ತಮಿಳುನಾಡಿನ ಉಪ ಮುಖ್ಯಮಂತ್ರಿಯಾಗಿ ಉದಯನಿಧಿ ಸ್ಟಾಲಿನ್​ ನೇಮಕ ಸಾಧ್ಯತೆ

ತಮಿಳುನಾಡಿನ ಉಪಮುಖ್ಯಮಂತ್ರಿಯಾಗಿ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್‌ ಅವರನ್ನು ನೇಮಕ ಮಾಡುವ ಸಾಧ್ಯತೆಯಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇಂಡಿಯಾ ಟುಡೇ ಈ ಕುರಿತು ವರದಿ ಮಾಡಿದೆ, ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್ ಅವರು ಪ್ರಸ್ತುತ ರಾಜ್ಯದ ಕ್ರೀಡಾ ಮತ್ತು ಯುವ ಕಲ್ಯಾಣ ಸಚಿವರಾಗಿದ್ದಾರೆ ಶೀಘ್ರವೇ ಅವರು ಉಪಮುಖ್ಯಮಂತ್ರಿ ಸ್ಥಾನಕ್ಕೇರಲಿದ್ದಾರೆ ಎಂದು ಹೇಳಲಾಗುತ್ತಿದೆ.

ಅಮೆರಿಕಕ್ಕೆ ತೆರಳುವ ಮುನ್ನ ಎಂಕೆ ಸ್ಟಾಲಿನ್ ಕೂಡ ಉದಯನಿಧಿ ಸ್ಟಾಲಿನ್ ಅವರನ್ನು ಉಪಮುಖ್ಯಮಂತ್ರಿ ಹುದ್ದೆಗೆ ಏರಿಸುವ ಸುಳಿವು ನೀಡಿದ್ದರು. ಬದಲಾವಣೆ ಮಾತ್ರ ನಿಶ್ಚಿತ ಮತ್ತು ಜನರು ನಿರೀಕ್ಷಿಸುತ್ತಿರುವುದು ಶೀಘ್ರದಲ್ಲೇ ಸಂಭವಿಸುತ್ತದೆ ಎಂದು ಈ ತಿಂಗಳ ಆರಂಭದಲ್ಲಿ ಯುಎಸ್​ಗೆ ಭೇಟಿ ನೀಡುವ ಮುನ್ನ ಹೇಳಿದ್ದರು.

ಉದಯನಿಧಿ ಸ್ಟಾಲಿನ್ ಕ್ರೀಡಾ ಮತ್ತು ಯುವ ಕಲ್ಯಾಣ ಸಚಿವರಾಗಿರುವುದರ ಜೊತೆಗೆ ವಿಶೇಷ ಕಾರ್ಯಕ್ರಮ ಅನುಷ್ಠಾನದ ಪ್ರಮುಖ ಖಾತೆಯನ್ನು ಸಹ ನಿರ್ವಹಿಸುತ್ತಾರೆ.

ಚೆನ್ನೈ ಮೆಟ್ರೋ ರೈಲು ಹಂತ-2 ರಂತಹ ಪ್ರಮುಖ ಯೋಜನೆಗಳ ಅನುಷ್ಠಾನವನ್ನು ಪರಿಶೀಲಿಸುತ್ತಾರೆ. ಸನಾತನ ಧರ್ಮ ನಿರ್ಮೂಲನೆ ಅಗತ್ಯ ಎಂದು ತಮಿಳುನಾಡು ಸಚಿವ ಉದಯನಿಧಿ ಸ್ಟ್ಯಾಲಿನ್‌ ಅವರು ಹೇಳಿಕೆ ನೀಡಿದ್ದರು.

ಸನಾತನ ಧರ್ಮವು ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ವಿರುದ್ಧವಾಗಿದೆ ಮತ್ತು ಅದನ್ನು ಮಲೇರಿಯಾ ಮತ್ತು ಡೆಂಗ್ಯೂ ರೀತಿಯಲ್ಲಿ ನಿರ್ಮೂಲನೆ ಮಾಡಬೇಕು ಎಂದು ಹೇಳಿದ್ದರು. ಈ ಹೇಳಿಕೆಗೆ ವಿವಿಧ ವಲಯಗಳಿಂದ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು.