ಮಂಗಳೂರು ವಿಶ್ವವಿದ್ಯಾಲಯದ ಪರೀಕ್ಷೆಗಳು ಮುಂದೂಡಿಕೆ

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಎಸ್.ಎಂ ಕೃಷ್ಣ ಅವರು ನಿಧನರಾದ ಹಿನ್ನಲೆಯಲ್ಲಿ ನಾಳೆ ಸರ್ಕಾರಿ ರಜೆ ಘೋಷಿಸಲಾಗಿದ್ದು, ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಡಿಸೆಂಬರ್‌ 11ಕ್ಕೆ ನಡೆಯಬೇಕಾಗಿದ್ದ ಪರೀಕ್ಷೆಗಳನ್ನು ಮುಂದೂಡಿ ಆದೇಶ ಮಾಡಲಾಗಿದೆ. ಎಸ್‌.ಎಂ ಕೃಷ್ಣ ಅವರು ಮಂಗಳವಾರ ನಸುಕಿನ ಜಾವ ಮೃತಪಟ್ಟಿದ್ದು, ಅವರ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ದೇಶದ ಹಲವು ಗಣ್ಯರು ಎಸ್‌.ಎಂ ಕೃಷ್ಣ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಎಸ್‌.ಎಂ ಕೃಷ್ಣ ಅವರು ದೇಶಕಂಡ ಶ್ರೇಷ್ಠ ರಾಜಕಾರಣಿಯಾಗಿದ್ದರು. ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಲಿದೆ.

ಇನ್ನು ಎಸ್‌.ಎಂ ಕೃಷ್ಣ ಅವರು ನಿಧನರಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಡಿಸೆಂಬರ್‌ 11ರಂದು ಸರ್ಕಾರಿ ರಜೆ ಘೋಷಿಸಿದೆ. ಅಲ್ಲದೇ ಮೂರು ದಿನಗಳ ಕಾಲ ಶೋಕದಿನಾಚರಣೆ ಆಚರಿಸಲು ನಿರ್ಧರಿಸಲಾಗಿದೆ. ಹೀಗಾಗಿ, ನಾಳೆಯಿಂದ ನಡೆಯಬೇಕಾದ ಎಲ್ಲಾ ಪ್ರಮುಖ ಕಾರ್ಯಕ್ರಮಗಳು ರದ್ದಾಗಿವೆ. ಇನ್ನು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಡಿಸೆಂಬರ್‌ 11ರಂದು ನಡೆಯಬೇಕಾಗಿದ್ದ ಎಲ್ಲಾ ಸಾತ್ನಕ (ಯುಜಿ) ಪದವಿ ಪರೀಕ್ಷೆಗಳನ್ನು ಮುಂದೂಡಿರುವುದಾಗಿ ಮಂಗಳೂರು ವಿಶ್ವವಿದ್ಯಾಲಯ ಪ್ರಕಟಣೆ ತಿಳಿಸಿದೆ.

ನಾಳೆ ನಡೆಯಬೇಕಾದ ಎಲ್ಲಾ ಪರೀಕ್ಷೆಗಳನ್ನೂ ಮುಂದೂಡಲಾಗಿದ್ದು, ಮುಂದಿನ ಪರೀಕ್ಷಾ ದಿನಾಂಕದ ಬಗ್ಗೆ ಶೀಘ್ರವೇ ತಿಳಿಸುವುದಾಗಿ ಮಂಗಳೂ ವಿಶ್ವವಿದ್ಯಾಲಯದ ಕುಲಸಚಿವರು ಹೇಳಿದ್ದಾರೆ. ಮೂರು ದಿನ ಶೋಕಾಚರಣೆ: ರಾಜ್ಯದಲ್ಲಿ ಡಿಸೆಂಬರ್‌ 12ರ ವರೆಗೆ ಶೋಕದಿನಾಚರಣೆ ಇರಲಿದೆ. ಡಿಸೆಂಬರ್ 11ಕ್ಕೆ ಎಸ್‌.ಎಂ ಕೃಷ್ಣ ಅವರ ಹುಟ್ಟುರು ಮಂಡ್ಯ ಜಿಲ್ಲೆಯ ಸೋಮನಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಲಾಗಿದೆ. ಅಂತ್ಯಕ್ರಿಯೆಗೆ ಸಂಬಂಧಿಸಿದಂತೆ ಈಗಾಗಲೇ ಹಲವು ಸಿದ್ಧತೆಗಳು ಪೂರ್ಣಗೊಂಡಿವೆ. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಅಂತ್ಯಕ್ರಿಯೆ ಸಿದ್ಧತೆ ಪರಿಶೀಲನೆ ಮಾಡಿದ್ದಾರೆ. ಇನ್ನು ಎಸ್.​ಎಂ ಕೃಷ್ಣ ಅವರ ಅಂತ್ಯಕ್ರಿಯೆಗಿಂತ ಮುಂಚೆ ಪೂಜೆ ನಡೆಯಲಿದ್ದು, ಕೊನೆಯಲ್ಲಿ ಅಂತಿಮ‌ ವಿಧಿವಿಧಾನಗಳ ನೆರವೇರಲಿವೆ.

ಗಣ್ಯರಿಂದ ಸಂತಾಪ:

ಇನ್ನು ಎಸ್‌.ಎಂ ಕೃಷ್ಣ ಅವರಿಗೆ ದೇಶದ ಹಲವು ಗಣ್ಯರು ಹಾಗೂ ರಾಜಕಾರಣಿಗಳು ಸಂತಾಪ ಸೂಚಿಸಿದ್ದಾರೆ. ಎಸ್‌.ಎಂ ಕೃಷ್ಣ ಅವರೊಂದಿಗಿನ ರಾಜಕೀಯ ಒಡನಾಟ ಹಾಗೂ ರಾಜಕೀಯ ಚತುರತೆಯ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಬೆಂಗಳೂರು ಹಾಗೂ ಕರ್ನಾಟಕಕ್ಕೆ ಅವರು ನೀಡಿದ ಕೊಡುಗೆಯ ಬಗ್ಗೆ ಹಲವರು ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

ಎಸ್‌.ಎಂ ಕೃಷ್ಣ ಅವರು ರಾಜ್ಯ ಹಾಗೂ ರಾಷ್ಟ್ರ ರಾಜಕೀಯದಲ್ಲಿ ಮಿಂಚಿದ್ದರು. ವಿದೇಶಾಂಗ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಮಂಡ್ಯದಿಂದ ಇಂಡಿಯಾದ ವರೆಗೆ ಎಸ್‌.ಎಂ ಕೃಷ್ಣ ಅವರು ಮಿಂಚಿದ್ದು ಇತಿಹಾಸ. ರಾಜಕೀಯದ ಕೊನೆಯ ದಿನಗಳಲ್ಲಿ ಅವರು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದರು. ಕೆಲವು ತಿಂಗಳುಗಳ ಹಿಂದೆ ಅವರು ರಾಜಕೀಯ ನಿವೃತ್ತಿ ಘೋಷಿಸಿದ್ದು ಈಗ ಇತಿಹಾಸ.