ದಸರಾ ಆನೆ ಅಭಿಮನ್ಯುವಿನ ಮಾವುತ ವಸಂತಗೆ ಮುಖ್ಯಮಂತ್ರಿ ಪದಕ

ಮೈಸೂರು, ಆಗಸ್ಟ್​​ 04: ಅರಣ್ಯ ಇಲಾಖೆಯಲ್ಲಿ ಗಣನೀಯ ಸೇವೆಯನ್ನು ಗುರುತಿಸಿ ದಸರಾ ಆನೆ ಅಭಿಮನ್ಯುವಿನ ಮಾವುತ ಜೆ.ಎಸ್​ ವಸಂತ ಅವರಿಗೆ 2022-23ನೇ ಸಾಲಿನ ಮುಖ್ಯಮಂತ್ರಿ ಪದಕ ದೊರೆತಿದೆ. ಜೆ.ಎಸ್​. ವಸಂತ್​ ಅವರು ಸುಮಾರು ವರ್ಷಗಳಿಂದ ಆನೆ ಅಭಿಮನ್ಯುವಿನ ಮಾವುತರಾಗಿದ್ದಾರೆ. ಕ್ಯಾಪ್ಟನ್ ಅಭಿಮನ್ಯು ಸತತ ನಾಲ್ಕು ಬಾರಿ ಅಂಬಾರಿ ಹೊತ್ತಿದ್ದು, ಐದನೇ ಬಾರಿಗೆ ಅಂಬಾರಿ ಹೊರಲು ಸಿದ್ದನಾಗಿದ್ದಾನೆ.

ದಸರಾ ಮಹೋತ್ಸವದ ಚಿನ್ನದ ಅಂಬಾರಿಯನ್ನು ಹೊರುವ ಕ್ಯಾಪ್ಟನ್​ ಅಭಿಮನ್ಯುವಿನ ಮಾವುತ ಜೆ.ಎಸ್​ ವಂಸತ ಅವರು ಮುಖ್ಯಮಂತ್ರಿ ಪದಕ ಪಡೆದಿದ್ದಾರೆ. ಜೆ.ಎಸ್​ ವಸಂತ ಅವರು 100ಕ್ಕೂ ಹೆಚ್ಚು ಕಾಡಾನೆ ಹಾಗೂ ಹುಲಿ ಸೆರೆಹಿಡಿಯುವ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ. 2017ರಲ್ಲಿ ಇಂಡೋನೇಷ್ಯಾ ದೇಶಕ್ಕೆ ಹೋಗಿ ಅಲ್ಲಿಯ ಆನೆಗಳಿಗೆ ಕೂಡ ತರಬೇತಿಯನ್ನು ಪಡೆಯಲು ಹಾಗೂ ರಾಜ್ಯದಲ್ಲಿ ಹಾಗೂ ಶಿಬಿರಗಳಲ್ಲಿ ನೀಡುವ ತರಬೇತಿಯನ್ನು ನೀಡಿದ್ದಾರೆ.

2020 ಮತ್ತು 21ನೇ ಸಾಲಿನಲ್ಲಿ ಎರಡು ವರ್ಷಗಳ ಕಾಲ ಮೈಸೂರು ದಸರಾ ನಾಡಹಬ್ಬದಲ್ಲಿ ಅಂಬಾರಿಯನ್ನು ಹೊರಿಸುವ ಮೂಲಕ ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಮಾನವ-ವನ್ಯಪ್ರಾಣಿ ಸಂಘರ್ಷದ ನಿಯಂತ್ರಣದಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಜೆ.ಎಸ್​ ವಸಂತ ಅವರ ಈ ಎಲ್ಲ ಸಾಧನೆ ಪರಿಗಣಿಸಿ ರಾಜ್ಯ ಸರ್ಕಾರ ಮುಖ್ಯಮಂತ್ರಿ ಪದಕ ನೀಡಿದೆ.