ಸರ್ಕಾರಿ ವಾಹನದಲ್ಲೇ ರನ್ಯಾ ಚಿನ್ನ ಸಾಗಾಟ: ತನಿಖೆ ವೇಳೆ ಬಯಲಾಯ್ತು ಸ್ಪೋಟಕ ಮಾಹಿತಿ

ಬೆಂಗಳೂರು, ಮಾರ್ಚ್​ 15: ಚಿನ್ನ ಕಳ್ಳಸಾಗಾಣಿಕೆ ಆರೋಪದ ಮೇಲೆ ನಟಿ ರನ್ಯಾ ರಾವ್​ ರನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್​ಐ) ಅಧಿಕಾರಿಗಳು ಬಂಧಿಸಿದ್ದಾರೆ. ಡಿಆರ್​ಐ ಅಧಿಕಾರಿಗಳ ತನಿಖೆ ವೇಳೆ ರನ್ಯಾ ರಾವ್ ಚಿನ್ನವನ್ನು ಅಕ್ರ​ಮವಾಗಿ ವಿಮಾನ ನಿಲ್ದಾಣದಿಂದ ಹೇಗೆ ಸಾಗಿಸುತ್ತಿದ್ದಳು ಎಂಬುವುದು ಪತ್ತೆಹಚ್ಚಿದ್ದಾರೆ. ದುಬೈನಿಂದ ಅಕ್ರಮವಾಗಿ ತಂದ ಚಿನ್ನವನ್ನು ನಟಿ ರನ್ಯಾ ರಾವ್ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸರ್ಕಾರಿ ವಾಹನದಲ್ಲಿ ಸಾಗಿಸುತ್ತಿದ್ದರು ಎಂಬುವುದು ಡಿಆರ್​ಐ ತನಿಖೆ ವೇಳೆ ಬಹಿರಂಗವಾಗಿದೆ.

ರಾಜ್ಯ ಪೊಲೀಸ್​ ಇಲಾಖೆಯಲ್ಲಿ ಐಪಿಎಸ್ ಅಧಿಕಾರಿಗಳಿಗೆ ಎರಡು ಹೆಚ್ಚುವರಿ ಕಾರುಗಳನ್ನು ನೀಡಲಾಗುತ್ತದೆ. ಈ ಹೆಚ್ಚುವರಿ ಕಾರು ಅಧಿಕಾರಿಯವರ ಕುಟುಂಬದವರಿಗೆ ಬಳಕೆಯಾಗುತ್ತದೆ. ಅದೇ ರೀತಿ, ಡಿಜಿಪಿ ರಾಮಚಂದ್ರ ರಾವ್ ಅವರಿಗೂ ಕೂಡ ಸರ್ಕಾರ ಹೆಚ್ಚುವರಿ ಕಾರು ನೀಡಲಾಗಿತ್ತು. ಈ ಸರ್ಕಾರಿ ವಾಹನದಲ್ಲೇ ರನ್ಯಾ ರಾವ್​ ಚಿನ್ನವನ್ನು ಸಾಗಿಸಿದ್ದಾರೆ. ರನ್ಯಾ ರಾವ್​ ಇದೇ ವಾಹನದಲ್ಲಿ ಹಲವು ಬಾರಿ ವಿಮಾನ ನಿಲ್ದಾಣಕ್ಕೆ ಓಡಾಡುತಿದ್ದರು ಎಂದು ತನಿಖೆ ವೇಳೆ ತಿಳಿದುಬಂದಿದೆ.

