ಕಾರಿಗೆ ಡಿಕ್ಕಿ ಹೊಡೆದ ಲಾರಿ: ಕಾರು ಚಾಲಕ ಸಾವು

ಯಲ್ಲಾಪುರ: ಲಾರಿಯೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಒಬ್ಬ ಮೃತಪಟ್ಟು, ನಾಲ್ಕು ಜನರು ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 63 ರ ಅರಬೈಲ್ ಘಟ್ಟದಲ್ಲಿ ನಡೆದಿದೆ. ಕಾರ್ ಚಾಲಕ ಕೊಪ್ಪಳ ಜಿಲ್ಲೆಯ ಬೂದಿಹಾಳದ ಸೋಮಪ್ಪ ದೊಡ್ಡಮನೆ (33) ಮೃತ ವ್ಯಕ್ತಿ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕೊಪ್ಪಳದ ಚುಕ್ಕನಕಲ್ ನ ಮಾರುತಿ ಗಾಳೆಪ್ಪ ಹರಿಜನ, ದುರ್ಗವ್ವ ಬಾಳಪ್ಪ ಹರಿಜನ, ಯಮನವ್ವ ನಿಂಗಪ್ಪ ಮೆಳ್ಳಿಕೇರಿ, ಮೂಕಹನುಮಪ್ಪ ಫಕೀರಪ್ಪ ಗೊಂಡಬಾಳಾ ಗಾಯಗೊಂಡವರು.

ಅಂಕೋಲಾ ಕಡೆಯಿಂದ ಯಲ್ಲಾಪುರ ಕಡೆಗೆ ಬರುತ್ತಿದ್ದ ಲಾರಿ, ಎದುರಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಕಾರು ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಲಾರಿ ಚಾಲಕ ಲಾರಿಯನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಕಾರಿನಲ್ಲಿದ್ದ ಐದೂ ಜನರು ಗಾಯಗೊಂಡಿದ್ದರು. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸೋಮಪ್ಪ ದೊಡ್ಡಮನೆ ಮೃತ ಪಟ್ಟಿದ್ದಾರೆ. ಈ ಕುರಿತು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.