ಎರಡು ಸೀಟಿಗಾಗಿ ಇಷ್ಟೆಲ್ಲಾ ಪ್ರಯತ್ನ ಪಡೆಬೇಕಾ, ಹೊಂದಾಣಿಕೆ ಬೇಕಾ? ಬಿಜೆಪಿ ನಡೆಗೆ ಎಚ್​ಡಿ ಕುಮಾರಸ್ವಾಮಿ ಬೇಸರ

ಲೋಕಸಭೆ ಚುನಾವಣೆ ದಿನಾಂಕ ಘೋಷಣೆಯಾಗಿದ್ದು, ಕರ್ನಾಟಕದಲ್ಲಿ ಬಿಜೆಪಿ-ಜೆಡಿಎಸ್ ಸೀಟು ಹಂಚಿಕೆ ಮಾತುಕತೆ ಮುಂದುವರಿದಿದೆ. ಹಾಸನ ಮಂಡ್ಯ ಕ್ಷೇತ್ರಗಳು ಜೆಡಿಎಸ್​ಗೆ ಬಿಟ್ಟುಕೊಡಲು ಬಿಜೆಪಿ ಒಪ್ಪಿಗೆ ಸೂಚಿಸಿದರೂ ಕೋಲಾರ ಕ್ಷೇತ್ರವನ್ನು ಬಿಟ್ಟುಕೊಡಲು ಹಿಂದೇಟು ಹಾಕುತ್ತಿದೆ. ಈ ಕುರಿತು ಮಾತನಾಡಿದ ಕುಮಾರಸ್ವಾಮಿ, ಎರಡು ಕ್ಷೇತ್ರಗಳಿಗಾಗಿ ಇಷ್ಟೆಲ್ಲಾ ಪ್ರಯತ್ನ ಮಾಡಬೇಕಾ? ಹೊಂದಾಣಿಕೆ ಬೇಕಾ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು, ಮಾ.18: ಲೋಕಸಭೆ ಚುನಾವಣೆ ದಿನಾಂಕ ಘೋಷಣೆಯಾಗಿದ್ದು, ಕರ್ನಾಟಕದಲ್ಲಿ ಬಿಜೆಪಿ-ಜೆಡಿಎಸ್ (BJP JDS) ಸೀಟು ಹಂಚಿಕೆ ಮಾತುಕತೆ ಮುಂದುವರಿದಿದೆ. ಹಾಸನ ಮಂಡ್ಯ ಕ್ಷೇತ್ರಗಳು ಜೆಡಿಎಸ್​ಗೆ ಬಿಟ್ಟುಕೊಡಲು ಬಿಜೆಪಿ ಒಪ್ಪಿಗೆ ಸೂಚಿಸಿದರೂ ಕೋಲಾರ ಕ್ಷೇತ್ರವನ್ನು ಬಿಟ್ಟುಕೊಡಲು ಹಿಂದೇಟು ಹಾಕುತ್ತಿದೆ. ಈ ಕುರಿತು ಮಾತನಾಡಿದ ಎಚ್​ಡಿ ಕುಮಾರಸ್ವಾಮಿ (HD Kumaraswamy), ಎರಡು ಕ್ಷೇತ್ರಗಳಿಗಾಗಿ ಇಷ್ಟೆಲ್ಲಾ ಪ್ರಯತ್ನ ಮಾಡಬೇಕಾ? ಹೊಂದಾಣಿಕೆ ಬೇಕಾ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನಮ್ಮ ಉದ್ದೇಶ ಕಾಂಗ್ರೆಸ್​ ಪಕ್ಷವನ್ನು ಎಲ್ಲಾ 28 ಕ್ಷೇತ್ರಗಳಲ್ಲಿ ಸೋಲಿಸುವುದಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಬಿಜಾಪುರ ಕಲುಬರ್ಗಿಯಲ್ಲಿ ನಮ್ಮ ಶಕ್ತಿ ಬಿಜೆಪಿಗಿಂತ ಹೆಚ್ಚಾಗಿದೆ. ಇಂತಹ ಕ್ಷೇತ್ರಗಳಲ್ಲಿ ನಮ್ಮನ್ನ ಹೇಗೆ ಬಳಕೆ ಮಾಡಿಕೊಳ್ಳಬೇಕು ಎಂಬುದಕ್ಕೆ ಬಿಜೆಪಿ ಹೈಕಮಾಂಡ್ ಜೊತೆ ಚರ್ಚೆಯಾಗಬೇಕು. ನಮ್ಮನ್ನ ಕಡೆಗಣಿಸಿದರೆ ಅದರಿಂದಾಗುವ ಪರಿಣಾಮಗಳನ್ನು ಸಭೆಯಲ್ಲಿ ಚರ್ಚೆ ಮಾಡಿದ್ದೇವೆ ಎಂದರು.

