ನುಡಿಸಿರಿ ಕಚೇರಿಗೆ ದೇಶಪಾಂಡೆ ಭೇಟಿ : ನುಡಿಸಿರಿ ಸ್ಟುಡಿಯೋ ವ್ಯವಸ್ಥೆಯ ಬಗ್ಗೆ ಶ್ಲಾಘನೆ

ದಾಂಡೇಲಿ‌ : ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರು ಹಾಗೂ ಶಾಸಕರಾದ ಆರ್.ವಿ.ದೇಶಪಾಂಡೆಯವರು ಜಿಲ್ಲೆಯ ಏಕೈಕ ವಾಹಿನಿಯಾಗಿರುವ ನುಡಿಸಿರಿ ವಾಹಿನಿಯ ಹೊನ್ನಾವರದ‌ ಕೇಂದ್ರ ಕಚೇರಿಗೆ ಭಾನುವಾರ ಭೇಟಿ ನೀಡಿದರು.

ನುಡಿಸಿರಿ ವಾಹಿನಿಯ ಬಗ್ಗೆ ಮಾಹಿತಿಯನ್ನು ಪಡೆದುಕೊಂಡ ದೇಶಪಾಂಡೆ ಅವರು ಆನಂತರ ನುಡಿಸಿರಿ ವಾಹಿನಿಯ ಸ್ಟುಡಿಯೋವನ್ನು ವೀಕ್ಷಣೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಆರ್.ವಿ.ದೇಶಪಾಂಡೆ ಅವರು ಜಿಲ್ಲೆಗೆ ಅತಿ ಅಗತ್ಯವಾಗಿ ಬೇಕಾಗಿದ್ದ ವಾಹಿನಿಯ ಅವಶ್ಯಕತೆಯನ್ನು ನುಡಿಸಿರಿ ವಾಹಿನಿಯು ಪೂರೈಸಿದೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ನುಡಿಸಿರಿ ವಾಹಿನಿಯು ಜಿಲ್ಲೆಯ ಜನತೆಯ ಧ್ವನಿಯಾಗಿ ಕೆಲಸವನ್ನು ನಿರ್ವಹಿಸಲಿ. ಆದಷ್ಟು ಶೀಘ್ರ ನುಡಿಸಿರಿ ವಾಹಿನಿ ರಾಜ್ಯಮಟ್ಟದ ವಾಹಿನಿಯಾಗಿ ಜಿಲ್ಲೆಯ ಕೀರ್ತಿಯನ್ನು ಇಮ್ಮಡಿಗೊಳಿಸಲಿ ಎಂದು ಶುಭವನ್ನು ಹಾರೈಸಿದರು.

ಇದಕ್ಕೂ ಪೂರ್ವದಲ್ಲಿ ನುಡಿಸಿರಿ ಕಾರ್ಯಾಲಯಕ್ಕೆ ಆಗಮಿಸಿದ ಆರ್.ವಿ. ದೇಶಪಾಂಡೆಯವರನ್ನು ನುಡಿಸಿರಿ ಬಳಗ ಗೌರವಪೂರ್ವಕವಾಗಿ ಸ್ವಾಗತಿಸಿತು. ಕೊನೆಯಲ್ಲಿ ಆರ್.ವಿ.ದೇಶಪಾಂಡೆಯವರನ್ನು ನುಡಿಸಿರಿ ವಾಹಿನಿಯ ಪರವಾಗಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ನುಡಿಸಿರಿ ಬಳಗದ ಮುಖ್ಯಸ್ಥರು, ಸಂಪಾದಕ ಮಂಡಳಿ ಹಾಗೂ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು