ಟಾಯ್ಲೆಟ್​ನಲ್ಲಿ ಫ್ಲಶ್‌ ಮಾಡಿಲ್ಲವೆಂದು ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ!

ನವದೆಹಲಿ ಡಿಸೆಂಬರ್‌ 07: ಬಾಡಿಗೆದಾರರು ಬಳಸುತ್ತಿದ್ದ ಕಾಮನ್ ಬಾತ್​ರೂಂನಲ್ಲಿದ್ದ ಟಾಯ್ಲೆಟ್​ನಲ್ಲಿ ಸರಿಯಾಗಿ ಫ್ಲಶ್ ಮಾಡಿಲ್ಲ ಎಂದು ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ದೆಹಲಿಯ ಗೋವಿಂದಪುರಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಬಾಡಿದಾರರಾಗಿದ್ದ 18 ವರ್ಷದ ಯುವಕನನ್ನು ಚಾಕುವಿನಿಂದ ಇರಿದು ಕೊಲ್ಲಲಾಗಿದೆ. ಈ ಘಟನೆಯಲ್ಲಿ ಅವನ ಸಹೋದರ ಕೂಡ ಗಾಯಗೊಂಡಿದ್ದಾನೆ.

ಶುಕ್ರವಾರ ರಾತ್ರಿ ಸುಧೀರ್ ಎಂಬ ಯುವಕನ ಎದೆ, ತಲೆ ಮತ್ತು ಮುಖದ ಮೇಲೆ ಅಡಿಗೆಗೆ ಬಳಸುವ ಚಾಕುವಿನಿಂದ ಇರಿಯಲಾಗಿತ್ತು. ಆತನಿಗೆ ಹಲವು ಕಡೆ ಇರಿತದ ಗಾಯಗಳಾಗಿದ್ದುದರಿಂದ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ರಾತ್ರಿಯೇ ಆತ ಮೃತಪಟ್ಟನು. ಅವರ ಸಹೋದರ ಪ್ರೇಮ್ (22) ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾ.ಎ ಅವನ ಸ್ನೇಹಿತ ಸಾಗರ್ ಎಂಬಾತನನ್ನು ಡಿಸ್ಚಾರ್ಜ್ ಮಾಡಲಾಗಿದೆ.

ಗೋವಿಂದಪುರಿಯ ಲೇನ್ ಸಂಖ್ಯೆ 6ರಲ್ಲಿನ ಕಟ್ಟಡದ ಮೊದಲ ಮಹಡಿಯಲ್ಲಿ ಬಾಡಿಗೆಗೆ ವಾಸಿಸುವ ಎರಡು ಕುಟುಂಬಗಳ ನಡುವೆ ಶುಕ್ರವಾರ ತಡರಾತ್ರಿ ಜಗಳ ಉಂಟಾಗಿತ್ತು. ಕಾಮನ್​ ಟಾಯ್ಲೆಟ್​ನಲ್ಲಿ ಫ್ಲಶ್ ಮಾಡದಿರುವುದನ್ನು ಸುಧೀರ್ ವಿರೋಧಿಸಿದಾಗ ಸಂಘರ್ಷ ಪ್ರಾರಂಭವಾಯಿತು. ಭೀಕಮ್ ಸಿಂಗ್, ಅವರ ಪತ್ನಿ ಮೀನಾ ಮತ್ತು ಅವರ ಮೂವರು ಮಕ್ಕಳು ಸುಧೀರ್ ಮತ್ತು ಅವನ ಜೊತೆಗಿದ್ದವರ ಮೇಲೆ ಹಲ್ಲೆ ನಡೆಸಿದ್ದರು.

ಆ ಎರಡೂ ಕುಟುಂಬಗಳು ಮೊದಲ ಮಹಡಿಯಲ್ಲಿ ಬಾಡಿಗೆದಾರರಾಗಿದ್ದರು. ಎರಡೂ ಮನೆಗೂ ಒಂದೇ ಬಾತ್​ರೂಂ ಇತ್ತು. ಭೀಕಮ್ ಅವರ ಕಿರಿಯ ಮಗ ಶೌಚಾಲಯವನ್ನು ಬಳಸಿದಾಗ ಸರಿಯಾಗಿ ಫ್ಲಶ್ ಮಾಡಿರಲಿಲ್ಲ. ಅದಾದ ನಂತರ ಸುಧೀರ್ ಟಾಯ್ಲೆಟ್​ಗೆ ಹೋದಾಗ ಫ್ಲಶ್ ಮಾಡದ್ದನ್ನು ಕಂಡು ಕೋಪಗೊಂಡು ಗಲಾಟೆ ಮಾಡಿದ್ದ.

ಆರೋಪಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದ್ದು, ತನಿಖೆಗಾಗಿ ಭೀಕಂ ಮತ್ತು ಆತನ ಕುಟುಂಬವನ್ನು ವಶಕ್ಕೆ ಪಡೆಯಲಾಗಿದೆ. ಸುಧೀರ್ ಮೇಲೆ ರಾಡ್ ಮತ್ತು ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಸುಧೀರ್ ಅವರ ಸೋದರಸಂಬಂಧಿ ಸಂಜೀವ್ ಸಕ್ಸೇನಾ ಅವರು ಇದೇ ಕಟ್ಟಡದಲ್ಲಿ ವಾಸಿಸುತ್ತಿದ್ದು, ಶುಕ್ರವಾರ ರಾತ್ರಿ 11:30 ರ ಸುಮಾರಿಗೆ ಈ ಘಟನೆ ಸಂಭವಿಸಿದೆ ಎಂದು ಹೇಳಿದ್ದಾರೆ. ಕಟ್ಟಡ ಸಾಮಗ್ರಿಗಳ ಅಂಗಡಿಯಲ್ಲಿ ಕೆಲಸ ಮಾಡುವ ಭೀಕಮ್ ಸಿಂಗ್ ಅವರು ಸುಮಾರು 45 ದಿನಗಳ ಹಿಂದೆ ಈ ಕಟ್ಟಡಕ್ಕೆ ಬಾಡಿಗೆಗೆ ಬಂದಿದ್ದರು.