ಕೆಎಸ್​​ಆರ್​ಟಿಸಿ ಬಸ್ ಅಪಘಾತ: ನಮ್ಮ ಮನೆ ದೇವರೆ ಜೀವ ಉಳಿಸಿದ್ದಾನೆ ಎಂದ ಮಹಿಳೆ

ನೆಲಮಂಗಲ ನ.26: ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್​ಗೆ ಕೆಎಸ್​ಆರ್​ಟಿಸಿ ಬಸ್ ಡಿಕ್ಕಿ ಹೊಡೆದಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಮಾದವಾರ ಬಳಿಯ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ನಡೆದಿದೆ. ಅಪಘಾತಕ್ಕೀಡಾದ ಕೆಎಸ್​ಆರ್​ಟಿಸಿ ಬಸ್​ನಲ್ಲಿ 20 ಪ್ರಯಾಣಿಕರಿದ್ದರು. ಬಸ್​ನಲ್ಲಿ ಮುಂದೆ ಕುಳಿತಿದ್ದ ಮಹಿಳೆಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಎಸ್​ಆರ್​ಟಿಸಿ ಬಸ್ ಬೆಂಗಳೂರಿನಿಂದ ಸೋಮವಾರಪೇಟೆಗೆ ತೆರಳುತ್ತಿತ್ತು.

ಡಿವೈಡರ್​ಗೆ ಡಿಕ್ಕಿ ನಿಂತಿರುವ ಕೆಎಸ್​ಆರ್​ಟಿಸಿ ಬಸ್ ಹೊಡೆದು ರಸ್ತೆ ಮಧ್ಯೆ ನಿಂತಿದ್ದು, ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡುತ್ತಿದ್ದಾರೆ. ಕೆಲಹೊತ್ತಿನ ನಂತರ ಪೊಲೀಸರು ಬಿಎಂಆರ್​ಸಿಎಲ್​ ಕ್ರೇನ್ ಮೂಲಕ ಬಸ್ ತೆರವುಗೊಳಿಸಿದರು. ನೆಲಮಂಗಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಒವರ್ ಟೇಕ್ ಮಾಡಲು ಹೋಗಿ ಬಸ್ ಅಪಘಾತ: ಪ್ರಯಾಣಿಕ ಲತಾ

ಲಾರಿ ಒವರ್ ಟೇಕ್ ಮಾಡಲು ಹೋಗಿ ಈ ರೀತಿ ಬಸ್ ಅಪಘಾತವಾಗಿದೆ. ಚಾಲಕನ ನಿಯಂತ್ರಣದಿಂದ ನಾವೆಲ್ಲರೂ ಬಚಾವ್ ಆಗಿದ್ದೇವೆ. ಮನೆ ದೇವರ ದರ್ಶನಕ್ಕೆ ಹೋಗುತ್ತಿದ್ದಾಗ ಈ ರೀತಿಯಲ್ಲಿ ಆಗಿದೆ. ನಮ್ಮ ಮನೆ ದೇವರೆ ನಮ್ಮ ಜೀವ ಉಳಿಸಿದ್ದಾನೆ ಎಂದು ಲಗ್ಗೆರೆಯ ಪ್ರಯಾಣಿಕ ಲತಾ ಅವರು ಹೇಳಿದ್ದಾರೆ.

ನಮ್ಮ ಬಸ್ಸಿಗೆ ಲಾರಿ ಡಿಕ್ಕಿಯಾಗುತ್ತಿತ್ತು: ಬಸ್​ ಚಾಲಕ

ರೈಟ್ ಸೈಡ್ ಬಸ್ ಚಾಲನೆ ಮಾಡಿಕೊಂಡು ಹೋಗುತ್ತಿದ್ದೆ ಬಿಬಿಎಂಪಿ ಕಸದ ಲಾರಿ ಚಾಲಕ ವೇಗವಾಗಿ ನಿರ್ಲಕ್ಷ್ಯತನದಿಂದ ಚಾಲನೆ ಮಾಡುತ್ತಿದ್ದನು. ನಮ್ಮ ಬಸ್ಸಿಗೆ, ಲಾರಿಗೆ ಡಿಕ್ಕಿಯಾಗುತ್ತಿತ್ತು ಅದನ್ನ ತಪ್ಪಿಸಲು ಹೋಗಿ ಅಪಘಾತವಾಗಿದೆ. ಅದೃಷ್ಟವಶಾತ್ ಬಸ್​ ಕಂಟ್ರೋಲ್​ಗೆ ಬಂದಿದ್ದರಿಂದ ಯಾರಿಗೂ ಗಂಭೀರ ತರಹದ ರೀತಿಯಲ್ಲಿ ಏನೂ ಆಗಿಲ್ಲ, ಮುಂದೆ ಕೂತಿದ್ದ ಮಹಿಳೆಗೆ ಕೈ ಗಾಯವಾಗಿತ್ತು ಅಂಬ್ಯೂಲನ್ಸ್ ಮುಖಾಂತರವಾಗಿ ಅಸ್ಪತ್ರೆಗೆ ಕಳಿಸಿದ್ದೇವೆ ಎಂದು ಬಸ್ ಚಾಲಕ ಸಂತೋಷ್ ಹೇಳಿದರು.

ಮೊದಲ ಬಾರಿ ನನಗೆ ಈ ತರಹ ಆಗಿದೆ: ಪ್ರಯಾಣಿಕ ಪ್ರೇಮಾ

ರಸ್ತೆ ತಡೆಗೋಡೆಯಿಂದಾಗಿ ನಾವೆಲ್ಲರೂ ಬದುಕುಳಿದಿದ್ದೇವೆ. ಮೆಜೆಸ್ಟಿಕ್​ನಿಂದ ಬಸ್​ ಬರುತ್ತಿದ್ದು, ನಾನು ನಿದ್ದೆ ಮಾಡುತ್ತಿದ್ದೆ. ಜನರೆಲ್ಲ ಕೂಗಾಡುತ್ತಿದ್ದರು. ಆಗ ನನಗೆ ಕೈಕಾಲು ನಡುಗುತ್ತಿತ್ತು. ಮೊದಲ ಬಾರಿ ನನಗೆ ಈತರಹ ಆಗಿದೆ ತುಂಬಾ ಭಯ ಆಗಿದೆ ಎಂದು ಪ್ರಯಾಣಿಕ ಪ್ರೇಮಾ ಹೇಳಿದರು. ಚಾಲಕ ನಮ್ಮನ್ನೇಲ್ಲ ಕಾಪಾಡಿದ್ದಾರೆ, ಅಷ್ಟೇ ನಾವೆಲ್ಲರೂ ಉಳಿಯೋದಿಲ್ಲ ಅಂದುಕೊಂಡಿದ್ವಿ ಎಂದು ಪ್ರಯಾಣಿಕ ಪ್ರಮೀಳಾ ಹೇಳಿದ್ದಾರೆ.