ಹುಲಿ ಉಗುರಿನ ವಿಚಾರಕ್ಕೆ ಕೇಂದ್ರದಿಂದ ಸುತ್ತೋಲೆ ಬಂದಿದೆ, ಈ ಬಗ್ಗೆ ಚರ್ಚೆ ಮಾಡಿ ತೀರ್ಮಾನಿಸುತ್ತೇವೆ -ಸಚಿವ ಈಶ್ವರ್ ಖಂಡ್ರೆ

ಬೆಂಗಳೂರು: ಹುಲಿ ಉಗುರಿನ (Tiger Claw) ವಿಚಾರಕ್ಕೆ ಕೇಂದ್ರದಿಂದ ನಮಗೆ ಸುತ್ತೋಲೆ ಬಂದಿದೆ. ಹುಲಿ ಉಗುರಿನ ವಿಚಾರಕ್ಕೆ ರಾಜ್ಯ ಮಟ್ಟದಲ್ಲಿ ಆದೇಶ ಹೊರಡಿಸಿದ್ದೀರಿ. ಇದು ನಿಮ್ಮ ವ್ಯಾಪ್ತಿಗೆ ಬರಲ್ಲ, ನಾವು ನಿರ್ಧಾರ ಮಾಡ್ತೀವಿ ಎಂದು ಕೇಂದ್ರ ಸರ್ಕಾರ (Central Government) ಹೇಳಿದೆ. ಹೀಗಾಗಿ ಕೇಂದ್ರ ಸರ್ಕಾರದ ಅಧಿಕಾರಿಗಳ ಜೊತೆ ಚರ್ಚೆ ಮಾಡ್ತೇವೆ. ನಮ್ಮ ಆದೇಶದ ಗಡುವು ಮುಗಿದಿದೆ, ಕೆಲವರು ವಾಪಸ್ ತಂದಿದ್ದಾರೆ. ಕಾನೂನು ಇಲಾಖೆ ಜೊತೆಗೆ ಚರ್ಚೆ ಮಾಡಿ ತೀರ್ಮಾ‌ನ ಮಾಡ್ತೇವೆ ಎಂದು ಬೆಂಗಳೂರಿನಲ್ಲಿ ಅರಣ್ಯ ಇಲಾಖೆಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.

ಇನ್ನು ಇದೇ ವೇಳೆ ಸಂಸದ ಡಿ.ಕೆ.ಸುರೇಶ್ ನಿವಾಸದಲ್ಲಿ ಆಯೋಜಿಸಿದ್ದ ಡಿನ್ನರ್ ಮೀಟಿಂಗ್ ವಿಚಾರ ಸಂಬಂಧ ಪ್ರತಿಕ್ರಿಯೆ ನೀಡಿದ ಸಚಿವ ಈಶ್ವರ್ ಖಂಡ್ರೆ, ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪರಾಮರ್ಶೆ ನಡೆಯಿತು. ಯಾರು ಯಾವ ಕ್ಷೇತ್ರಗಳಲ್ಲಿ ಗೆಲ್ಲಬಹುದು ಎಂಬ ಬಗ್ಗೆ ಚರ್ಚೆ ಆಯಿತು. ಬರ ಪರಿಹಾರ, ರೈತರ ಸಮಸ್ಯೆ ಬಗ್ಗೆಯೂ ಚರ್ಚೆ ಮಾಡಿದೆವು. ಚಿಂತನ ಮಂಥ‌ನ ನಡೆಯಿತು.

ಲೋಕಸಭಾ ಚುನಾವಣೆಯ ಫಲಿತಾಂಶ ಬಂದ ಮೇಲೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲೂ ಕೆಲಸ ಮಾಡಲು ಸಿಎಂ ಸೂಚನೆ ನೀಡಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಕನಿಷ್ಠ 20 ಸ್ಥಾನ ಗೆದ್ದೇ ಗೆಲ್ಲುತ್ತೇವೆ. ಎಲ್ಲಾ ಕಡೆ ಗ್ಯಾರಂಟಿ ಅಲೆಯೇ ಇತ್ತು ಹೊರತು ಬೇರೆ ಯಾವ ಅಲೆಯೂ ಇರಲಿಲ್ಲ. ಸ್ವಯಂ ಪ್ರೇರಣೆಯಿಂದಲೇ ಜನ ನಮಗೆ ಬೆಂಬಲ ಸೂಚಿಸಿದ್ದಾರೆ ಎಂದು ಅರಣ್ಯ ಇಲಾಖೆ ಸಚಿವರು ತಿಳಿಸಿದ್ದಾರೆ.

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ಸಂಬಂಧ ಮಾತನಾಡಿದ ಸಚಿವರು, ಪೆನ್ ಡ್ರೈವ್ ಪ್ರಕರಣದ ಬಗ್ಗೆ ಎಸ್ಐಟಿ ತನಿಖೆ ಮಾಡುತ್ತಿದೆ. ಹೆಚ್​ಡಿ ಕುಮಾರಸ್ವಾಮಿ ಸೇರಿ ವಿಪಕ್ಷದವರು ತನಿಖೆಯ ಹಾದಿ ತಪ್ಪಿಸುತ್ತಿದ್ದಾರೆ. ಇದರಲ್ಲಿ ಯಾಱರ ಕೈವಾಡ ಇದೆ, ಎಲ್ಲಾ ಹೊರಗೆ ಬರುತ್ತದೆ. ಕೇಂದ್ರ ಸರ್ಕಾರ ರಾಜತಾಂತ್ರಿಕ ಪಾಸ್​ಪೋರ್ಟ್​ ರದ್ದು ಮಾಡಲಿ. ತನಿಖೆಗೆ ಕೇಂದ್ರ ಸರ್ಕಾರ ಸರಿಯಾಗಿ ಸಹಕಾರ ನೀಡಬೇಕು. ಜನರ ಗಮನ ಸೆಳೆಯಲು ಪ್ರತ್ಯಾರೋಪಗಳನ್ನು ಮಾಡಲಾಗ್ತಿದೆ. ಪ್ರಕರಣದ ಮುಖ್ಯ ಆರೋಪಿಗೆ ಶಿಕ್ಷೆ ಆಗಬೇಕೋ ಬೇಡವೋ? ಯಾಕೆ ಬಿಜೆಪಿ, ಜೆಡಿಎಸ್​​ನವರು ಶಂಕೆ ವ್ಯಕ್ತಪಡಿಸುತ್ತಿದ್ದಾರೆ ಎಂದು ಈಶ್ವರ್ ಖಂಡ್ರೆ ಕಿಡಿಕಾರಿದ್ದಾರೆ.