ಅದು ‘ತರಾಟೆ’ಯಲ್ಲ ತಿಳಿ ಹೇಳಿದ್ದಷ್ಟೇ.! ಪೂಜಾರಿ ಉವಾಚ

ಹಾವೇರಿ: ಸಿದ್ದರಾಮಯ್ಯನವರಿಗೆ 75 ವರ್ಷ ಆಗಿದೆ ಎಂದು ಅವರ ಖಾಸಗಿ ಉತ್ಸವ ಮಾಡಿಕೊಂಡಿದ್ದಾರೆ. ಅದಕ್ಕೂ ನಮ್ಮ ರಾಜಕಾರಣಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಹಾವೇರಿಯಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿಕೆ ನೀಡಿದ್ದಾರೆ. ಸಿದ್ದರಾಮೋತ್ಸವ ಬಿಜೆಪಿಗೆ ಎಚ್ಚರಿಕೆ ಗಂಟೆ ಆಗಿದೆಯಾ ಎಂಬ ಪತ್ರಕರ್ತರ ಪ್ರಶ್ನೆಗೆ ಕೋಟಾ ಶ್ರೀನಿವಾಸ್ ಪೂಜಾರಿ ಪ್ರತಿಕ್ರಯಿಸಿ ಸಿದ್ದರಾಮಯ್ಯನವರ ಖಾಸಗಿ ಉತ್ಸವಕ್ಕೂ ನಮ್ಮ ರಾಜಕೀಯ ಸಂಘಟನೆಗೂ ಸಂಬಂಧ ಇಲ್ಲ ಎಂದರು.

ಇನ್ನು ಬಿಜೆಪಿಯ ಸೈದ್ಧಾಂತಿಕ ಮತ್ತು ಸಂಘಟನಾತ್ಮಕ ಹೋರಾಟ, ನಮ್ಮ ಅಭಿವೃದ್ಧಿ ಕೆಲಸ, ಸಿಎಂ ಪರಿಶ್ರಮ, ನಳೀನ್ ಕುಮಾರ್ ಸಂಘಟನಾ ಶಕ್ತಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳು, ಯಡಿಯೂರಪ್ಪನವರ ನೇತೃತ್ವ ಈ ಎಲ್ಲಾ ಕಾರಣದಿಂದ ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಿಎಂ ಸೇರಿದಂತೆ ಬಿಜೆಪಿ ಮುಖಂಡರಿಗೆ ಅಮಿತ್ ಶಾ ತರಾಟೆಗೆ ತೆಗೆದುಕೊಂಡ ವಿಚಾರವಾಗಿ ಮಾತನಾಡಿದ ಕೋಟ ಅಮಿತ್ ಶಾ ನಮ್ಮ ಹಿರಿಯರು, ನಮ್ಮನ್ನು ಕರೆದು ರಾಜಕೀಯ ಮಾರ್ಗದರ್ಶನ ಮಾಡಿದ್ದಾರೆ. ಅಮಿತ್ ಶಾ ರವರು ನಮ್ಮ ಪರಮೋಚ್ಛ ನಾಯಕರು ನಮಗೆ ಸಲಹೆ, ಸೂಚನೆ ಕೊಡೋ ಜವಾಬ್ದಾರಿ ಸ್ಥಾನದಲ್ಲಿರೋದ್ರಿಂದ ನಮಗೆ ಅವರು ತಿಳಿ ಹೇಳಿದ್ದಾರೆ ಎಂದರು.