ವಿಮಾನ ನಿಲ್ದಾಣ ಸಿಬ್ಬಂದಿಗೆ ನೋಟಿಸ್​

ಇನ್ನು, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರೋಟೋಕಾಲ್ ಸಿಬ್ಬಂದಿಗೆ ಸಿಬಿಐ ಅಧಿಕಾರಿ ಗೌರವ್ ಗುಪ್ತಾ ನೇತೃತ್ವದಲ್ಲಿ ತನಿಖೆ ಗೌರವ್ ಗುಪ್ತಾ ನೇತೃತ್ವದ ತನಿಖಾ ತಂಡ ನೋಟಿಸ್​ ಜಾರಿ ಮಾಡಿದೆ. ಬಸವರಾಜು, ಮಹಾಂತೇಶ್, ವೆಂಕಟರಾಜು ಎಂಬುವರಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ಶನಿವಾರ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಗೌರವ್ ಗುಪ್ತಾ ಟೀಂ ಈಗಾಗಲೇ ಪ್ರೋಟೋಕಾಲ್ ನಿಯಮಗಳ ಕುರಿತು ಎಲ್ಲಾ ನಿಯಮಗಳನ್ನು ಅಧ್ಯಯನ ಮಾಡಿದೆ. ಅಧಿಕಾರಿಗಳು ಘಟನೆಗೂ ಹಿಂದಿನ ದಿನದ ಸಿಸಿಟಿವಿ ಪರಿಶೀಲಿಸಿದೆ.

ಈಗಿರುವ ಹಾಗೂ ಹಿಂದೆ ಇದ್ದ ಅಧಿಕಾರಿಗಳಿಗೆ ತನಿಖೆ ಬಿಸಿ ತಟ್ಟುವ ಸಾಧ್ಯತೆ ಇದೆ. ರನ್ಯಾ ರಾವ್​ ಒಂದು ವರ್ಷದಲ್ಲಿ 25ಕ್ಕೂ ಹೆಚ್ಚು ಬಾರಿ ವಿದೇಶ ಪ್ರಯಾಣ ಮಾಡಿದ್ದರು. ಐಎಎಸ್​ ಅಧಿಕಾರಿ ಗೌರವ್ ಗುಪ್ತಾ, ಡಿಐಜಿ ವಂಶಿಕೃಷ್ಣರಿಂದ ವಿಮಾನ ನಿಲ್ದಾಣದ ​ಟರ್ಮಿನಲ್-2ನಲ್ಲಿ ಪರಿಶೀಲಿಸಲಾಗಿದೆ.  ವಿಮಾನ ನಿಲ್ದಾಣದ ​ಭದ್ರತಾ ಅಧಿಕಾರಿ, ಸಿಬ್ಬಂದಿಯ ಹೇಳಿಕೆ ದಾಖಲಿಸಿಕೊಂಡಿದ್ದಾರೆ.

ರನ್ಯಾಗೆ ಇಡಿ, ಸಿಬಿಐ ಸೆರೆ ಭೀತಿ

ಚಿನ್ನ ಕಳ್ಳಸಾಗಾಣಿಕೆ ಪ್ರಕರಣವನ್ನು ಜಾರಿ ನಿರ್ದೇಶನಾಲಯ (ED) ಮತ್ತು ಸಿಬಿಐ ತನಿಖಾ ಸಂಸ್ಥೆಗಳು ಕೂಡ ತನಿಖೆ ನಡೆಸುತ್ತಿವೆ. ಬಂಧಿತ ನಟಿ ರನ್ಯಾ ರಾವ್ ಜಾಮೀನು ಅರ್ಜಿ ತಿರಸ್ಕೃತ ಬೆನ್ನಲ್ಲೇ ಇಡಿ, ಸಿಬಿಐನಿಂದ ಬಂಧನ ಭೀತಿ ಎದುರಾಗಿದೆ. ಪ್ರಕರಣದಲ್ಲಿ ಹೆಚ್ಚಿನ ವಿಚಾರಣೆಗೆ ರನ್ಯಾ ರಾವ್​ರನ್ನು ಮೊದಲು ಇಡಿ ಅಧಿಕಾರಿಗಳು ಬಳಿಕ ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆಗೊಳಪಡಿಸುವ ಸಾಧ್ಯತೆ ಇದೆ.