
ಪ್ರಯಾಗ್ರಾಜ್ನಲ್ಲಿ ಮಹಾಕುಂಭ ಮೇಳದಲ್ಲಿ ಭಾನುವಾರ ಮಧ್ಯಾಹ್ನ ಅಗ್ನಿ ಅವಘಡ ಸಂಭವಿಸಿತ್ತು. ಮಹಾ ಕುಂಭಮೇಳದ ಸೆಕ್ಟರ್ 19ರಲ್ಲಿ 2-3 ಸಿಲಿಂಡರ್ಗಳು ಸ್ಫೋಟಗೊಂಡಿದ್ದವು. ಅದೃಷ್ಟವಶಾತ್ ಯಾವುದೇ ಸಾವು ಸಂಭವಿಸಿಲ್ಲ. ಟೆಂಟ್ಗಳು ಮಾತ್ರ ಬೆಂಕಿಗೆ ಆಹುತಿಯಾಗಿವೆ. ಘಟನೆ ಬಗ್ಗೆ ಪ್ರಯಾಗ್ರಾಜ್ ಎಡಿಜಿಪಿ ಭಾನು ಭಾಸ್ಕರ್ ಪ್ರತಿಕ್ರಿಯಿಸಿದ್ದು, ಎಲ್ಲರೂ ಸುರಕ್ಷಿತವಾಗಿದ್ದಾರೆ. ಯಾರಿಗೂ ಕೂಡ ಗಾಯಗಳಾಗಿಲ್ಲ. ಪರಿಸ್ಥಿತಿ ಹತೋಟಿಗೆ ತರಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಭಾನು ಭಾಸ್ಕರ್, ಮಹಾ ಕುಂಭಮೇಳದ ಸೆಕ್ಟರ್ 19ರಲ್ಲಿ 2-3 ಸಿಲಿಂಡರ್ಗಳು ಸ್ಫೋಟಗೊಂಡಿವೆ. ಹಾಗಾಗಿ ಶಿಬಿರಗಳಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಸದ್ಯ ಬೆಂಕಿ ನಿಯಂತ್ರಿಸಲಾಗಿದ್ದು, ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಹೇಳಿದ್ದಾರೆ.
ಅಗ್ನಿ ಅವಘಡದಲ್ಲಿ ಯಾರಿಗೂ ಕೂಡ ಗಾಯಗಳಾಗಿಲ್ಲ. ಅಗ್ನಿ ಅವಘಡದ ಕುರಿತು ಸೂಕ್ತ ತನಿಖೆ ನಡೆಸಲಾಗುವುದು. ಆಗಲೇ ಅವಘಡ ಹೇಗೆ ಸಂಭವಿಸಿತು ಎಂಬುದನ್ನು ನಾವು ಹೇಳಲು ಸಾಧ್ಯವಾಗುತ್ತದೆ ಎಂದಿದ್ದಾರೆ.
ನಿರ್ಲಕ್ಷ್ಯ, ಉತ್ಸಾಹವೇ ಇಂತಹ ಘಟನೆಗಳಿಗೆ ಕಾರಣ: ಸದ್ಗುರು
ಇನ್ನು ಘಟನೆ ಕುರಿತಾಗಿ ಸದ್ಗುರು ಜಗ್ಗಿ ವಾಸುದೇವ್ ಅವರು ಟ್ವೀಟ್ ಮಾಡಿದ್ದು, ಒಂದೇ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದಾಗ, ನಿರ್ಲಕ್ಷ್ಯ ಮತ್ತು ಅತಿಯಾದ ಉತ್ಸಾಹದಿಂದಾಗಿ ಬೆಂಕಿ ಮತ್ತು ಕಾಲ್ತುಳಿತಗಳಂತಹ ಅವಘಡಕ್ಕೆ ಕಾರಣವಾಗಬಹುದು ಎಂದು ಹೇಳಿದ್ದಾರೆ.
144 ವರ್ಷಗಳಿಗೊಮ್ಮೆ ನಡೆಯುವ ಈ ಅದ್ಭುತ ಮತ್ತು ಮಹತ್ವಪೂರ್ಣ ಕಾರ್ಯವನ್ನು ಹಾಳುಮಾಡುವುದು ಮತ್ತು ಅಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳುವುದು ಸಂಬಂಧಪಟ್ಟವರ, ಅಲ್ಲಿಗೆ ಹೋಗುವ ಎಲ್ಲಾ ಭಕ್ತರು ಮತ್ತು ಸಹಜವಾಗಿ ಆಡಳಿತದ ಜವಾಬ್ದಾರಿಯಾಗಿರುತ್ತದೆ ಎಂದಿದ್ದಾರೆ.
ಮಹಾಕುಂಭವು ಭಯಹುಟ್ಟಿಸುವ ಸ್ಥಳಕ್ಕಿಂತ ಹೆಚ್ಚಾಗಿ ಲಕ್ಷಾಂತರ ಭಕ್ತರ ಆಧ್ಯಾತ್ಮಿಕ ವಿಕಾಸದ ಕೇಂದ್ರಬಿಂದುವಾಗಲಿ. ಬರೋಬ್ಬರಿ 144 ವರ್ಷಗಳ ಬಳಿಕ ನಡೆಯುತ್ತಿರುವ ಈ ಮಹಾಕುಂಭವನ್ನು ಯಶಸ್ಸು ಮಾಡುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕು ಎಂದು ತಿಳಿಸಿದ್ದಾರೆ.
ಸಿಎಂ ಆದಿತ್ಯನಾಥ್ಗೆ ಪ್ರಧಾನಿ ಮೋದಿ ಕರೆ
ಇನ್ನು ಘಟನಾ ಸ್ಥಳಕ್ಕೆ ಸಿಎಂ ಯೋಗಿ ಆದಿತ್ಯನಾಥ್ ಭೇಟಿ ನೀಡಿ, ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಬಳಿಕ ಸಿಎಂ ಆದಿತ್ಯನಾಥ್ಗೆ ಪ್ರಧಾನಿ ನರೇಂದ್ರ ಮೋದಿ ಕರೆ ಮಾಡಿ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.


