಾಯಿ, ಹಾಗಲಕಾಯಿ, ಗೋರಿಕಾಯಿ ಮತ್ತಿತರ ತರಕಾರಿಗಳ ಇಳುವರಿ ಕಡಿಮೆಯಾಗಿದೆ. ಜೊತೆಗೆ ಮೆಂತ್ಯ ಸೊಪ್ಪು, ಸಬ್ಬಕ್ಕಿ ಸೊಪ್ಪು, ಹರಿವೆ ಸೊಪ್ಪು, ದಂಟಿನ ಸೊಪ್ಪು, ಪಾಲಕ್ ಸೊಪ್ಪುಗಳು ಕೂಡ ಮಳೆಯಿಂದ ಹಾಳಾಗಿದ್ದು, ದರಗಳು ದಿಢೀರ್ ಏರಿಕೆಯಾಗಿದೆ. ಆದರೆ, ಈ ನಡುವೆ ಗುಣಮಟ್ಟದ ಈರುಳ್ಳಿ-ಟೊಮೆಟೊ 5 ಕೆಜಿಗೆ 100 ರೂ. ನಂತೆ ಮಾರಾಟವಾಗುತ್ತಿದೆ.

