ಬೆಳಗ್ಗೆ ಮಗಳ ಲಗ್ನ ಪತ್ರಿಕೆ ಹಂಚಿ ರಾತ್ರಿ ಡ್ಯೂಟಿಗೆ ಹೋಗಿದ್ದ ಅಧಿಕಾರಿ ದುರಂತ ಸಾವು

ಬೆಂಗಳೂರು, ಆಗಸ್ಟ್.04: ಬೆಂಗಳೂರಿನ ಎಲೆಕ್ಟ್ರಾನಿಕ್​ ಸಿಟಿ ಫ್ಲೈಓವರ್​​ ಮೇಲೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಎಲಿವೇಟೆಡ್ ಫ್ಲೈಓವರ್ ಅಧಿಕಾರಿ ಪಿ.ಮಂಜುನಾಥ್(52) ಮೃತಪಟ್ಟಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲೆ ತಡರಾತ್ರಿ ಕಾರು ಕೆಟ್ಟು ನಿಂತಿತ್ತು. ಟೋಯಿಂಗ್ ವೆಹಿಕಲ್ ಕರೆಸಿ ಫ್ಲೈಓವರ್ ಸಿಬ್ಬಂದಿ ತೆರವು ಮಾಡಿಸ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ವೇಗವಾಗಿ ಬಂದ ಟಾಟಾ ಏಸ್ ವಾಹನದಿಂದ ಸರಣಿ ಅಪಘಾತ ಸಂಭವಿಸಿದೆ.

ಫ್ಲೈಓವರ್ ಟೋಲ್ ಸಿಬ್ಬಂದಿ ವಾಹನ & ಕಾರಿಗೆ ಟಾಟಾ ಏಸ್ ಡಿಕ್ಕಿ ಹೊಡೆದಿದ್ದು ಡಿಕ್ಕಿಯ ರಭಸಕ್ಕೆ ಟಾಟಾ ಏಸ್ ವಾಹನ ಪಲ್ಟಿಯಾಗಿದೆ. ಅಪಘಾತದಲ್ಲಿ ಎರಡು ಕಾರುಗಳು ಸಂಪೂರ್ಣ ನಜ್ಜುಗುಜ್ಜಾಗಿವೆ. ಅಪಘಾತದಲ್ಲಿ ಮಂಜುನಾಥ್ ಹಾಗೂ ಮತ್ತೋರ್ವ ಸಹೋದ್ಯೋಗಿಗೆ ಗಾಯವಾಗಿದ್ದು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮಧ್ಯೆ ಮಂಜುನಾಥ್ ಮೃತಪಟ್ಟಿದ್ದಾರೆ. ಮತ್ತೋರ್ವ ಗಾಯಳುಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಆಗಸ್ಟ್ 10ರಂದು ಮೃತ ಮಂಜುನಾಥ್​ ಮಗಳ ಮದುವೆ ಇತ್ತು. ಮಗಳ ಮದುವೆಗೆ ಸಿದ್ಧತೆಗಳನ್ನ ಮಾಡಿಕೊಳ್ಳುತ್ತಿದ್ದ ಮಂಜುನಾಥ್, ನಿನ್ನೆ ಬೆಳಗ್ಗೆಯೂ ಮದುವೆಯ ಆಮಂತ್ರಣ ಪತ್ರಿಕೆ ಹಂಚಿ ಬಂದಿದ್ದರು. ನೈಟ್ ಶಿಫ್ಟ್ ಕೆಲಸಕ್ಕೆ ಹಾಜರಾಗಿದ್ದ ವೇಳೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮಗಳ ಮದುವೆ ಸಂಭ್ರಮದಲ್ಲಿ ಇರಬೇಕಾದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಎಲೆಕ್ಟ್ರಾನಿಕ್ ಸಿಟಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.