ಸಕಲೇಶಪುರ ಭೂಕುಸಿತ: ಬೆಂಗಳೂರು-ಮಂಗಳೂರು, ಮುರುಡೇಶ್ವರ ರೈಲು ಸಂಚಾರ ಮತ್ತೆ ಸ್ಥಗಿತ

ಈ ಹಿಂದೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ದೋಣಿಗಲ್‌, ಎಡಕುಮೇರಿ ನಡುವೆ ಭೂಕುಸಿತ ಸಂಭವಿಸಿತ್ತು. ಇದಾದ ಬಳಿಕ ಈಗ ಮತ್ತೆ ಸಕಲೇಶಪುರ-ಬಾಳ್ಳುಪೇಟೆ ನಡುವೆ ಭೂಕುಸಿತವಾಗಿದೆ. ಇದರಿಂದ ಬೆಂಗಳೂರಿನಿಂದ ಮಂಗಳೂರು ಮತ್ತು ಮುರುಡೇಶ್ವರ ರೈಲು ಸಂಪರ್ಕ ಬಂದ್​ ಆಗಿದೆ.

ಹಾಸನ ಜಿಲ್ಲೆಯ ಸಕಲೇಶಪುರ-ಬಾಳ್ಳುಪೇಟೆ ನಡುವೆ ರೈಲು ಹಳಿಗಳ ಮೇಲೆ ಗುಡ್ಡ ಕುಸಿದಿದೆ. ಹಾಸನ-ಮಂಗಳೂರು ನಡುವಿನ ಕಿಲೋಮೀಟರ್ ಸಂಖ್ಯೆ 42/43 ರ ಮಧ್ಯೆ ಭೂ ಕುಸಿತವಾಗಿದೆ. ಈ ಹಿನ್ನೆಲೆಯಲ್ಲಿ ಮಧ್ಯರಾತ್ರಿಯಿಂದ ರೈಲುಗಳ ಸಂಚಾರ ಬಂದ್​​ ಆಗಿದೆ. ರೈಲ್ವೆ ಇಲಾಖೆ ಕಾರ್ಮಿಕರು ಮಣ್ಣು ತೆರವು ಮಾಡುತ್ತಿದ್ದಾರೆ.

ಬೆಂಗಳೂರು-ಮಂಗಳೂರು ರೈಲು ಸಂಚಾರ ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ. ಬೆಂಗಳೂರು-ಕಣ್ಣೂರು, ಬೆಂಗಳೂರು-ಮುರುಡೇಶ್ವರ ಮತ್ತು ಹಾಸನ-ಮಂಗಳೂರು ಮಧ್ಯೆ ಸಂಪರ್ಕ ಕಲ್ಪಿಸುವ ರೈಲು ಸಂಚಾರವೂ ಬಂದ್​ ಮಾಡಲಾಗಿದೆ. ಆಲೂರು-ಹಾಸನ ಮಾರ್ಗದ ರೈಲು ಸಂಚಾರವೂ ಸ್ಥಗಿತಗೊಂಡಿದೆ.

ಸಕಲೇಶಪುರ, ಯಡಕುಮಾರಿ, ಶಿರಿಬಾಗಿಲು, ಆಲೂರು ಸೇರಿ ಒಟ್ಟು ಆರು ಕಡೆ ರೈಲು ಸಂಚಾರ ನಿಂತಿದ. ದಿಢೀರ್ ರೈಲುಗಳು ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರ ಪರದಾಡಿದರು. ಸಾವಿರಾರು ಪ್ರಯಾಣಿಕರು ಬೆಳಗಿನ ಜಾವದವರೆಗೆ ರೈಲಿನಲ್ಲೇ ಕಳೆದರು. ಬೆಳಗ್ಗೆ ರೈಲ್ವೆ ಇಲಾಖೆ ಪ್ರಯಾಣಿಕರಿಗೆ ವಾಹನಗಳ ವ್ಯವಸ್ಥೆ ಮಾಡಿದೆ.

ರೈಲುಗಳ ಸಂಚಾರ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಪ್ರಯಾಣಿಕರು ರೈಲು ಬಿಟ್ಟು ಬಸ್​ಗಳತ್ತ ಮುಖ ಮಾಡಿದ್ದಾರೆ. ಬಸ್​​ನಲ್ಲಿ ತಮ್ಮ ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ.ಸಕಲೇಶಪುರ ತಾಲೂಕಿನ ದೋಣಿಗಲ್‌, ಎಡಕುಮೇರಿ ನಡುವೆ ಭೂಕುಸಿತ ಸಂಭವಿಸಿತ್ತು. ಈ ಸಂದರ್ಭದಲ್ಲೂ ಬೆಂಗಳೂರು-ಮಂಗಳೂರು ಮಧ್ಯೆ ರೈಲು ಸಂಚಾರ ರದ್ದಾಗಿತ್ತು.