ಬೆಂಗಳೂರಿನಾದ್ಯಂತ ವೈಕುಂಠ ಏಕಾದಶಿ ಸಂಭ್ರಮ: ಮಲ್ಲೇಶ್ವರ ಟಿಟಿಡಿಯಲ್ಲಿ ಹಬ್ಬದ ವಾತಾವರಣ

ಬೆಂಗಳೂರು, ಡಿಸೆಂಬರ್ 23: ಇಂದು (ಶನಿವಾರ) ನಾಡಿನೆಲ್ಲೆಡೆ ವೈಕುಂಠ ಏಕಾದಶಿ   ಹಬ್ಬದ ಸಂಭ್ರಮ. ಈ ಹಬ್ಬವನ್ನು ಬೆಂಗಳೂರಿಗರು ಪ್ರತಿವರ್ಷ ಸಡಗರದಿಂದ ಆಚಾರಿಸುತ್ತಾರೆ. ಈ ವರ್ಷ ಕೂಡ ಅದ್ದೂರಿಯಾಗಿ ವೈಕುಂಠ ಏಕಾದಶಿಯನ್ನು ಬರ ಮಾಡಿಕೊಳ್ಳಲಾಗುತ್ತಿದ್ದು, ನಗರದ ದೇವಸ್ಥಾನಗಳಲ್ಲಿ ಶುಕ್ರವಾರವೇ ಹಬ್ಬದ ವಾತಾವರಣ ಮನೆಮಾಡಿತ್ತು.

ಮಲ್ಲೇಶ್ವರದ ಟಿಟಿಡಿ ದೇವಸ್ಥಾನದಲ್ಲಂತೂ ಸಂಭ್ರಮ ಮುಗಿಲುಮುಟ್ಟಿದೆ. ವೈಕುಂಠ ಏಕಾದಶಿ ಪ್ರಯುಕ್ತವಾಗಿಯೇ ದೇವಸ್ಥಾನದ ಸುತ್ತಲೂ ದಕ್ಷಿಣ ಶೈಲಿಯ ಚಪ್ಪರ ಹಾಕಿ ಹೂವಿನಿಂದ ಅಲಾಂಕಾರ ಮಾಡಲಾಗಿದೆ. ಬೆಳಗ್ಗೆ 6 ಗಂಟೆ ಸುಮಾರಿಗೇ ವಿಶೇಷ ಪೂಜೆ ಆರಂಭವಾಗಿದೆ. ವೆಂಕಟೇಶ್ವರನಿಗೆ ಪಂಚಾಭಿಷೇಕ ಮಾಡಿ, ಪುಷ್ಪಾಭಿಷೇಕ ಮಾಡಿ ನಂತರ ವಿಶೇಷ ಅಲಂಕಾರ ಮಾಡಿ ಭಕ್ತದಿಗಳಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ.

ದೇಗುಲಕ್ಕೆ ಬಂದ ಭಕ್ತರಿಗೆ ಪ್ರಸಾದ ವಿತರಣೆ ನಡೆಯಲಿದೆ. ದೇವಸ್ಥಾನಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಜನರು ಬರುವ ನಿರೀಕ್ಷೆ ಇದ್ದು, ನೂಕು ನುಗ್ಗಲಾಗದಂತೆ ದೇವಸ್ಥಾನದ ಸುತ್ತಲೂ ಬ್ಯಾರೀಕೇಟ್ ಅಳವಡಿಸಲಾಗಿದೆ. ಇನ್ನು, ಕೋವಿಡ್ ಹೆಚ್ಚಾಗುತ್ತಿರುವ ಹಿನ್ನೆಲೆ ಮಾಸ್ಕ್ ಹಾಕಿಕೊಂಡು ಭಕ್ತದಿಗಳು ದೇವಸ್ಥಾನಕ್ಕೆ ಬರಲು ದೇವಸ್ಥಾನದ ಆಡಳಿತ ಮಂಡಳಿ ಸೂಚಿಸಿದೆ‌.‌ ಅಲ್ಲದೇ ಟ್ರಾಫಿಕ್ ಜಾಮ್ ಆಗುವ ಸಾಧ್ಯಾತೆಗಳು ಇರುವುದರಿಂದ ಟ್ರಾಪಿಕ್ ಪೋಲಿಸರನ್ನೂ ನಿಯೋಜನೆ ಮಾಡಲಾಗಿದೆ.

ವೈಕುಂಠನಿಗೆ ಬೆಳಗ್ಗೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೂ ವಿಶೇಷ ಪೂಜೆ, ಹೊಮ, ಹವನಗಳು ನೆರವೇರಲಿದ್ದು, ಮಧ್ಯರಾತ್ರಿಯವರೆಗೂ ಭಕ್ತದಿಗಳು ದೇವಸ್ಥಾನಕ್ಕೆ ಬರಲು ಅವಕಾಶ ಮಾಡಿಕೊಡಲಾಗಿದೆ.

ವೈಕುಂಠ ಏಕಾದಶಿ ಅಂದರೆ ಹಿಂದೂಗಳಿಗೆ ಒಂದು ಸಂಭ್ರಮ. ಈ ದಿನ ದೇವಸ್ಥಾನಕ್ಕೆ ಬಂದು ವೈಕುಂಠ ದರ್ಶನ ಮಾಡಿದ್ರೆ ಒಳ್ಳೆಯದಾಗುತ್ತೆ ಎನ್ನೋದು ನಂಬಿಕೆ.‌

ಮೈಸೂರಿನ ವಿವಿಧ ದೇಗುಲಗಳಲ್ಲಿ‌ ಸ್ವರ್ಗದ ಬಾಗಿಲು ನಿರ್ಮಾಣ ಮಾಡಿ ಆರಾಧನೆ ನಡೆಸಲಾಗುತ್ತಿದೆ. ಮೈಸೂರಿನ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿರುವ ದತ್ತ ವೆಂಕಟೇಶ್ವರ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಬೆಳಗ್ಗೆ 4 ಗಂಟೆಯಿಂದ ಸ್ವರ್ಗದ ಬಾಗಿಲು ಮೂಲಕ‌ ತೆರಳಿ ಭಕ್ತರು ವೆಂಕಟೇಶ್ವರನ ದರ್ಶನ ಪಡೆಯುತ್ತಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿರುವ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯುತ್ತಿದ್ದಾರೆ.