ಅಯೋಧ್ಯೆಗೆ ಸ್ವಯಂಸೇವಕರಾಗಿ ತೆರಳಿದ ದಾಂಡೇಲಿಯ ಪ್ರಾಣೇಶ್ ಮುಗುಳಿಹಾಳ

ದಾಂಡೇಲಿ : ಜನವರಿ:22 ರಂದು ಅಯೋಧ್ಯೆಯ ಶ್ರೀರಾಮ‌ ಮಂದಿರದ ಉದ್ಘಾಟನೆ ಮತ್ತು ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸೇವೆ ಸಲ್ಲಿಸಲು ಹೆಸ್ಕಾಂನ ನಿವೃತ್ತ ಶಾಖಾಧಿಕಾರಿಯಾಗಿರುವ ನಗರದ ನಿವಾಸಿ ಪ್ರಾಣೇಶ್ ಮುಗುಳಿಹಾಳ ಅವರು ಸ್ವಯಂಸೇವಕರಾಗಿ ಅಯೋಧ್ಯೆಗೆ ತೆರಳಿದರು.

ದಾಂಡೇಲಿಯಿಂದ ಹುಬ್ಬಳ್ಳಿಯವರೆಗೆ ಖಾಸಗಿ ವಾಹನದಲ್ಲಿ ತೆರಳಿ ಅಲ್ಲಿಂದ ವಿಮಾನದ ಮೂಲಕ ಅಯೋಧ್ಯೆಗೆ ಪ್ರಯಾಣವನ್ನು ಬೆಳೆಸಿದ್ದಾರೆ. ಪ್ರಾಣೇಶ್ ಮುಗುಳಿಹಾಳ ಅವರು ಧಾರ್ಮಿಕ, ಸಾಮಾಜಿಕ ಕಾರ್ಯ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ನಗರದ ಶ್ರೀ.ರಾಘವೇಂದ್ರ ಮಠದ ಆಡಳಿತ ಸಮಿತಿಯಲ್ಲಿ ಸಕ್ರಿಯ ಪದಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ಅಯೋಧ್ಯೆಗೆ ಸ್ವಯಂಸೇವಕರಾಗಿ ತೆರಳಿದ ಪ್ರಾಣೇಶ್ ಮುಗುಳಿಹಾಳ ಅವರಿಗೆ ನಗರದ ಗಣ್ಯರನೇಕರು ಶುಭ ಹಾರೈಸಿದ್ದಾರೆ.