ಕೇಜ್ರಿವಾಲ್ ಮೇಲೆ ಪರ್ವೇಶ್ ವರ್ಮಾ ಗೂಂಡಾಗಳಿಂದ ದಾಳಿಯ ಆರೋಪ ಮಾಡಿದ ಆಪ್​ಗೆ ಬಿಜೆಪಿ ತಿರುಗೇಟು

ನವದೆಹಲಿ: ನವದೆಹಲಿ ವಿಧಾನಸಭಾ ಕ್ಷೇತ್ರದ ಪ್ರದೇಶದಲ್ಲಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮೇಲೆ ದಾಳಿ ನಡೆಸಲಾಗಿದೆ. ಇಂದು ಕಾರಿನ ಮೇಲೆ ಕಲ್ಲು ತೂರಾಟ ನಡೆದಿದ್ದು, ಇದು ಗೊಂದಲಕ್ಕೆ ಕಾರಣವಾಯಿತು. ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ್ವೇಶ್ ವರ್ಮಾ ಅವರ ‘ಗೂಂಡಾಗಳು’ ಕೇಜ್ರಿವಾಲ್ ಮೇಲೆ ದಾಳಿ ಮಾಡಿದ್ದಾರೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿತ್ತು. ಆದರೆ, ಇದಕ್ಕೆ ಬಿಜೆಪಿ ತಿರುಗೇಟು ನೀಡಿದೆ.

ಬಿಜೆಪಿ ಸೋಲಿನ ಭಯ ಮತ್ತು ಭೀತಿಯಿಂದ ಈ ದಾಳಿ ನಡೆಸಿದೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿತ್ತು. “ಸೋಲಿನ ಭಯದಿಂದ ಬಿಜೆಪಿ ಭಯಗೊಂಡು ತನ್ನ ಗೂಂಡಾಗಳನ್ನು ಅರವಿಂದ್ ಕೇಜ್ರಿವಾಲ್ ಮೇಲೆ ದಾಳಿ ಮಾಡಲು ಪ್ರೇರೇಪಿಸಿತು. ಬಿಜೆಪಿ ಅಭ್ಯರ್ಥಿ ಪ್ರವೇಶ್ ವರ್ಮಾ ಅವರ ಗೂಂಡಾಗಳು ಅರವಿಂದ್ ಕೇಜ್ರಿವಾಲ್ ಪ್ರಚಾರ ನಡೆಸುತ್ತಿದ್ದಾಗ ಇಟ್ಟಿಗೆ ಮತ್ತು ಕಲ್ಲುಗಳಿಂದ ದಾಳಿ ಮಾಡಿ ಅವರು ಪ್ರಚಾರ ಮಾಡಲು ಸಾಧ್ಯವಾಗದಂತೆ ಹಲ್ಲೆ ಮಾಡಲು ಪ್ರಯತ್ನಿಸಿದರು.” ಎಂದು ಆಪ್ ಹೇಳಿದೆ. ಈ ದಾಳಿಯನ್ನು ಹೇಡಿತನ ಎಂದು ಕರೆದ ಆಮ್ ಆದ್ಮಿ ಪಕ್ಷ “ಬಿಜೆಪಿ ನಾಯಕರೇ, ನಿಮ್ಮ ಹೇಡಿತನದ ದಾಳಿಗೆ ಕೇಜ್ರಿವಾಲ್ ಹೆದರುವುದಿಲ್ಲ. ದೆಹಲಿಯ ಜನರು ನಿಮಗೆ ಸೂಕ್ತ ಉತ್ತರ ನೀಡುತ್ತಾರೆ” ಎಂದು ಎಕ್ಸ್‌ನಲ್ಲಿ ಹೇಳಿದೆ.

ಆಮ್ ಆದ್ಮಿ ಪಕ್ಷದ ಆರೋಪಕ್ಕೆ ತಿರುಗೇಟು ನೀಡಿರುವ ಬಿಜೆಪಿ ನಾಯಕ ಪರ್ವೇಶ್ ವರ್ಮಾ, ಅರವಿಂದ್ ಕೇಜ್ರಿವಾಲ್ ಮತ್ತು ಎಎಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕೇಜ್ರಿವಾಲ್ ಅವರ ಬೆಂಗಾವಲು ಪಡೆ ಬಿಜೆಪಿ ಕಾರ್ಯಕರ್ತನ ಕಾಲು ಪುಡಿ ಮಾಡಿದೆ. ಅರವಿಂದ್ ಕೇಜ್ರಿವಾಲ್ ಅವರ ಕಾರು ಬಿಜೆಪಿ ಕಾರ್ಯಕರ್ತನ ಕಾಲನ್ನು ಪುಡಿಮಾಡಿ ಮುಂದೆ ಹೋಗಿದೆ. ಬಿಜೆಪಿ ಕಾರ್ಯಕರ್ತನ ಕಾಲು ಮುರಿದಿದೆ. ನಾನು ಅವರ ಆರೋಗ್ಯವನ್ನು ವಿಚಾರಿಸಲು ಲೇಡಿ ಹಾರ್ಡಿಂಜ್ ವೈದ್ಯಕೀಯ ಕಾಲೇಜಿಗೆ ಹೋಗುತ್ತಿದ್ದೇನೆ. ಇದು ತುಂಬಾ ನಾಚಿಕೆಗೇಡಿನ ಸಂಗತಿ…” ಎಂದು ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ.

ಅರವಿಂದ್ ಕೇಜ್ರಿವಾಲ್ ನವದೆಹಲಿ ವಿಧಾನಸಭಾ ಕ್ಷೇತ್ರದಿಂದ ಆಮ್ ಆದ್ಮಿ ಪಕ್ಷದಿಂದ ಸ್ಪರ್ಧಿಸುತ್ತಿದ್ದಾರೆ. ಬಿಜೆಪಿ ದೆಹಲಿಯ ಮಾಜಿ ಸಿಎಂ ಸಾಹೇಬ್ ಸಿಂಗ್ ವರ್ಮಾ ಅವರ ಪುತ್ರ ಪರ್ವೇಶ್ ವರ್ಮಾ ಅವರನ್ನು ಕಣಕ್ಕಿಳಿಸಿದೆ. ದೆಹಲಿ ವಿಧಾನಸಭಾ ಚುನಾವಣೆಯ ಮತದಾನ ಫೆಬ್ರವರಿ 5ರಂದು ನಿಗದಿಯಾಗಿದೆ. ಮತ ಎಣಿಕೆ ಮತ್ತು ಫಲಿತಾಂಶಗಳ ಘೋಷಣೆ ಫೆಬ್ರವರಿ 8ರಂದು ನಡೆಯಲಿದೆ.