ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ : ಸಮುದ್ರ ಮಾರ್ಗವಾಗಿ ಶಂಕಿತರು ಪರಾರಿಯಾಗುವ ಸಾಧ್ಯತೆ, ಹೈ ಅಲರ್ಟ್

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತರು ಪರಾರಿಯಾಗಲು ಸಮುದ್ರ ಮಾರ್ಗ ಬಳಕೆ ಸಾಧ್ಯತೆ ಹಿನ್ನೆಲೆ ಅರಬ್ಬೀ ಸಮುದ್ರದ ಆಯಕಟ್ಟಿನ ಸ್ಥಳಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಮಂಗಳೂರು ಕರಾವಳಿ ಕಾವಲು ಪಡೆಗೆ ಎನ್​ಐಎ ಸೂಚನೆಯಂತೆ ಪೊಲೀಸರಿಂದ ಪ್ರತಿ ಬೋಟ್ ಹಾಗೂ ಎಲ್ಲ ದೋಣಿಗಳ ತಪಾಸಣೆ ಮಾಡಲಾಗುತ್ತಿದೆ.

ಮಂಗಳೂರು, ಮಾರ್ಚ್​​​ 09 : ಬೆಂಗಳೂರಿನಿಂದ ಬಳ್ಳಾರಿವರೆಗೂ ನಂಟಿರುವುದು ಗೊತ್ತಾಗಿದೆ. ಕೆಫೆಯಿಂದ ಕಂಬಿವರೆಗೂ ಲಿಂಕ್‌ ಇರುವುದು ಬಯಲಾಗಿದೆ. ರಾಮೇಶ್ವರಂ ಕೆಫೆ (Rameshwaram Cafe blast) ಮೇಲಿನ ಬಾಂಬ್‌ ಪ್ರಕರಣದ ವಿಚಾರಣೆಯನ್ನ ಎನ್‌ಐಎ ಕೈಗೆತ್ತಿಕೊಳ್ತಿದ್ದಂತೆ, ಇದರ ಹಿಂದೆ ಐಸಿಸ್​​ನಂಟಿನ ಉಗ್ರರ ಇರುವ ಸುಳಿವು ಸಿಕ್ಕಿದೆ. ಇದೀಗ ಶಂಕಿತರು ಪರಾರಿಯಾಗಲು ಸಮುದ್ರ ಮಾರ್ಗ ಬಳಕೆ ಸಾಧ್ಯತೆಯಿದ್ದು, ಹೀಗಾಗಿ ಅರಬ್ಬೀ ಸಮುದ್ರದ ಆಯಕಟ್ಟಿನ ಸ್ಥಳಗಳಲ್ಲಿ ಹೈ ಅಲರ್ಟ್​ಗೆ ಮಂಗಳೂರು ಕರಾವಳಿ ಕಾವಲು ಪಡೆಗೆ NIA ಸೂಚನೆ ನೀಡಿದೆ. ಎನ್​ಐಎ ಸೂಚನೆಯಂತೆ ಪ್ರತಿ ಬೋಟ್ ಹಾಗೂ ಎಲ್ಲ ದೋಣಿಗಳನ್ನು ಪೊಲೀಸರಿಂದ ತಪಾಸಣೆ ಮಾಡಲಾಗುತ್ತಿದೆ.

ಮಾರ್ಚ್‌ 1 ರಂದು ಬಾಂಬ್ ಸ್ಫೋಟಿಸಿದ ಬಳಿಕ ಬಿಎಂಟಿಸಿ ಬಸ್‌ ಹತ್ತಿದ್ದ ಬಾಂಬರ್​, ಬಳಿಕ ಬಳ್ಳಾರಿ ಬಸ್‌ ಹತ್ತಿದ್ದ. ಬಿಎಂಟಿಸಿ ಬಸ್‌ ಹತ್ತಿರುವ ಹಾಗೂ ಬಳ್ಳಾರಿ ಬಸ್‌ ನಿಲ್ದಾಣದಲ್ಲಿ ಓಡಾಡಿರುವ ಸಿಸಿಟಿವಿ ದೃಶ್ಯವನ್ನ ಎನ್‌ಐಎ ನಿನ್ನೆ ರಿಲೀಸ್‌ ಮಾಡಿತ್ತು. ರಾತ್ರಿ 9 ಗಂಟೆಯಲ್ಲಿ ಬಳ್ಳಾರಿ ಬಸ್‌ ನಿಲ್ದಾಣದ ಪೊಲೀಸ್‌ ಚೌಕಿ ಮುಂದೆ ಬಾಂಬರ್‌ ಓಡಾಡಿದ್ದಾನೆ. ಬಳಿಕ ಆಟೋ ಹತ್ತಿ ರಾಯಲ್‌ ಸರ್ಕಲ್‌ ಮೂಲಕ ಕೌಲ್‌ಬಜಾರ್‌ಗೆ ಹೋಗಿರುವ ಶಂಕೆ ಇದ್ದು ಆಟೋ ಚಾಲಕನನ್ನ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ.

ವಿಚಾರಣೆ ಒಂದೆಡೆಯಾದರೆ ವಾರ ಬಳಿಕ ರಾಮೇಶ್ವರಂ ಕೆಫೆ ನಿನ್ನೆ ಬಾಗಿಲು ತೆರೆದಿತ್ತು. ಶುದ್ಧೀಕಾರ್ಯ, ಪೂಜಾ ಕಾರ್ಯ ನಡೆದಿದ್ದು ಬೆಳಗ್ಗೆ 6. 30ಕ್ಕೆ ಗ್ರಾಹಕರಿಗೆ ಎಂದಿನಂತೆ ಸೇವೆ ಆರಂಭವಾಗಿದೆ. ರಾಷ್ಟ್ರಗೀತೆ ಹಾಡುವ ಮೂಲಕ ನಿನ್ನೆ ಬೆಳಗ್ಗೆ ಹೋಟೆಲ್‌ ರೀ ಓಪನ್ ಆಗಿದೆ.

ಸೈಯದ್‌ ಸಮೀರ್‌ , ಮಿನಾಜ್ ಅಲಿಯಾಸ್‌ ಸುಲೇಮಾನ್‌ನ ಸಹಚರ ಆಗಿದ್ದ. ಕಳೆದ ಅಕ್ಟೋಬರ್‌ನಲ್ಲಿ ರಸಗೊಬ್ಬರ ಅಂಗಡಿಯೊಂದರಲ್ಲಿ ಒಂದು ಕೆಜಿ ಅಮೋನಿಯಂ ನೈಟ್ರೇಟ್‌ ಖರೀಸಿದ್ದರು. ಸ್ಫೋಟಕ್ಕೆ ಈ ವಸ್ತುವನ್ನ ಬಳಸಲಾಗುತ್ತೆ. ಬಳ್ಳಾರಿಯ ಕೌಲ್‌ಬಜಾರ್‌ನಲ್ಲಿರೋ ಶಾಪ್‌ನಲ್ಲೇ ಅಮೋನಿಯಂ ನೈಟ್ರೇಟ್ ಖರೀಸಿದ್ದರು. ಹೀಗಾಗಿ ಕೌಲ್‌ಬಜಾರ್‌ನಲ್ಲೇ ಬೀಡು ಬಿಟ್ಟಿರುವ NIA ಹತ್ತಾರು ಶಾಪ್‌ಗಳಲ್ಲಿ ವಿಚಾರಣೆ ಮಾಡಿದೆ. ಸಮೀರ್‌ ಹಾಗೂ ಸುಲೇಮಾನ್‌ ಹಿಸ್ಟರಿ ಭಯಾನಕವಾಗಿದೆ.