ಬಿಜೆಪಿ ಹೈಕಮಾಂಡ್​ಗೆ ಮುಟ್ಟಿಸಬೇಕಂತ ಎಲ್ಲರು ಚರ್ಚೆ ಮಾಡಿದ್ದಾರೆ. ಬಿಜೆಪಿ ಜೆಡಿಎಸ್ ಹೊಂದಾಣಿಕೆ ಜೆಡಿಎಸ್​ಗೆ ಹೆಚ್ಚು ಅನುಕೂಲವಾಗಿಲ್ಲ ಅಂತಾ ನಮ್ಮ ಮುಖಂಡರೊಬ್ಬರು ಹೇಳಿದರು. 18 ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಶೇಕಡಾ 3 ಮತಗಳು ಸ್ವಿಂಗ್ ಆದರೆ ಬಿಜೆಪಿಗೆ ಅನುಕೂಲವಾಗುತ್ತದೆ. ಇದನ್ನ ಹೈಕಮಾಂಡ್ ಗಮನಕ್ಕೆ ತನ್ನಿ ಅಂತಾ ಹೇಳಿದ್ದಾರೆ. ಇದಕ್ಕೆ ಮುಂದೆ ಪೆಟ್ಟು ಬಿದರೆ ಅದರ ಸಾಧಕ ಬಾಧಕಕ್ಕೆ ಅವರೇ ಜವಾಬ್ದಾರಿ ಎಂದರು.

ಜೆಡಿಎಸ್​ಗೆ ಎರಡೇ ಸೀಟು ಸಿಗುವ ವಿಚಾರವಾಗಿ ಮಾತನಾಡಿದ ಕುಮಾರಸ್ವಾಮಿ, ನಾನು ಅಧಿಕೃತ ಘೋಷಣೆ ಆಗುವರೆಗೂ ಮಾತಾಡುವುದಿಲ್ಲ. ನಾನು ಆರೇಳು ಸೀಟುಗಳನ್ನು ಕೇಳಿಲ್ಲ. ನಾವು ಕೇಳಿದ್ದೇ ಮೂರರಿಂದ ನಾಲ್ಕು ಸೀಟುಗಳನ್ನಷ್ಟೆ. ನಮ್ಮ ಶಕ್ತಿ ಅವರಿಗೂ ಗೊತ್ತಿದೆ. ಮೂರು ನಾಲ್ಕು ಸೀಟು ಸಿಗುವ ನಂಬಿಕೆ ಇದೆ ಎಂದರು.

