ಏಕದಿನ ಸರಣಿಯಿಂದ ಹಿಂದೆ ಸರಿದ ದೀಪಕ್ ಚಹರ್; ಆರ್​ಸಿಬಿ ಹುಲಿಗೆ ಒಲಿದ ಅದೃಷ್ಟ..!

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಾಳೆಯಿಂದ ಅಂದರೆ ಡಿಸೆಂಬರ್ 17 ರಿಂದ ಮೂರು ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ. ಆದರೆ ಸರಣಿ ಆರಂಭಕ್ಕೂ ಮುನ್ನ ಟೀಂ ಇಂಡಿಯಾದಲ್ಲಿ ಬದಲಾವಣೆಗಳಾಗಿದ್ದು, ತಂಡದ ವೇಗದ ಬೌಲರ್ ದೀಪಕ್ ಚಹಾರ್ ಕೌಟುಂಬಿಕ ಕಾರಣಗಳಿಂದ ಈ ಸರಣಿಯಲ್ಲಿ ಆಡಲು ನಿರಾಕರಿಸಿದ್ದಾರೆ.

ದೀಪಕ್ ಚಹರ್ ಅವರ ಅನುಪಸ್ಥಿತಿಯಲ್ಲಿ ಈಗ ಅವರ ಜಾಗಕ್ಕೆ ಐಪಿಎಲ್​ನಲ್ಲಿ ಆರ್​ಸಿಬಿ ತಂಡವನ್ನು ಪ್ರತಿನಿಧಿಸುವ ಬಲಗೈ ವೇಗಿ ಆಕಾಶ್ ದೀಪ್ ಅವರನ್ನು ಏಕದಿನ ಸರಣಿಗಾಗಿ ಭಾರತ ತಂಡದಲ್ಲಿ ಸೇರಿಸಲಾಗಿದೆ. ಬಿಹಾರ ಮೂಲದ ಆಕಾಶ್ ದೀಪ್ ಅವರು ಮೊದಲ ಬಾರಿಗೆ ಭಾರತಕ್ಕಾಗಿ ಆಡಲಿದ್ದಾರೆ.

ಪ್ರಸ್ತುತ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಕಾಶ್ ದೀಪ್ ತಮ್ಮ ತಂಡ ಬಂಗಾಳದ ಪರ ಉತ್ತಮ ಪ್ರದರ್ಶನ ನೀಡಿದ್ದರು. ಆಕಾಶ್ ದೀಪ್ ಬಿಹಾರದ ರೋಹ್ತಾಸ್ ಜಿಲ್ಲೆಗೆ ಸೇರಿದವರಾಗಿದ್ದರೂ, ಅವರು ದೇಶೀಯ ಪಂದ್ಯಾವಳಿಯಲ್ಲಿ ಬಂಗಾಳದ ಪರವಾಗಿ ಆಡುತ್ತಾರೆ.

27 ವರ್ಷದ ಆಕಾಶ್ ದೀಪ್ ಬಲಗೈ ವೇಗದ ಬೌಲಿಂಗ್ ಆಲ್ ರೌಂಡರ್ ಆಗಿದ್ದು, ರೆಸ್ಟ್ ಆಫ್ ಇಂಡಿಯಾ ಪರ ಕೂಡ ಆಡಿದ್ದಾರೆ. ದೇಶೀಯ ಮಟ್ಟದಲ್ಲಿ ಆಕಾಶ್ ದೀಪ್ ಇಲ್ಲಿಯವರೆಗೆ 25 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಅದರಲ್ಲಿ ಅವರು 90 ವಿಕೆಟ್ಗಳನ್ನು ಪಡೆದಿದ್ದಾರೆ. ಈ ಅವಧಿಯಲ್ಲಿ 4 ಬಾರಿ ಐದು ವಿಕೆಟ್ ಪಡೆದ ಸಾಧನೆ ಮಾಡಿದ್ದು, 5 ಬಾರಿ ನಾಲ್ಕು ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ

ಪ್ರಥಮ ದರ್ಜೆ ಕ್ರಿಕೆಟ್‌ನ ಒಂದು ಇನ್ನಿಂಗ್ಸ್‌ನಲ್ಲಿ 60 ರನ್‌ಗಳಿಗೆ 6 ವಿಕೆಟ್‌ ಪಡೆದಿರುವುದು ಅವರ ಅತ್ಯುತ್ತಮ ಪ್ರದರ್ಶನವಾಗಿದ್ದರೆ, ಒಂದು ಪಂದ್ಯದಲ್ಲಿ 112 ರನ್‌ಗಳಿಗೆ 10 ವಿಕೆಟ್‌ ಪಡೆದಿರುವುದು ಅವರ ಇದುವರೆಗಿನ ಅವರ ಅತ್ಯುತ್ತಮ ಪ್ರದರ್ಶನವಾಗಿದೆ. ಹಾಗೆಯೇ ದೇಶಿಯ ಮಟ್ಟದಲ್ಲಿ ಒಮ್ಮೆ 10 ವಿಕೆಟ್ ಪಡೆದ ಸಾಧನೆಯನ್ನೂ ಮಾಡಿದ್ದಾರೆ.

ಇನ್ನು ಲಿಸ್ಟ್ ಎ ನಲ್ಲಿ 28 ಪಂದ್ಯಗಳ 28 ಇನ್ನಿಂಗ್ಸ್‌ಗಳಲ್ಲಿ 48 ವಿಕೆಟ್‌ಗಳನ್ನು ಪಡೆದಿರುವ ಆಕಾಶ್ 6 ರನ್‌ಗಳಿಗೆ 3 ವಿಕೆಟ್ ಪಡೆದಿರುವುದು ಅವರ ಅತ್ಯುತ್ತಮ ಪ್ರದರ್ಶನವಾಗಿದೆ. ಇನ್ನು ಟಿ20 ಕ್ರಿಕೆಟ್‌ನಲ್ಲಿ 41 ಪಂದ್ಯಗಳನ್ನಾಡಿರುವ ಆಕಾಶ್ 48 ವಿಕೆಟ್‌ಗಳನ್ನು ಪಡೆದಿದ್ದಾರೆ. ಹಾಗೆಯೇ ಈ ಸ್ವರೂಪದಲ್ಲಿ 35 ರನ್‌ಗಳಿಗೆ 4 ವಿಕೆಟ್ ಪಡೆದಿರುವುದು ಅವರ ಅತ್ಯುತ್ತಮ ಪ್ರದರ್ಶನವಾಗಿದೆ.

ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುವ ಆಕಾಶ್ ದೀಪ್, 2022 ರಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದರು. ಆ ಆವೃತ್ತಿಯಲ್ಲಿ 4 ಪಂದ್ಯಗಳನ್ನು ಆಡಿದ ಆಕಾಶ್ 5 ವಿಕೆಟ್ ಪಡೆದಿದ್ದರು. ಹಾಗೆಯೇ 2023ರ ಐಪಿಎಲ್​ನಲ್ಲಿ 2 ಪಂದ್ಯಗಳನ್ನು ಆಡಿದ್ದ ಅವರು ಕೇವಲ 1 ವಿಕೆಟ್ ಮಾತ್ರ ಪಡೆದಿದ್ದರು.