ಶಿವಾಜಿ‌ ಮಹಾ ವಿದ್ಯಾಲಯದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಒಂದೇ ವೇದಿಕೆಯಲ್ಲಿ ದೇಶಪಾಂಡೆ & ಘೋಟ್ನೇಕರ

ಹಳಿಯಾಳ : ಪಟ್ಟಣದ ಶ್ರೀ.ಶಿವಾಜಿ ಮಹಾ ವಿದ್ಯಾಲಯದ ಶತಮಾನೋತ್ಸವ ಕಾರ್ಯಕ್ರಮದ ಕುರಿತು ಶನಿವಾರ ಆಯೋಜಿಸಿದ ಪೂರ್ವಭಾವಿ ಸಭೆಯಲ್ಲಿ ಶಾಸಕರಾದ ಆರ್.ವಿ.ದೇಶಪಾಂಡೆಯವರು ಭಾಗವಹಿಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.

ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್ ಘೋಟ್ನೆಕರ್, ಖ್ಯಾತ ವೈದ್ಯರಾದ ಡಾ.ಮೋಹನ ಪಾಟೀಲ್, ಮುಖಂಡರಾದ ಸತ್ಯಜೀತ್ ಗಿರಿ, ತಹಶೀಲ್ದಾರ್, ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಣಾಧಿಕಾರಿ, ಅಧಿಕಾರಿಗಳು, ಶತಮಾನೋತ್ಸವ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು,ಮುಖಂಡರು ಹಾಗೂ ಪಟ್ಟಣದ ಹಿರಿಯರು ಉಪಸ್ಥಿತರಿದ್ದರು.

ಕಳೆದ ಎರಡು ವರ್ಷಗಳಿಂದ ಆರ್.ವಿ.ದೇಶಪಾಂಡೆಯವರ ಗರಡಿಯಿಂದ ಹೊರಬಂದು ವಿಧಾನ ಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದ ಎಸ್.ಎಲ್.ಘೋಟ್ನೇಕರ್ ಅವರು ದೇಶಪಾಂಡೆಯವರ ಜೊತೆ ವೇದಿಕೆ‌ ಹಂಚಿಕೊಂಡಿದ್ದು ವಿಶೇಷವಾಗಿತ್ತು. ಒಂದೇ ವೇದಿಕೆಯಲ್ಲಿ ಇಬ್ಬರು ಕಾಣಿಸಿಕೊಂಡರಾದರೂ ಪರಸ್ಪರ ಒಬ್ಬರನ್ನೊಬ್ಬರು ಮುಖ ನೋಡದೆ ಸಭೆಯಲ್ಲಿ ಭಾಗವಹಿಸಿದ್ದರು.