ಎರಡು ಸೀಟು ಪಡೆಯಲು ನಾನು ಇಷ್ಟೆಲ್ಲ ಪ್ರಯತ್ನ ಪಡೆಬೇಕಾ? ಹೊಂದಾಣಿಕೆ ಬೇಕಾ? ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಹಾಸನ, ಮಂಡ್ಯದಲ್ಲಿ ಸ್ವಾತಂತ್ರ್ಯವಾಗೆ ನಮ್ಮ ಅಭ್ಯರ್ಥಿಗಳು ಗೆಲ್ಲುತ್ತಾರೆ. ತ್ರಿಕೋನ ಸ್ವರ್ಧೆ ಆದರೆ ಸುಲಭವಾಗಿ ಗೆಲ್ಲುತ್ತೇವೆ. 18ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಶಕ್ತಿಯನ್ನ ದಾರೆಯರೆದರೆ ಬಿಜೆಪಿಗೆ ಪ್ಲಸ್ ಪಾಯಿಂಟ್. ಕರ್ನಾಟಕ ರಾಜಕೀಯವೇ ಬೇರೆ ದೇಶದ ರಾಜಕಾರಣವೇ ಬೇರೆ ಎಂದರು.

ನಮ್ಮ ಪಕ್ಷದ ಅಭಿಮಾನಿಗಳು ಮತ್ತು ಕಾರ್ಯಕರ್ತರು ಮತ್ತು ಬಿಜೆಪಿ ಕಾರ್ಯಕರ್ತರು ಯಾವುದೇ ಗೊಂದಲಕ್ಕೆ ಅವಕಾಶ ಮಾಡಿಕೊಡಬಾರದು. ಎಲ್ಲರು ಒಟ್ಟಾಗಿ ಕೆಲಸ ಮಾಡಬೇಕು. ನಾವು ಗುರಿಮುಟ್ಟುವುದು ಕೇವಲ ಅಧಿಕಾರಕ್ಕೆ ಅಲ್ಲ. ನಮ್ಮ ರಾಜ್ಯಕ್ಕೆ ಹಲವಾರು ರೀತಿಯಲ್ಲಿ ಅನ್ಯಾಯವಾಗಿದೆ, ಅದು ಆ ಪಕ್ಷ ಇ ಪಕ್ಷದಿಂದ ಅಂತಾ ಇಲ್ಲ. ಬೇರೆ ರಾಜ್ಯಕ್ಕೆ ಹೋಲಿಕೆ ಮಾಡುದರೆ ನಮ್ಮ ರಾಜ್ಯಕ್ಕೆ ಅನ್ಯಾಯವಾಗಿದ್ದು ಸತ್ಯ ಎಂದರು.

ದೇಶದಲ್ಲಿ ಎನ್​ಡಿಎ ಸರ್ಕಾರ ಬರುತ್ತದೆ ಎಂಬ ಭಾವನೆ ಇದೆ. ಮೈತ್ರಿಯ ಉದ್ದೇಶ ಅಧಿಕಾರಕ್ಕಿಂತ ಹೆಚ್ಚಾಗಿ ರಾಜ್ಯದ ಅಭಿವೃದ್ಧಿಗೆ ಪ್ರಾಮುಖ್ಯತೆ ಕೊಡುವುದಾಗಿದೆ. ಇದಕ್ಕೆಲ್ಲ ಪರಿಹಾರ ತರಬೇಕು ಅನ್ನೋದೆ ನಮ್ಮ ಪಕ್ಷದ ನಿಲುವು. ಲೋಕಸಭೆ ಸದಸ್ಯರಿಗೆ ಧ್ವನಿ ಇಲ್ಲ ಅಂತಿದ್ದಾರೆ. ಈ ಧ್ವನಿಯನ್ನ ಲೋಕಸಭೆಯಲ್ಲಿ ತರಬೇಕಂತ ನಿರ್ಧಾರ ಮಾಡಲಾಗಿದೆ. ಒಂದು ಅವಕಾಶವನ್ನ ನಮಗೆ ಕೊಡಿ. ಅನ್ಯಾಯವನ್ನ ಸರಿಪಡಿಸಲು ವಿಫಲ ಆದರೆ ನೇರವಾಗಿ ಪ್ರಶ್ನೆ ಮಾಡಿ. ಮೂರು ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಸ್ಪರ್ಧಿಸಿತ್ತಾರೆ ಎಂದರು.