ಧಾರವಾಡದ ಅಂಜುಮನ್ ಸಂಸ್ಥೆ ಅಧ್ಯಕ್ಷನ ಮನೆಗೆ ನುಗ್ಗಿ ಹಲ್ಲೆಗೆ ಯತ್ನ

ಧಾರವಾಡ, ಆಗಸ್ಟ್​ 11: ಅಂಜುಮನ್ ಸಂಸ್ಥೆ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಮನೆಗೆ ನುಗ್ಗಿ ಕಿಡಿಗೇಡಿಗಳು ಹಲ್ಲೆಗೆ ಯತ್ನಿಸಿರುವಂತಹ ಘಟನೆ ನಗರದಲ್ಲಿ ನಡೆದಿದೆ. 18-20 ವರ್ಷದ ಹುಡುಗರು ನನ್ನನ್ನು ಹೊಡೆಯೋಕೆ ಪ್ಲಾನ್ ಮಾಡಿರುವುದಾಗಿ ಆರೋಪಿಸಲಾಗಿದೆ. ಕಿಡಿಗೇಡಿಗಳ ಗ್ಯಾಂಗ್​ ಮೊದಲಿಗೆ ಅಂಜುಮನ್ ಸಂಸ್ಥೆಯ ಕಚೇರಿ ಬಳಿ ಹಲ್ಲೆ ಮಾಡಲು ಯತ್ನಿಸಿದ್ದಾರೆ. ಆದರೆ ಅಲ್ಲಿ ಇಸ್ಮಾಯಿಲ್ ತಮಟಗಾರ ಸಿಕ್ಕಿಲ್ಲ. ಹಾಗಾಗಿ ಮನೆಗೆ ನುಗ್ಗಿದ್ದಾರೆ. ಅಲ್ಲಿಯೂ ಇಸ್ಮಾಯಿಲ್​ ಇಲ್ಲದಿದ್ದರಿಂದ ಮನೆಯವರೊಂದಿಗೆ ಗಲಾಟೆ ಮಾಡಿದ್ದಾರೆ.

ಮುಸ್ಲಿಂ ಹುಡುಗರಿಂದಲೇ ಮುಸ್ಲಿಂ ನಾಯಕರನ್ನು ಹೊಡೆಸುವ ಪ್ಲ್ಯಾನ್

ಸದ್ಯ ಘಟನೆ ಬಗ್ಗೆ ಧಾರವಾಡದಲ್ಲಿ ಅಂಜುಮನ್ ಸಂಸ್ಥೆ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಸುದ್ದಿಗೋಷ್ಠಿ ಮಾಡಿದ್ದು, ಮುಸ್ಲಿಂ ಹುಡುಗರಿಂದಲೇ ಮುಸ್ಲಿಂ ನಾಯಕರನ್ನು ಹೊಡೆಸುವ ಪ್ಲಾನ್ ಇದು. ನಮಗೆ ಜೀವ ಬೆದರಿಕೆ ಹಾಕಿದ್ದಾರೆ. ಮಣಕಿಲ್ಲಾ, ರಸೂಲಪುರ ಗಲ್ಲಿಯಲ್ಲಿ ಚಾಕು ಹಿಡಿದುಕೊಂಡು ನಿನ್ನೆ ಓಡಾಡಿದ್ದಾರೆ. ಪೊಲೀಸರು ಮತ್ತು ಪೊಲೀಸ್ ಕಮಿಷನರ್ ಮೇಲೆ ನಂಬಿಕೆ ಇದೆ. ಇದರ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು ಎಂದು ಹೇಳಿದ್ದಾರೆ.

ಧಾರವಾಡ ವಿದ್ಯಾಕಾಶಿ. ಇಲ್ಲಿ ಶಾಂತಿ ಕಾಪಾಡುವುದು ಎಲ್ಲರ ಕರ್ತವ್ಯ. ಪೊಲೀಸರು ಸೂಕ್ತವಾಗಿ ತನಿಖೆ ಮಾಡಬೇಕು. ಯಾರ ಜೊತೆಯೂ ವೈಯಕ್ತಿಕ ದ್ವೇಷ ಇಲ್ಲ. 18-20 ವರ್ಷದ ಹುಡುಗರು ಬೆದರಿಕೆ ಹಾಕಿದ್ದಾರೆ. ಅವರ ತಂದೆ ಆಟೋ ಹೊಡೆಯುತ್ತಾರೆ. ಇಂತಹ ‌ಹುಡುಗರಿಗೆ ಪ್ರಚೋದನೆ ಕೊಟ್ಟವರು ಯಾರು? ನಾನು ಅವರೆಲ್ಲರ ಕುಟುಂಬಗಳಿಗೆ ಕಷ್ಟ ಇದ್ದಾಗ ಸಹಾಯ ಮಾಡಿದ್ದೇನೆ. ಆ ಹುಡುಗರ ತಪ್ಪಿಲ್ಲದೇ ಇರಬಹುದು ಆದರೆ ಹಿಂದೆ ಇರೋರು ಯಾರು ಅಂತಾ ಪತ್ತೆ ಮಾಡಬೇಕು. ಯಾರು ಯಾರು ಪ್ಲಾನ್ ಮಾಡಿದ್ದಾರೆ ಎಲ್ಲ ನನಗೆ ಗೊತ್ತಿದೆ. ಕಾಲ್ ರೆಕಾರ್ಡ್ಸ್​, ವಿಡಿಯೋ ಎಲ್ಲ ಇವೆ. ಅದನ್ನೆಲ್ಲಾ ಪೊಲೀಸರಿಗೆ ಒಪ್ಪಿಸುವೆ ಎಂದಿದ್ದಾರೆ.

