
ಉತ್ತರ ಕನ್ನಡ, ಏಪ್ರಿಲ್ 20: ನಿವೃತ್ತ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ (68) ಅವರನ್ನು ಅವರ ಬೆಂಗಳೂರಿನ ಹೆಚ್ಎಸ್ಆರ್ ಲೇಔಟ್ ಮನೆಯಲ್ಲಿ ಹತ್ಯೆ ಮಾಡಲಾಗಿದೆ. ಓಂ ಪ್ರಕಾಶ್ ಅವರ ಕೊಲೆ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಓಂ ಪ್ರಕಾಶ ಅವರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ. ಓಂ ಪ್ರಕಾಶ್ ಅವರ ಕೊಲೆ ಆಸ್ತಿ ವಿವಾದ ಕಾರಣಕ್ಕೆ ನಡೆದಿದೆ ಎಂದು ಶಂಕಿಸಲಾಗಿದೆ. ಓಂ ಪ್ರಕಾಶ್ ಅವರಿಗೆ ಓರ್ವ ತಂಗಿ ಇದ್ದು, ಅವರು, ಜೋಯಿಡಾ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಹಿಂದಿ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದರು.
ಇನ್ನು, ಓಂ ಪ್ರಕಾಶ್ ಅವರು ಸೂಪಾ ತಾಲೂಕಿನ ಸಾಮ ಜೋಯಿಡಾ ಗ್ರಾಮದಲ್ಲಿ ಶ್ರೀ ಗಂಧದ ತೋಟ ಮಾಡಿದ್ದರು. ಓಂ ಪ್ರಕಾಶ್ ಅವರು 2011-12 ರಲ್ಲಿ ನಾಗೋಡಾ ಗ್ರಾಮದ ಸರ್ವೇ ನಂಬರ್ 3 ರಲ್ಲಿನ 2 ಎಕರೆ 20 ಗುಂಟೆ ಭೂಮಿಯನ್ನು ಖರೀದಿಸಿದ್ದರು. ಶ್ರೀ ಗಂಧದ ತೋಟದಲ್ಲಿ ಸುಂದರವಾದ ಫಾರ್ಮ್ ಹೌಸ್ ಮಾಡಲಾಗಿತ್ತು. ಓಂ ಪ್ರಕಾಶ್ ಅವರು ಆಗಾಗ ಫಾರ್ಮ್ ಹೌಸ್ಗೆ ಬಂದು ವಿಶ್ರಾಂತಿ ಪಡೆಯುತ್ತಿದ್ದರು. ಶ್ರೀ ಗಂಧದ ಜೊತೆಗೆ ಬಾಳೆ, ಕಾಳಮೆಣಸು, ಸಾಗವಾಣಿ ಸೇರಿದಂತೆ ಬೆಳೆ ಬೆಳೆದಿದ್ದರು. ಈ ಹಿಂದೆ ಓಂ ಪ್ರಕಾಶ ತೋಟದಲ್ಲಿನ ಶ್ರೀ ಗಂಧದ ಮರಗಳು ಕಳ್ಳತನ ಆಗಿ ಕೇಸ್ ದಾಖಲಾಗಿತ್ತು.
ಕಾಳಿ ನದಿ ಪಕ್ಕದಲ್ಲಿ 5 ಎಕರೆ ಭೂಮಿ
ಸೂಪಾ ತಾಲೂಕಿನ ಕಾಳಿ ನದಿ ಪಕ್ಕದ ಬಾಡಗುಂದ ಬಳಿ ಓಂ ಪ್ರಕಾಶ್ ಅವರು ಐದು ಎಕರೆ ಭೂಮಿ ಹೊಂದಿದ್ದರು. ಐದು ಏಕರೆ ಜಾಗದಲ್ಲಿ ರೆಸಾರ್ಟ್ ನಿರ್ಮಾಣ ಮಾಡಲು ನಿರ್ಧರಿಸಿದ್ದರು. ಕಾಳಿ ನದಿಯ ಪಕ್ಕದಲ್ಲೆ ಜಾಗ ಇರುವುದರಿಂದ ರ್ಯಾಫ್ಟಿಂಗ್ ಆರಂಭ ಮಾಡಿದ್ದರು. ಸದ್ಯ ಐದು ಏಕರೆ ಜಮೀನು ಆವರಣದಲ್ಲಿ ರ್ಯಾಫ್ಟಿಂಗ್ ಮಾಡಲಾಗುತ್ತಿದೆ. ಈ ಎಲ್ಲ ಆಸ್ತಿಯೂ ಓಂ ಪ್ರಕಾಶ್ ಅವರ ಪುತ್ರ ಕಾರ್ತಿಕೇಶ್ ಹೆಸರಿನಲ್ಲಿದೆ.
ಓಂ ಪ್ರಕಾಶ್ ಅವರು1996 ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಓಂ ಪ್ರಕಾಶ ತಂಗಿ ಜೋಯಿಡಾದ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಪ್ರಾದ್ಯಾಪಕರಾಗಿ ಕೆಲಸ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಓಂ ಪ್ರಕಾಶ ಅವರು ಜೋಯಿಡಾ ತಾಲೂಕಿನ ಜೊತೆ ಅವಿನಾಭಾವ ಸಂಬಂಧ ಹೊಂದಿದ್ದಾರೆ.

