‘ಗ್ಯಾರಂಟಿ’ಗೇ ಇಲ್ಲ ಗ್ಯಾರಂಟಿ! ಬಿಜೆಪಿಗೆ ಮತ ನೀಡಿದರೆ ಉಚಿತ ಬಸ್​ ನಿಲ್ಲಿಸುತ್ತಾರೆಂದ ಪ್ರದೀಪ್ ಈಶ್ವರ್

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಿದರೆ ಗ್ಯಾರಂಟಿ ಯೋಜನೆಗಳು ರದ್ದಾಗಬಹುದು ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಹೇಳಿದ್ದಾರೆ. ಮಾಗಡಿ ಶಾಸಕ ಬಾಲಕೃಷ್ಣ ಇದೇ ರೀತಿಯ ಹೇಳಿಕೆ ನೀಡಿದ್ದು ವಿವಾದಕ್ಕೀಡಾಗಿತ್ತು. ಇದೀಗ ಪ್ರದೀಪ್ ಈಶ್ವರ್ ಸರದಿ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಕ್ಕಂದಿರೇ, ನೀವು ಬಿಜೆಪಿಗೆ ಏನಾದರೂ ಓಟ್ ಹಾಕಿದರೆ ಅವರು ಗ್ಯಾರಂಟಿ ನಿಲ್ಲಿಸಿಬಿಡುತ್ತಾರೆ ಎಂದು ಈಶ್ವರ್ ಹೇಳಿದ್ದಾರೆ.

ಚಿಕ್ಕಬಳ್ಳಾಪುರ, ಏಪ್ರಿಲ್ 4: ಲೋಕಸಭೆ ಚುನಾವಣೆಯಲ್ಲಿ (Lok Sabha Elections) ಬಿಜೆಪಿಗೆ ಮತ ನೀಡಿದರೆ ರಾಜ್ಯ ಕಾಂಗ್ರೆಸ್ ಸರ್ಕಾರದ ‘ಗ್ಯಾರಂಟಿ’ ಯೋಜನೆಗಳು ರದ್ದಾಗಬಹುದು ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಹೇಳಿದರು. ಮತದಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಯುವಕರು ಬರಬೇಕು, ಇವತ್ತು ಶರತ್ ಅಣ್ಣಾ ಬಂದಿರೋದಕ್ಕೆ ಒಂದು ಕೋಟಿಯ ಅಭಿವೃದ್ಧಿ ನಡೆಯುತ್ತಿದೆ. ಶರತ್ ಬಚ್ಚೇಗೌಡ ಸಾಹೇಬರಿಗೆ ಜಯವಾಗಲಿ. ಜೈ ಕಾಂಗ್ರೆಸ್. ನನ್ನನ್ನು ಹೇಗೆ ಆಶೀರ್ವದಿಸಿದಿರೋ ಅದೇ ರೀತಿ ರಕ್ಷಾ ರಾಮಯ್ಯ ಅವರನ್ನೂ ಆಶೀರ್ವದಿಸಿ’ ಎಂದು ಮನವಿ ಮಾಡಿದರು.

ಎರಡೆರಡು ಸಾವಿರ ರೂಪಾಯಿ ಗೃಹ ಲಕ್ಷ್ಮೀ ಯೋಜನೆಯಡಿ ಮನೆ ಮನೆಗೆ ಕೊಡುತ್ತಿದ್ದೇವೆ. ಹತ್ತತ್ತು ಕೆಜಿ ಅಕ್ಕಿ (ಐದು ಕೆಜಿ ಅಕ್ಕಿ, ಐದು ಕೆಜಿದು ದುಡ್ಡು) ಕೊಡುತ್ತಿದ್ದೇವೆ. ಬಿಜೆಪಿಯವರಿಗೆ ದುಡ್ಡು ಕೊಡುತ್ತೇವೆ ಎಂದರೂ ಅವರು ಅಕ್ಕಿ ಕೊಡುತ್ತಿಲ್ಲ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಕ್ಕಂದಿರೇ ಕೇಳಿಸಿಕೊಳ್ಳಿ. ನೀವು ಬಿಜೆಪಿಗೆ ಏನಾದರೂ ಓಟ್ ಹಾಕಿದರೆ ಅವರು ಗ್ಯಾರಂಟಿ ನಿಲ್ಲಿಸಿಬಿಡುತ್ತಾರೆ. ಮತ್ತೆ ಬಸ್ಸಿನಲ್ಲಿ ನೀವು ಟಿಕೆಟ್ ತಗೊಂಡು ಓಡಾಡಬೇಕಾಗುತ್ತದೆ. ಹಾಗಾಗಿ ಬಿಜೆಪಿಗೆ ಮತ ನೀಡಬೇಡಿ’ ಎಂದು ಪ್ರದೀಪ್ ಈಶ್ವರ್ ಹೇಳಿದರು.

ಶಾಶ್ವತ ನೀರಾವರಿ ಯೋಜನೆ ಮಾಡಲಿದ್ದೇವೆ. ದೊಡ್ಡಬಳ್ಳಾಪುರದ ಇಂಡಸ್ಟ್ರಿಯಲ್ ಏರಿಯಾದ ವೇಸ್ಟ್​ ಮ್ಯಾನೇಜ್ಮೆಂಟ್​ಗೆ ಆದ್ಯತೆ ನೀಡಲಿದ್ದೇವೆ ಎಂದು ಅವರು ಹೇಳಿದರು.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಿ ಗೆಲ್ಲಿಸಿದರೆ ಗ್ಯಾರಂಟಿ ಯೋಜನಗೆಳು ಸ್ಥಗಿತವಾಗಬಹುದು ಎಂದು ಮಾಗಡಿ ಶಾಸಕ ಬಾಲಕೃಷ್ಣ ಇತ್ತೀಚೆಗೆ ಹೇಳಿದ್ದು ವ್ಯಾಪಕ ವಿವಾದಕ್ಕೆ ಗುರಿಯಾಗಿತ್ತು. ನಂತರ ಸ್ಪಷ್ಟನೆ ನೀಡಿದ್ದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳು ಸ್ಥಗಿತಗೊಳ್ಳುವುದಿಲ್ಲ ಎಂದಿದ್ದರು.