ಬ್ರಹ್ಮಾವರ: ಐಟಿ ದಾಳಿ ಮಾದರಿಯಲ್ಲಿ ದರೋಡೆಗೆ ಯತ್ನ, ದೂರು ದಾಖಲು

ಉಡುಪಿ, ಜುಲೈ 29: ಬ್ರಹ್ಮಾವರ ತಾಲೂಕಿನ ಮಣೂರು ಗ್ರಾಮದ ಕವಿತಾ (34) ಎಂಬುವರ ನಿವಾಸಕ್ಕೆ ಸುಮಾರು 6-8 ಜನರು ನುಗ್ಗಿ ದಾಂಧಲೆ ಮಾಡಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಜುಲೈ 25ರ ಬೆಳಗ್ಗೆ 8.30ರ ಸುಮಾರಿಗೆ ಯಾರೋ ಕವಿತಾ ಅವರ ಮನೆ ಬಾಗಿಲು ತಟ್ಟಿದ್ದಾರೆ. ಆದರೆ, ಕವಿತಾ ಅವರು 9 ಗಂಟೆ ಸುಮಾರಿಗೆ ಬಾಗಿಲು ತೆರೆದು ಹೊರಗೆ ಬಂದು ನೋಡಿದಾಗ ಯಾರು ಇರಲಿಲ್ಲ.

ಬಳಿಕ, ಮನೆಯ ಸಿಸಿಟಿವಿ ದೃಶ್ಯಗಳನ್ನು ಮೇಲ್ವಿಚಾರಣೆ ಮಾಡುವ ಸೈನ್​ ಇನ್​ ಸೆಕ್ಯುರಿಟಿಯು ಕವಿತಾ ಅವರಿಗೆ ಕರೆ ಮಾಡಿದ್ದಾರೆ. 6-8 ಜನರ ಇನ್ನೋವಾ, ಸ್ವಿಫ್ಟ್ ಕಾರಿನಲ್ಲಿ ಮನೆ ಬಳಿ ಬಂದಿದ್ದರು. ಬಳಿಕ ಕಾಂಪೌಂಡ್ ಹಾರಿ ಮನೆಯ ಆವರಣ ಪ್ರವೇಶೀಸಿದ್ದರು. ನಂತರ ಬಾಗಿಲು ಬಡಿದು ಮನೆಯವರನ್ನ ಕರೆದಿದ್ದಾರೆ. ಆದರೆ, ಮನೆ ಬಾಗಿಲು ತೆರೆಯದಿದ್ದರಿಂದ ಕಿಟಕಿಗಳನ್ನು ತೆರೆಯಲು ಯತ್ನಿಸಿದ್ದರು.

ಆದರೆ, ಸಾಧ್ಯವಾಗದ ಹಿನ್ನೆಲೆಯಲ್ಲಿ ವಾಪಸ್​ ಹೋದರು. ಹೋಗುವಾಗ ಗೇಟ್​ಗೆ ಹಾನಿ ಮಾಡಿದ್ದಾರೆ ಎಂದು ಸೈನ್​ ಇನ್​ ಸೆಕ್ಯೂರಿಟಿ ಮಾಹಿತಿ ನೀಡಿದ್ದಾರೆ. ತಂಡ ಐಟಿ ಅಧಿಕಾರಿಗಳಂತೆ ಮನೆಗೆ ಆಗಮಿಸಿತ್ತು. ಜೊತೆಯಲ್ಲಿ ಓರ್ವ ಪೊಲೀಸ್ ಪೇದೆಯೂ ಇದ್ದ ಎಂಬ ಮಾಹಿತಿ ಗೊತ್ತಾಗಿದೆ. ಘಟನೆ ಸಂಬಂಧ ಕೋಟ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.

ಸೈನ್ ಇನ್ ಸೆಕ್ಯೂರಿಟಿ ಕುಂದಾಪುರ ವ್ಯಾಪ್ತಿಯಲ್ಲಿ ಹಲವು ಮನೆ ಕಳ್ಳತನವನ್ನು ವಿಫಲಗೊಳಿಸಿದೆ. ಸಿಸಿಟಿವಿ ಅಳವಡಿಸಿರುವ ಮನೆಗೆ 24 ಗಂಟೆಯೂ ಭದ್ರತೆ ನೀಡಲಾಗುತ್ತದೆ. ಯಾವುದೇ ಅನಪೇಕ್ಷಿತ ವಿಚಾರದ ಬಗ್ಗೆ ಸೈನ್ ಇನ್ ಸೆಕ್ಯೂರಿಟಿ ಅಲರ್ಟ್ ಮಾಡುತ್ತೆ.