ಒಂದು ವರ್ಷದ ಹಿಂದೆ ನನ್ನ ಮುಗಿಸಲು ಪ್ಲ್ಯಾನ್ ನಡೆದಿದೆ. ಮುಸಲ್ಮಾನ ಹುಡುಗರೇ ನನ್ನನ್ನು ಹೊಡೆಯುವಂತೆ ಪ್ಲಾನ್ ಮಾಡಿದ್ದಾರೆ. ಈ ಹಿಂದೆ ಮುಸ್ಲಿಂ ಹುಡುಗರನ್ನೇ 8-10 ಜನರನ್ನು ಕ್ಯಾಚ್ ಮಾಡಿದ್ದರು. ಅದೇ ಹುಡುಗರು ನಮ್ಮ ಮನೆಗೆ ಬಂದು ಹೇಳಿದ್ದಾರೆ. ಈಗ ನಾವು ಹೊಡೆಯದೇ ಇರಬಹುದು. ಮುಂದೆ ಯಾರಾದ್ರೂ ಹೊಡೆಯಬಹುದು ಅಂತಾ ಎಚ್ಚರಿಕೆ ಕೊಟ್ಟಿದ್ದಾರೆ ಎಂದರು.

ನನಗೇನಾದರೂ ಆದರೆ ಇಂಥವರೇ ಕಾರಣ

ಸಣ್ಣ ಸಣ್ಣ ಮುಸ್ಲಿಂ ಹುಡುಗರಿಂದ ನನ್ನನ್ನು ಹೊಡೆಸಬೇಕು? ನಶೆಯಲ್ಲಿರುವ ಹುಡುಗರಿಂದ ಹೊಡೆಸಬೇಕು. ಬಳಿಕ ಆ ಹುಡುಗರನ್ನು ಎನ್‌ಕೌಂಟರ್ ಮಾಡಿಸಬೇಕು ಅಂತಾ ಪ್ಲ್ಯಾನ್ ನಡೆದಿದೆ. ನನಗೇನಾದರೂ ಆದರೆ ಇಂಥವರೇ ಕಾರಣ ಅಂತಾ ನಾನು ಮನೆಯಲ್ಲಿ ಹೇಳಿಟ್ಟಿದ್ದೇನೆ. ವರ್ಷದ ಹಿಂದೆಯೇ ಮನೆಯವರಿಗೆ ಹೇಳಿಟ್ಟಿದ್ದೇನೆ. ನಾನು ಸಂಶಯ ಇದ್ದವರ ಬಗ್ಗೆ ಪೊಲೀಸ್ ಕಮಿಷನರ್​ಗೆ ಮಾಹಿತಿ ಕೊಟ್ಟಿದ್ದೇನೆ. ಇದರಲ್ಲಿ ರಾಜಕೀಯವಾಗಿ ಮುಗಿಸುವ ಷಡ್ಯಂತ್ರ ಇದೆ.

ಅಂಜುಮನ್ ಚುನಾವಣೆ, ಎಂಎಲ್ಎ ಚುನಾವಣೆ, ಪಾಲಿಕೆ ಚುನಾವಣೆ ಯಾವುದೋ ಒಂದು ರಾಜಕೀಯವೇ ಇದೆ. ಈ ಸಂಬಂಧ ನಾನು ಕಮಿಷನರ್​ಗೆ ದೂರು ಕೊಡಲಿದ್ದೇನೆ. ಮುಸ್ಲಿಂರೇ ಹೊಡೆಯಬೇಕು ಅಂತಾ ಪ್ಲಾನ್ ಮಾಡಿದ್ದಾರೆ. ಮುಸ್ಲಿಂರನ್ನು ಬಿಟ್ಟರೆ ಬೇರೆಯವರಿಗೆ ಕೊಟ್ಟರೆ ನನ್ನನ್ನು ಯಾವಾಗ್ಲೋ ಹೊಡೆತ್ತಿದ್ದರು. ಇಷ್ಟು ದಿನ ರಕ್ಷಣೆ ಕೇಳಬೇಕು ಅನಿಸಿರಲಿಲ್ಲ ಆದರೆ ಈಗ ಪೊಲೀಸ್ ರಕ್ಷಣೆ ಬೇಕಾಗಿದೆ. ಈ ಸಂಬಂಧ ನಾನು ಪೊಲೀಸ್ ರಕ್ಷಣೆ ಕೇಳುವೆ. ಈ ಹಿಂದೆಯೂ ನನ್ನ ವಿರುದ್ಧ ಪ್ಲಾನ್ ಆಗಿದ್ದರ ಬಗ್ಗೆ ಪೊಲೀಸ್ ಕಮಿಷನರ್​ಗೆ ಮಾಹಿತಿ ಕೊಟ್ಟಿದ್ದೆ ಎಂದು ಹೇಳಿದ್ದಾರೆ.