ಮಂಗಳೂರಿನಲ್ಲಿ ನೈತಿಕ ಪೊಲೀಸ್‌ಗಿರಿ: ಇಬ್ಬರು ಬಜರಂಗದಳ ಕಾರ್ಯಕರ್ತರು ಪೊಲೀಸ್ ವಶಕ್ಕೆ

ಮಂಗಳೂರು (ನ.28): ಅನ್ಯಕೋಮಿನ ಜೋಡಿ ಮೇಲೆ ನೈತಿಕ ಪೊಲೀಸ್‌ಗಿರಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಂಡೇಶ್ವರ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ಬಜರಂಗದಳದ ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ನಿನ್ನೆ (ನವೆಂಬರ್ 27) ಮಂಗಳೂರಿನ ಮೊರ್ಗನ್ಸ್ ಗೇಟ್ ಬಳಿ‌ ಅನ್ಯಕೋಮಿನ ಯುವಕನೊಂದಿಗೆ ಚಿಕ್ಕಮಗಳೂರಿನ ಯುವತಿ ಸುತ್ತಾಡುತ್ತಿದ್ದಾಗ ಬಜರಂಗದಳದ ಕಾರ್ಯಕರ್ತರು ಅಡ್ಡಗಟ್ಟಿ ತರಾಟೆಗೆ ತೆಗೆದುಕೊಂಡಿದ್ದರು. ಈ ಸಂಬಂಧ ಅಕ್ಷಯ್ ಮತ್ತು ಶಿಬಿನ್ ಎನ್ನುವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.

ಮಂಗಳೂರಿನ ಮಂಕಿಸ್ಟ್ಯಾಂಡ್ ಬಳಿಯ ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ನಿನ್ನೆ(ನವೆಂಬರ್ 27) ಬೈಕ್​ನಲ್ಲಿ ಸುತ್ತಾಡುತ್ತಿದ್ದರು. ಇದನ್ನು ಗಮನಿಸಿದ ಬಜರಂಗದಳದ ಕಾರ್ಯಕರ್ತರು, ಬೈಕ್​ನಲ್ಲಿ ಫಾಲೋ ಮಾಡಿ ಯುವಕ, ಯುವತಿಯನ್ನು ಅಡ್ಡಗಟ್ಟಿ ತರಾಟೆ ತೆಗೆದುಕೊಂಡಿದ್ದರು.

ಈ ವೇಳೆ ಎರಡೂ ಕೋಮಿನ ಯುವಕರು ಸ್ಥಳದಲ್ಲಿ ಜಮಾಯಿಸಿದ್ದು, ತಂಡಗಳ ನಡುವೆ ಮಾತಿನ ಚಕಮಕಿ ನಡೆದಿತ್ತು. ಬಳಿಕ ಸ್ಥಳಕ್ಕೆ ಆಗಮಿಸಿದ ಪಾಂಡೇಶ್ವರ ಠಾಣೆಯ ಪೊಲೀಸರು ಗುಂಪು ಚದುರಿಸಿದ್ದರು.